ಕೇರಳ ಗಡಿ ತೆರವು: ದೇವೇಗೌಡ್ರ ಪತ್ರಕ್ಕೆ, ಬಿಎಸ್ವೈ ಎಂತಹಾ ಮುತ್ಸದ್ದಿತನದ ಉತ್ತರ!
ಬೆಂಗಳೂರು, ಏಪ್ರಿಲ್ 5: ಕೊರೊನಾ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ರಾಜಕೀಯ ಅನುಭವವನ್ನೆಲ್ಲಾ ಧಾರೆ ಎರೆಯುತ್ತಿದ್ದಾರೆ.
ಸತತ ಮೀಟಿಂಗ್, ಜಿಲ್ಲಾವಾರು ಪರಿಸ್ಥಿತಿಯ ಅವಲೋಕವನ್ನು ಮಾಡುತ್ತಿರುವ ಯಡಿಯೂರಪ್ಪ, ಟಾಸ್ಕ್ ಫೋರ್ಸ್ ನಲ್ಲಿ ಇಲ್ಲದ, ಸಚಿವರನ್ನು, ಉಸ್ತುವಾರಿ ಜಿಲ್ಲೆ ಬಿಟ್ಟು ಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
ಸಿಎಂ ಬಿಎಸ್ವೈ ಕಾರ್ಯಶೈಲಿಯನ್ನು ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕಿ
ಕರ್ನಾಟಕಕ್ಕೆ ಎಂಟ್ರಿ ಕೊಡುವ ಕಾಸರಗೋಡು - ಮಂಗಳೂರು ಗಡಿಯನ್ನು ಮುಚ್ಚಿರುವ ವಿಚಾರದಲ್ಲಿ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆರೋಗ್ಯ ತುರ್ತು ಸೇವೆಗೆ ಗಡಿಯನ್ನು ತೆರವು ಮಾಡಬೇಕೆಂದು ಗೌಡ್ರು ಮನವಿ ಮಾಡಿದ್ದರು.
Fact Check:ಕೊರೊನಾ ಹರಡಲು ದೆಹಲಿ ಮಸೀದಿಯಲ್ಲಿ ಸಾಮೂಹಿಕ ಸೀನುವಿಕೆ!
ಮಾಜಿ ಪ್ರಧಾನಿಗಳ ಪತ್ರಕ್ಕೆ ಯಡಿಯೂರಪ್ಪ ಅತ್ಯಂತ ಪ್ರಜ್ಞಾಪೂರ್ವಕವಾಗಿ ಮತ್ತು ಗೌರವಯುತವಾಗಿ, 'ಗಡಿ ಬಂದ್ ತೆರವು ಸಾಧ್ಯವಿಲ್ಲ' ಎಂದಿದ್ದಾರೆ. ಗೌಡ್ರಿಗೆ ಸಿಎಂ ಬರೆದ ಪತ್ರದ ಆಯ್ದ ಅಂಶ ಇಂತಿದೆ:
ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣ ರಕ್ಷಣೆ ನನ್ನ ಸರಕಾರದ ಹೊಣೆ
"ದಿನಾಂಕ 31.03.2020ರಂದು ನಮ್ಮ ಸರಕಾರಕ್ಕೆ ತಾವು ಬರೆದ ಪತ್ರ ತಲುಪಿದೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣ ರಕ್ಷಣೆ ನನ್ನ ಸರಕಾರದ ಹೊಣೆ. ಗಡಿ ಮುಚ್ಚುವ ನಿರ್ಧಾರ ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರವಲ್ಲ. ಪೂರಕ ದಾಖಲೆಗಳನ್ನು ಅವಲೋಕಿಸಿ, ನನ್ನ ಸರಕಾರ ತೆಗೆದುಕೊಂಡಿರುವ ಪ್ರಜ್ಞಾವಂತ ನಿರ್ಧಾರ ಇದಾಗಿದೆ" - ಗೌಡ್ರಿಗೆ, ಬಿಎಸ್ವೈ ಪತ್ರ.
