ಕರ್ನಾಟಕವೇ ನಂ.1: ಲಸಿಕೆ, ಪರೀಕ್ಷೆಯಲ್ಲಿ ಇಳಿಕೆ, ಸೋಂಕು ಮತ್ತು ಸಾವಿನಲ್ಲಿ ಏರಿಕೆ!?
ಬೆಂಗಳೂರು, ಮೇ 11: ರಾಜನ ಕುದುರೆ ಬರುಬರುತ್ತಾ ಕತ್ತೆ ಆಯ್ತು ಅನ್ನೋ ಮಾತು ಕೇಳಿದ್ದೀರಿ ಅಲ್ಲವೇ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಅಟ್ಟಹಾಸದ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ಕಥೆಯೂ ಈಗ ಅಂತೆಯೇ ಆಗಿದೆ.
Recommended Video
5 ರಿಂದ 10 ಸಾವಿರದ ಆಸುಪಾಸಿನಲ್ಲಿದ್ದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದು ಹಂತದಲ್ಲಿ 50,000 ಗಡಿಯನ್ನೂ ದಾಟಿ ಆಗಿದೆ. ದೇಶದಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳನ್ನು ದಾಖಲಿಸುತ್ತಿದ್ದ ಮಹಾರಾಷ್ಟ್ರವನ್ನು ಇದೀಗ ಕರ್ನಾಟಕ ಹಿಂದಿಕ್ಕಿದೆ.
ಆಕ್ಸಿಜನ್ ಪೂರೈಕೆ; ಕರ್ನಾಟಕಕ್ಕೆ ಕೊಡುಗೆ ಕೊಟ್ಟ ಕೇಂದ್ರ
ಭಾರತದಲ್ಲಿ ಒಂದೇ ದಿನ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ವರದಿ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೆ ಏರಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದ ವೈಫಲ್ಯ ಈ ಅಂಕಿ-ಅಂಶಗಳಲ್ಲೇ ಎದ್ದು ತೋರುತ್ತಿದೆ. ಸರ್ಕಾರ ಜಾರಿಗೊಳಿಸುವ ನಿಯಮಗಳು, ಮಾರ್ಗಸೂಚಿಗಳು, ಕೊವಿಡ್-19 ನಿಯಮಗಳ ಪಾಲನೆಯಲ್ಲಿನ ನಿರ್ಲಕ್ಷ್ಯ ಮನೋಭಾವ ರಾಜ್ಯವನ್ನು ಸಂದಿಗ್ಘ ಸ್ಥಿತಿಗೆ ನೂಕಿದೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು, ದೇಶದ ಅಂಕಿ-ಸಂಖ್ಯೆಗಳಲ್ಲಿ ರಾಜ್ಯದ ಪಾಲು ಎಷ್ಟು, ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿ ಮಾಡಿರುವ ಟಾಪ್-5 ರಾಜ್ಯಗಳು ಯಾವುವು. ಕರ್ನಾಟಕದಲ್ಲಿ ಕೊವಿಡ್-19 ಪರಿಸ್ಥಿತಿ ಹೀಗಾಗಲು ಕಾರಣವೇನು. ಕೊವಿಡ್-19 ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಎಡವಿದ್ದೆಲ್ಲಿ ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಮುಂದಿದೆ ಓದಿ.
