ತಮ್ಮ ಬಜೆಟ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನು ಹೇಳಿದ್ರು?
ಬೆಂಗಳೂರು, ಮಾ. 08: ಹಲವು ಸವಾಲುಗಳ ಮಧ್ಯೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಆ ಮೂಲಕ ಅತಿಹೆಚ್ಚು ಬಜೆಟ್ ಮಂಡಿಸಿದ ರಾಜ್ಯದ ಹಣಕಾಸು ಸಚಿವರ ಪಟ್ಟಿಗೆ ಯಡಿಯೂರಪ್ಪ ಅವರು ಸೇರಿದ್ದಾರೆ. ಇಷ್ಟೇ ಅಲ್ಲ ಪ್ರಮುಖ ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿ ಬಜೆಟ್ ಓದಿ ಇತಿಹಾಸ ನಿರ್ಮಿಸಿದ್ದಾರೆ.
ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಈ ಸಾಲಿನ ಬಜೆಟ್ ಮಂಡಿಸಿದ್ದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ. ಜೊತೆಗೆ ಎದುರಿಸಿದ ಸವಾಲುಗಳನ್ನು ನಾಡಿನ ಜನರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಬಜೆಟ್ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮಂಡಿಸಿರುವ ಬಜೆಟ್ ಅವರಿಗೆ ತೃಪ್ತಿ ತಂದಿದೆಯಾ? ತಮ್ಮ ಬಜೆಟ್ ಕುರಿತು ಅವರು ಏನು ಹೇಳಿದ್ದಾರೆ? ಆ ಎಲ್ಲ ಮಾಹಿತಿ ಇಲ್ಲಿದೆ.
ಕೊನೆಯ 3 ತಿಂಗಳಲ್ಲಿ ಆದಾಯ ಹೆಚ್ಚಿದೆ
ಇಂದು ನಾನು 8ನೇ ಬಾರಿಗೆ ಆಯವ್ಯಯ ಮಂಡಿಸಿದ್ದೇನೆ. ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ರೂಪಿಸಲಾದ ಆಯವ್ಯಯ ಇದು. ನೈಸರ್ಗಿಕ ವಿಕೋಪ, ಪ್ರವಾಹ ಮತ್ತು ಕೋವಿಡ್ 19ರ ಕಾರಣ ಇಡೀ ರಾಜ್ಯ ತಲ್ಲಣಗೊಂಡು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಲಾಕ್ಡೌನ್ ಮತ್ತಿತರ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ನಡೆಯದೆ ರಾಜಸ್ವ ಸಂಗ್ರಹಣೆಗೆ ದೊಡ್ಡ ಪೆಟ್ಟು ಬಿದ್ದಿತ್ತು ಎಂದು ಎದುರಿಸಿದ ಸವಾಲುಗಳನ್ನು ಸಿಎಂ ಯಡಿಯೂರಪ್ಪ ಅವರು ವಿವರಿಸಿದ್ದಾರೆ.
ಕರ್ನಾಟಕ ಬಜೆಟ್ 2021: ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ? ಮುಖ್ಯಾಂಶಗಳು
ಧೃತಿಗೆಡದೆ ಬದ್ಧ ವೆಚ್ಚಗಳನ್ನು ಅಂದರೆ ಸಂಬಳ, ಪಿಂಚಣಿ, ಸಾಲ ಮರುಪಾವತಿ ಇತ್ಯಾದಿ ಸಕಾಲದಲ್ಲಿ ಪಾವತಿಸಿ ಅಭಿವೃದ್ಧಿಗೂ ಅನುದಾನ ಒದಗಿಸಿದ್ದೇನೆ. ಆಯವ್ಯಯದ ಅಂದಾಜಿಗೆ ಎದುರಾಗಿ ಶೇ. 94 ರಷ್ಟು ವೆಚ್ಚವನ್ನು ಸಾಧಿಸುವ ಭರವಸೆ ನನಗಿದೆ. ಸುಮಾರು ಶೇ. 85 ರಷ್ಟು ಸಾಧನೆಯಾಗಬಹುದೆಂದು ಅಂದಾಜಿಸಿದ್ದೆವು. ಅದಕ್ಕೂ ಹೆಚ್ಚು ಸಾಧನೆಯಾಗಿರುವುದು ನನಗೆ ಸಮಾಧಾನ ತಂದಿದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ತುಸು ಸುಧಾರಿಸಿದ್ದರಿಂದ ಇದು ಸಾಧ್ಯವಾಗಿದೆ.
ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ದೃಷ್ಟಿಯಿಂದ ಇದು ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಆಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಬಜೆಟ್ ರೂಪಿಸುವ ಸಾಹಸ ಮಾಡಿದ್ದೇನೆ.
ಬಜೆಟ್ ಗಾತ್ರ ಕಳೆದ ವರ್ಷಕ್ಕಿಂತ ಶೇ. 3.5 ರಷ್ಟು ಹೆಚ್ಚು
ಕಳೆದ ವರ್ಷದ ಆಯವ್ಯಯದ ಗಾತ್ರಕ್ಕಿಂತಲೂ 8,314 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ಈ ವರ್ಷ 2,46,207 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲದಾಗಿದೆ. ಕಳೆದ ವರ್ಷ 2,37,893 ಕೋಟಿ ರೂ.ಗಳ ಬಜೆಟ್ ಮಂಡನೆ ಮಾಡಿದ್ದೆ. ಕಳೆದ ವರ್ಷಕ್ಕೆ ಹೋಲಿಸಿದೆ ಈ ವರ್ಷ ಶೇ. 3.5 ರಷ್ಟು ಹೆಚ್ಚಳವಾಗಿದೆ. ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಇದಾಗಿದೆ. ಯಾವುದೇ ತೆರಿಗೆ ಹೆಚ್ಚಳ ಇಲ್ಲ ಮತ್ತು ಹೊಸ ತೆರಿಗೆ ಪ್ರಸ್ತಾಪವೂ ಇಲ್ಲ. ಆಯವ್ಯಯದಲ್ಲಿ ಎಲ್ಲ ವರ್ಗಗಳಿಗೆ, ಎಲ್ಲ ವಲಯಗಳಿಗೆ ಹಾಗೂ ಎಲ್ಲ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.
ಮಹಿಳೆಯರಿಗೆ ವಿಶೇಷ ಕೊಡುಗೆಗಳು
ಮಹಿಳಾ ದಿನಾಚರಣೆಯಂದು ಮಂಡಿಸಿರುವ ಈ ಆಯವ್ಯಯದಲ್ಲಿ ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ, ಉದ್ಯಮಶೀಲತೆ ಮತ್ತು ಅಭ್ಯುದಯಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ. 4ರ ರಿಯಾಯಿತಿ ದರದಲ್ಲಿ 2 ಕೋಟಿ ರೂ. ವರೆಗೆ ಸಾಲ ಸೌಲಭ್ಯ. "ಸಂಜೀವಿನಿ" ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆರು ಸಾವಿರ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವು; 60 ಸಾವಿರ ಮಹಿಳೆಯರಿಗೆ ಅನುಕೂಲವಾಗಲಿ ಎಂದಿದ್ದಾರೆ.
ಕರ್ನಾಟಕ ಬಜೆಟ್ 2021: ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಸಿಕ್ಕಿದ್ದೇನು?
ಶಿಶುಪಾಲನಾ ಕೇಂದ್ರಗಳಾಗಿ ಮೇಲ್ದರ್ಜೆಗೆ
ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುವುದು. ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ‘ವನಿತಾ ಸಂಗಾತಿ' ಯೋಜನೆ ಜಾರಿ. ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ ಮಹಿಳಾ ಸಬಲೀಕರಣ ಮತ್ತು ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಜನಸ್ನೇಹಿ ಸೌಲಭ್ಯಗಳು
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಡಿಬಿಟಿ ಮೂಲಕವೇ ಆರ್ಥಿಕ ನೆರವು ನೀಡಲು ಕ್ರಮಕೈಗೊಳಲಾಗಿದೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್ ಮಾಡಲಾಗಿದೆ. ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆ ಸರಳೀಕರಣ. ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗಿದೆ. ಮಾಹಿತಿ ತಂತ್ರಜ್ಞಾನ ವಲಯಕ್ಕೆ ಉತ್ತೇಜನ ನೀಡಲು ಸ್ಟಾರ್ಟ್-ಅಪ್ ನೀತಿ ಪರಿಷ್ಕರಣೆ ಮಾಡಲಾಗಿದ್ದು ಸೈಬರ್ ಭದ್ರತಾ ಕಾರ್ಯನೀತಿ ಹಾಗೂ ದತ್ತಾಂಶ ಕೇಂದ್ರ ಕಾರ್ಯನೀತಿ ರೂಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕರ್ನಾಟಕ ಬಜೆಟ್ 2021: ಶಿಕ್ಷಣ ಕ್ಷೇತ್ರಕ್ಕೆ ಯಡಿಯೂರಪ್ಪ ಘೋಷಿಸಿದ್ದೇನು?