ಕಾಸರಗೋಡು - ಮಂಗಳೂರು ಗಡಿ
"ಕಾಸರಗೋಡು ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ವಿಚಾರ, ತಮಗೂ ತಿಳಿದಿರುವ ವಿಚಾರ. ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ಇತರ ಆರೋಗ್ಯ ಸಂಬಂಧಿ ಸಂಸ್ಥೆಗಳು ನೀಡಿದ ವರದಿ, ಪೂರಕ ದಾಖಲೆಗಳನ್ನು ಆಧರಿಸಿ, ಗಡಿ ದಿಗ್ಬಂಧನದ ನಿರ್ಧಾರಕ್ಕೆ ಬರಲಾಗಿದೆ" - ಗೌಡ್ರಿಗೆ, ಬಿಎಸ್ವೈ ಪತ್ರ.
ಗಡಿ ತೆರವುಗೊಳಿಸಲು ಬಿಎಸ್ವೈಗೆ ಗೌಡ್ರ ಪತ್ರ
"ಒಂದು ವೇಳೆ ಗಡಿ ತೆರವುಗೊಳಿಸಿದರೆ ನನ್ನ ರಾಜ್ಯದ ನೆಮ್ಮದಿ ಹಾಳಾಗುತ್ತದೆ. ಮೃತ್ಯವನ್ನು ನಾವೇ ಆಲಂಗಿಸಿಕೊಂಡಂತಾಗುತ್ತದೆ. ಕೇರಳದಲ್ಲಿ ವಾಸಿಸುತ್ತಿರುವ ಸಹೋದರ-ಸಹೋದರಿಯರ ಹಿತ ಕಾಪಾಡುವ ಬಗ್ಗೆ ನನಗೂ ಅಂತಃಕರಣವಿದೆ. ಆದರೆ, ಕೊರೊನಾ ಮಹಾಮಾರಿ ಕ್ಷಣಮಾತ್ರದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಹಾಗಾಗಿ, ಗಡಿ ತೆರವು ಮಾಡಿದರೆ, ಎರಡೂ ರಾಜ್ಯದ ನೆಮ್ಮದಿ ಹಾಳು ಮಾಡಿದಂತಾಗುತ್ತದೆ" - ಗೌಡ್ರಿಗೆ, ಬಿಎಸ್ವೈ ಪತ್ರ.
ಮುತ್ಸದ್ದಿತನದ ಉತ್ತರ ನೀಡಿದ ಬಿಎಸ್ವೈ
"ಮಾನವೀಯತೆಯ ದೃಷ್ಟಿಯಿಂದ ಗಡಿ ತೆರವುಗೊಳಿಸಬೇಕು ಎನ್ನುವ ತಮ್ಮ ಮತ್ತು ಸಿದ್ದರಾಮಯ್ಯನವರ ಅಭಿಪ್ರಾಯಕ್ಕೆ ನನ್ನ ಗೌರವವಿದೆ. ಗಡಿ ತೆರವುಗೊಳಿಸಲು ಸಾಧ್ಯವಿಲ್ಲ ಎನ್ನುವ ನನ್ನ ಸರಕಾರದ ನಿರ್ಧಾರದ ಹಿಂದೆ ಬಲವಾದ ಕಾರಣವಿದೆ ಎನ್ನುವುದನ್ನು ತಾವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಂಬಿದ್ದೇನೆ. ಕೂರೊನಾ ವಿರಾಟ ಸ್ವರೂಪದ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ನೀಡಿದ ಸಹಕಾರ ಗಮನಾರ್ಹ. ನಿಮ್ಮಗಳ ಸಹಕಾರ ಮುಂದಿನ ದಿನಗಳಲ್ಲೂ ದೊರೆಯಲಿದೆ ಎನ್ನುವ ನಂಬಿಕೆ, ಆಶಯ ನನಗಿದೆ" - ಗೌಡ್ರಿಗೆ, ಬಿಎಸ್ವೈ ಪತ್ರ.