ಬಿಎಸ್ವೈ ಸರಕಾರಕ್ಕೆ ಮತ್ತೆ ವ್ಯಂಗ್ಯವಾಗಿ ಕುಮಾರಸ್ವಾಮಿ ಕೌಂಟರ್
ಬೆಂಗಳೂರು, ಜ 9: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದ ಕಿಡಿಕಾರುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈಗ ಬಿಜೆಪಿ ವಿರುದ್ದವೂ ತಿರುಗಿಬೀಳುತ್ತಿರುವುದು ಗೊತ್ತಿರುವ ವಿಚಾರ.
ಯಾವಾಗ, ಜೆಡಿಎಸ್ ಪಾರ್ಟಿ ಎನ್ಡಿಎ ಮೈತ್ರಿಕೂಟದ ಜೊತೆ ಸೇರಿಕೊಳ್ಲಲಿದೆ, ಕುಮಾರಸ್ವಾಮಿಯವರು ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎನ್ನುವ ವದಂತೆ ಹೆಚ್ಚಾದಂತೆ, ಕುಮಾರಸ್ವಾಮಿಯವರು ಬಿಜೆಪಿ ಜೊತೆ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದರು.
ಸಂಪುಟ ವಿಸ್ತರಣೆ: ಇದ್ದಿದ್ದನ್ನು ಇದ್ದಂಗೆ ಒಪ್ಪಿಕೊಂಡ ಸಿಎಂ ಯಡಿಯೂರಪ್ಪ
ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಗೆ ಭೂಮಿಪೂಜೆಯನ್ನು ಸಿಎಂ ಬಿಎಸ್ವೈ ಇಂದು (ಜ 9) ನೆರವೇರಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಇದು ನನ್ನ ಸರಕಾರದ ಹಳೆಯ ಪ್ರಾಜೆಕ್ಟ್ ಎಂದಿದ್ದಾರೆ.
ಇತ್ತೀಚೆಗೆ ನಡೆದ ಜೆಡಿಎಸ್ ಯುವ ಘಟಕದ ಸಮಾವೇಶ ಮತ್ತು ಇದಾದ ನಂತರದ ಪಕ್ಷದ ಶಾಸಕರ ಸಭೆಯಲ್ಲಿ, ಬಿಜೆಪಿ ಜೊತೆಗೆ ಮೈತ್ರಿಯ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಮುಖಂಡರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು. ಎಚ್ಡಿಕೆ ಮಾಡಿರುವ ಟ್ವೀಟ್ ಹೀಗಿದೆ:
ಯಡಿಯೂರಪ್ಪ ಅವರು ಆ ಕ್ಲಸ್ಟರ್ಗೆ ಇಂದು ಮರು ಚಾಲನೆ ನೀಡುತ್ತಿದ್ದಾರೆ
"ಚೀನಾ ಹಿಡಿತದಲ್ಲಿರುವ ಜಾಗತಿಕ ಉತ್ಪಾದನೆ ಮಾರುಕಟ್ಟೆಯಲ್ಲಿ ಭಾರತವೂ ಪಾಲು ಪಡೆಯಬೇಕೆಂಬ ಉದ್ದೇಶದಿಂದ ನಾನು ಸಿಎಂ ಆಗಿದ್ದಾಗ 'Compete With China' ರೂಪಿಸಲಾಗಿತ್ತು. ಇದಕ್ಕಾಗಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ರಚಿಸಿ, ₹500 ಕೋಟಿ ಹಣ ನೀಡಲಾಗಿತ್ತು. ಸಿಎಂ ಯಡಿಯೂರಪ್ಪ ಅವರು ಆ ಕ್ಲಸ್ಟರ್ಗೆ ಇಂದು ಮರು ಚಾಲನೆ ನೀಡುತ್ತಿದ್ದಾರೆ!" - ಕುಮಾರಸ್ವಾಮಿ ಮಾಡಿರುವ ಟ್ವೀಟ್.
ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ
"ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆಟಿಕೆ ಉತ್ಪಾದನಾ ಘಟಕ ಆರಂಭಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ 'ಆತ್ಮನಿರ್ಭರ' ಕಲ್ಪನೆ ಜಾರಿಗೆ ತರುವುದಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆಯನ್ನು ಹೊಂದಿತ್ತು. ಅದರ ಭಾಗವಾಗಿಯೇ ಚೀನಾಕ್ಕೆ ಸೆಡ್ಡು ಹೊಡೆಯುವ ಯೋಜನೆಗಳನ್ನು ರೂಪಿಸಿತ್ತು" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ನನ್ನ ಯೋಜನೆಯನ್ನು ಅನುಸರಿಸುತ್ತಿರುವ ಯಡಿಯೂರಪ್ಪ
"7 ಲಕ್ಷ ಕೋಟಿ ಮೊತ್ತದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪ್ರಬಲ ಹಿಡಿತ ಹೊಂದಿದೆ. ಇದರಲ್ಲಿ ಅಲ್ಪ ಪಾಲು ಕಸಿದರೂ ನಮ್ಮವರಿಗೆ ಉದ್ಯೋಗ ನೀಡಬಹುದು, ಆದಾಯ ಕೊಡಿಸಬಹುದು ಎಂಬುದು ನನ್ನ ಸರ್ಕಾರದ ದೂರದೃಷ್ಟಿಯಾಗಿತ್ತು. ಅದಕ್ಕೆ ಮರು ಚಾಲನೆ ನೀಡುತ್ತಿರುವ, ನನ್ನ ಯೋಜನೆಯನ್ನು ಅನುಸರಿಸುತ್ತಿರುವ ಯಡಿಯೂರಪ್ಪ ಅವರಿಗೆ ಆಭಿನಂದನೆಗಳು"ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಈ ನೆಲದ ಸ್ವಾಭಿಮಾನ ಸಾರುವ ಯೋಜನೆಗಳು
"ನನ್ನ ಸರ್ಕಾರದ ಅವಧಿಯಲ್ಲಿ ಇಂಥ ಹಲವು ಕಾರ್ಯಕ್ರಮಗಳನ್ನು ಕೊಡಲಾಗಿದೆ. ಅವುಗಳಲ್ಲಿ ಈ ನೆಲದ ಸ್ವಾಭಿಮಾನ ಸಾರುವ ಯೋಜನೆಗಳೂ ಇವೆ ಎಂಬುದು ಗಮನಾರ್ಹ. ಅವುಗಳನ್ನು ಮರಳಿ ಜಾರಿಗೆ ತರುವುದರ ಕಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಂತನೆ ನಡೆಸುವುದು ಅತ್ಯಗತ್ಯ ನನ್ನ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಆದಾಯ ಸಿಗುವ ಅಂಶಗಳು ಪ್ರಧಾನ"ಎಂದು ಕುಮಾರಸ್ವಾಮಿ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.