ಆರು ವಲಯಗಳಾಗಿ ವಿಂಗಡಣೆ
ಮುಂಗಡಪತ್ರವನ್ನು ಆರು ವಲಯಗಳಾಗಿ ಗಡಿಸಲಾಗಿದ್ದು, ನಿಗದಿಪಡಿಸಿದ ಅನುದಾನದ ವಿವರ ಹೀಗಿದೆ
1. ಕೃಷಿ ಮತ್ತು ಪೂರಕ ಚಟುವಟಿಕೆಗಳು: 31,028 ಕೋಟಿ ರೂ.
2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: 62,150 ಕೋಟಿ ರೂ.
3. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ: 52,529 ಕೋಟಿ ರೂ.
4. ಬೆಂಗಳೂರು ಸಮಗ್ರ ಅಭಿವೃದ್ಧಿ: 7795 ಕೋಟಿ ರೂ.
5. ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ: 2645 ಕೋಟಿ ರೂ.
6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ: 52,519 ಕೋಟಿ ರೂ.
ಒಟ್ಟು ಬಜೆಟ್ ಗಾತ್ರದ ವಿವರ
ಈ ಬಾರಿ ಒಟ್ಟು ಆಯವ್ಯಯದ ಗಾತ್ರ 2,46,207 ಕೋಟಿ ರೂ.ಗಳಾಗಿವೆ. 2020-21ರಲ್ಲಿ ವಿತ್ತೀಯ ಕೊರತೆ 46,072 ಕೋಟಿ ರೂ. ಗಳಾಗಿತ್ತು. 2021-22ನೇ ಸಾಲಿಗೆ ಇದು 59,240 ಕೋಟಿ ರೂ. ಗಳಾಗಲಿದೆ. ಕಳೆದ ವರ್ಷ ರಾಜಸ್ವ ಹೆಚ್ಚಳ 143 ಕೋಟಿ ರೂ. ಗಳೆಂದು ಅಂದಾಜಿಸಲಾಗಿತ್ತು. ಈ ವರ್ಷ ರಾಜಸ್ವ ಕೊರತೆ 15,134 ಕೋಟಿ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಯಡಿಯೂರಪ್ಪ ಅವರು ವಿವರಿಸಿದ್ದಾರೆ.
ಒಟ್ಟು ಆದಾಯದ ವಿವರ ಹೀಗಿದೆ
ಸಾಲ ಸೇರಿ ಒಟ್ಟು ಆದಾಯ 2,43,734 ಕೋಟಿ ರೂ.ಗಳಾಗಿವೆ. ತರಿಗೆಗಳಿಂದ ಬರುವ ಆದಾಯ 1,72,271 ಕೋಟಿ ರೂ. ಗಳಾಗಲಿದ್ದು, ಕಳೆದ ವರ್ಷಕ್ಕಿಂತ 7,649 ಕೋಟಿ ರೂ. ಕಡಿಮೆ ಆಗಲಿದೆ. ಕಳೆದ ವರ್ಷ ತೆರಿಗೆಯೇತರ ಆದಾಯ 7,767 ಕೋಟಿ ರೂ. ಇತ್ತು. ಈ ವರ್ಷ ಅದು ಹೆಚ್ಚಾಗಿದ್ದು, 8,258 ಕೋಟಿ ರೂ. ಗಳಾಗಲಿದೆ. (ಶೇ. 6.3 ರ ಹೆಚ್ಚಳ) ಇದು ತೃಪ್ತಿ ತರುವ ಸಂಗತಿಯಾಗಿದೆ. ಈ ವರ್ಷ ಜಿಎಸ್ಟಿ ಪರಿಹಾರ ಹೊರತು ಪಡಿಸಿ ಅನುದಾನದ ರೂಪದಲ್ಲಿ ಕೇಂದ್ರ ಸರ್ಕಾರ 15,538 ಕೋಟಿ ರೂ. ಗಳನ್ನು ನೀಡಲಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚು ಎಂದು ಸಿಎಂ ವಿವರಿಸಿದರು.
Recommended Video