ದೇಶದಲ್ಲಿ 24 ಗಂಟೆಗಳಲ್ಲಿ ಕೊರೊನಾವೈರಸ್ ಪ್ರಕರಣಗಳು
ಭಾರತದಲ್ಲಿ ಒಂದೇ ದಿನ 3,29,942 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2,26,62,575ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3,876 ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದು, ಕೊರೊನಾವೈರಸ್ ಸೋಂಕಿನಿಂದ ಈವರೆಗೂ 2,49,99 ಜನರು ಜೀವ ಚೆಲ್ಲಿದ್ದಾರೆ. ಒಂದು ದಿನದಲ್ಲಿ 3,56,082 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 1,90,27,304 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹೊರತಾಗಿ ಭಾರತದಲ್ಲಿ 37,15,221 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್
ಒಂದೇ ದಿನ ಭಾರತದಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ದಾಖಲಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಬಾರಿಗೆ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲೇ 39305 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದೇ ದಿನ ಮಹಾಮಾರಿಗೆ 596 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 32188 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 19,73,683 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 13,83,285 ಸೋಂಕಿತರು ಗುಣಮುಖರಾಗಿದ್ದು, 5,71,006 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಇಳಿಮುಖವಾದ ಕೊವಿಡ್-19 ಪರೀಕ್ಷೆ ವೇಗ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೆ ಇದರ ಮಧ್ಯೆಯೇ ಸೋಂಕು ತಪಾಸಣೆ ವೇಗವು ಕಡಿಮೆಯಾಗುತ್ತಿದೆ. ಅಂದರೆ ಸೋಂಕಿನ ತಪಾಸಣೆ ವೇಗ ಇಳಮುಖವಾಗಿದ್ದರೂ ಸೋಂಕಿತ ಪ್ರಕರಣಗಳ ಸಂಖ್ಯೆ ಮಾತ್ರ ಏರುಮುಖವಾಗಿ ಸಾಗಿದೆ. ಕಳೆದ 24 ಗಂಟೆಗಳಲ್ಲಿ 7065 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದ್ದು, 1,17,045 ಜನರಿಗೆ RT-PCR ತಪಾಸಣೆ ನಡೆಸಲಾಗಿದೆ. ಒಟ್ಟು 1,24,110 ಜನರಿಗೆ ಕೊರೊನಾವೈರಸ್ ಸೋಂಕಿತ ತಪಾಸಣೆ ನಡೆಸಲಾಗಿದೆ.
ರಾಜ್ಯ ರಾಜಧಾನಿಯನ್ನು ಕಾಡುತ್ತಿರುವ ಕೊರೊನಾ
ಕೊರೊನಾವೈರಸ್ ಎಂಬ ಭೂತವು ಬೆಂಗಳೂರನ್ನು ಮತ್ತು ಬೆಂಗಳೂರಿಗರನ್ನು ಬೆನ್ನು ಬಿಡದೇ ಕಾಡುತ್ತಿದೆ. ರಾಷ್ಟ್ರದ ಅಂಕಿ-ಸಂಖ್ಯೆಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡರೆ, ರಾಜ್ಯದ ಒಟ್ಟಾರೆ ಸೋಂಕಿತ ಪ್ರಕರಣಗಳಲ್ಲಿ ಬೆಂಗಳೂರಿನದ್ದೇ ಸಿಂಹಪಾಲು ಇರುತ್ತದೆ. ಸೋಮವಾರ ಕೂಡಾ ಅದೇ ಆಗಿದೆ. ಒಂದೇ ದಿನ 16747 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮಹಾಮಾರಿಗೆ 374 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 8431ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿಯೊಂದರಲ್ಲೇ 3,52,454 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
ರಾಜ್ಯದ ಲಾಕ್ ಡೌನ್ ನಿಯಮಗಳಲ್ಲೂ ಲೋಪ
ಕೊರೊನಾವೈರಸ್ ಸೋಂಕಿತ ಪ್ರಕರಣ ನಿಯಂತ್ರಿಸಲು ಮೇ 24ರವರೆಗೂ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ ರಾಜ್ಯ ಸರ್ಕಾರದ ಲಾಕ್ ಡೌನ್ ನೀತಿ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಜನತಾ ಕರ್ಫ್ಯೂ ಸಂದರ್ಭದಲ್ಲಿ ಜಾರಿಗೊಳಿಸಿದ ನಿಯಮಗಳನ್ನೇ ಯಥಾವತ್ತಾಗಿ ಮುಂದುವರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಅನುಮತಿ ನೀಡಿರುವ ಸರ್ಕಾರವು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವುದಕ್ಕೆ ನಿರ್ಬಂಧವನ್ನು ವಿಧಿಸಿದೆ. ಕೊವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪ್