ಮಠಗಳಿಂದ ಹಿಂದೆ ಸರಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಬೆಂಗಳೂರು, ಮಾರ್ಚ್ 3: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬಹು ನಿರೀಕ್ಷೆಯ 2020-21ರ ಬಜೆಟ್ ಮಾರ್ಚ್ 5 ರಂದು ಮಂಡನೆಯಾಗಲಿದೆ. ಬಜೆಟ್ ಮೇಲಿನ ಅಧಿವೇಶನ ಬಿರುಸಿನಿಂದ ನಡೆದಿದೆ. ಆದರೆ, ಬಜೆಟ್ ಮೇಲಿನ ಚರ್ಚೆಗಿಂತ ವಿಜಯಪುರ ಶಾಸಕ ಯತ್ನಾಳ ವಿವಾದಾತ್ಮಕ ಹೇಳಿಕೆಗೆಯೇ ಸೋಮವಾರ ಸದನ ಬಲಿಯಾಯಿತು.
ಈ ಹಿಂದಿನ ಬಜೆಟ್ನಲ್ಲಿ ಮಠ ಮಾನ್ಯಗಳಿಗೆ ಉದಾರ ನೆರವು ನೀಡುತ್ತಿದ್ದ ಯಡಿಯೂರಪ್ಪ ಅವರು ಈ ಸಾರಿ ಮಠ ಮಾನ್ಯಗಳಿಗೆ ವಿಶೇಷ ನೆರವು ನೀಡುವುದರ ಕುರಿತು ತಟಸ್ಥ ನಿಲುವು ತಳೆಯಲಿದ್ದಾರೆ ಎನ್ನಲಾಗಿದೆ. ರಾಜ್ಯದ ಮಠಗಳಿಗೆ ಬಜೆಟ್ನಲ್ಲಿ ಹಣಕಾಸಿನ ನೆರವು ನೀಡಬೇಕು ಎಂಬ ಹೊಸ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದಿರಲು ಸಿಎಂ ನಿರ್ಧರಿಸಿದ್ದಾರೆ.
ಕರ್ನಾಟಕ ಬಜೆಟ್ ನಂತರ ಮದ್ಯ ಪ್ರಿಯರಿಗೆ ಆಘಾತ ಕಾದಿದೆ
ಪ್ರತಿವರ್ಷ ರಾಜ್ಯದ ನೂರಾರು ಮಠಗಳಿಗೆ ಮಠದ ಅಭಿವೃದ್ಧಿ ಎಂದು ಅನುದಾನಕ್ಕೆ ಸಿಎಂ ದುಂಬಾಲು ಬೀಳುತ್ತವೆ. ಅನೇಕ ಮಠಾಧೀಶರು ತಮ್ಮ ಪ್ರಭಾವ ಬಳಸಿ ಅನುದಾನ ಪಡೆಯುವಲ್ಲಿ ಸಫಲರಾಗುತ್ತಾರೆ. ಮಠಗಳಿಗೆ ಉದಾರ ನೆರವು ನೀಡಲು ಖ್ಯಾತಿ ಗಳಿಸಿರುವ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಿರುವುದರಿಂದ ಈಗ ಅನೇಕ ಮಠಾಧೀಶರು ತಮ್ಮ ತಮ್ಮ ಮಠಗಳಿಗೆ ಅನುದಾನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
ಮಠಗಳಿಗೆ ಹಣದ ಹೊಳೆ ಹರಿಸಿದ್ದರು
ಶರಣರ ಸಾಧು ಸಂತರ ನಾಡು ಎಂದು ಕರೆಯಿಸಿಕೊಳ್ಳುವ ಕರ್ನಾಟಕದಲ್ಲಿ ಸಾವಿರಾರು ಮಠಗಳಿವೆ. ಸಮಾಜದ ಅಭಿವೃದ್ದಿಗೋಸ್ಕರ ಕೆಲಸ ಮಾಡುವ ಮಠಗಳಿಗೆ ಸರ್ಕಾರದಿಂದ ನೆರವು ನೀಡುವ ಪದ್ದತಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. 2008 ರಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿದ ಯಡಿಯೂರಪ್ಪ ಆ ವರ್ಷದ ಬಜೆಟ್ ಹಾಗೂ ನಂತರದ ಮೂರು ಬಜೆಟ್ಗಳಲ್ಲಿ ಮಠಗಳಿಗೆ ಹಣದ ಹೊಳೆ ಹರಿಸಿದ್ದರು.
ಹಣಕಾಸು ಪರಿಸ್ಥಿತಿ ಸಮತೋಲನಗೊಳಿಸುವಲ್ಲಿ ಹೈರಾಣ
ಮಠಮಾನ್ಯಗಳಿಗೆ ಅನುದಾನ ನೀಡುವುದಕ್ಕೆ ಯಡಿಯೂರಪ್ಪನವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವುದೇ ಕಾರಣ ಎನ್ನಲಾಗುತ್ತಿದೆ. ಮೂಲಸೌಕರ್ಯ, ಕೃಷಿ ಹಾಗೂ ನೀರಾವರಿಗೆ ಬಜೆಟ್ನಲ್ಲಿ ಆದ್ಯತೆ ನೀಡಬೇಕಿರುವುದರಿಂದ ಸಿಎಂ ಹಣಕಾಸು ಪರಿಸ್ಥಿತಿ ಸಮತೋಲನಗೊಳಿಸುವಲ್ಲಿ ಹೈರಾಣರಾಗುತ್ತಿದ್ದಾರೆ. ಹೀಗಾಗಿ ಈ ಸಾರಿ ಮಠಗಳಿಗೆ ಅನುದಾನ ನೀಡಬೇಕು ಎಂಬ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಬಜೆಟ್ ನಲ್ಲಿ ರೈತರಿಗೆ ಬಂಪರ್ ಗಿಪ್ಟ್ ಎಂದ ಸಿಎಂ ಯಡಿಯೂರಪ್ಪ
15 ಸಾವಿರ ಕೋಟಿ ರುಪಾಯಿ ಬಂದಿಲ್ಲ
ಅನುದಾನ ಹಂಚಿಕೆ ಸಂಬಂಧ ಕೇವಲ ಮಠಗಳ ಬಗ್ಗೆ ಅಷ್ಟೇ ಸಿಎಂ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರದಿಂದ ಬರಬೇಕಾಗಿದ್ದ ರಾಜ್ಯದ ಪಾಲಿನ ಅನುದಾನ ಸುಮಾರು 15 ಸಾವಿರ ಕೋಟಿ ರುಪಾಯಿ ಬಾರದಿರುವುದು ಯಡಿಯೂರಪ್ಪನವರಿಗೆ ತಲೆ ನೋವು ಹೆಚ್ಚಾಗಲು ಕಾರಣವಾಗಿದೆ. ಇದರಲ್ಲಿ ಅರ್ಧವಾದರೂ ಕೊಡಿ ಎಂದು ಕೇಂದ್ರಕ್ಕೆ ಅವರು ಪತ್ರ ಬರೆದು ಮೊರೆ ಇಟ್ಟಿದ್ದಾರೆ.
ಭೂಮಿ ಮಾರಿ, ಬೊಕ್ಕಸ ತುಂಬಬೇಕಂತೆ
ಕೊರತೆ ಬಜೆಟ್ ನೀಗಿಸುವುದಕ್ಕೆ ಹೆಣಗಾಡುತ್ತಿರುವ ಯಡಿಯೂರಪ್ಪ ಅವರು ರಾಜ್ಯದಲ್ಲಿ ಒತ್ತುವರಿಯಾಗಿ, ವಾಪಸ್ ಸರ್ಕಾರದ ಸುಪರ್ದಿಗೆ ಬಂದ ಭೂಮಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಬೊಕ್ಕಸ ತುಂಬುವ ತಯಾರಿ ನಡೆಸಿದ್ದಾರೆ ಎಂದು ವರದಿಗಳು ಬಂದಿವೆ. ಈ ಮೂಲಕವೇ ಅವರು 6000 ರಿಂದ 7000 ಕೋಟಿ ರುಪಾಯಿ ಸಂಗ್ರಹಣೆ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾಳೆಯ ಬಜೆಟ್ನಲ್ಲಿ ವಿವಿಧ ವಲಯಗಳಿಗೆ ನೀಡುತ್ತಿರುವ ಹೆಚ್ಚುವರಿ ಸಬ್ಸಿಡಿಗಳನ್ನೂ ಕಡಿತಗೊಳಿಸಲಿದ್ದಾರೆ ಎನ್ನಲಾಗಿದೆ.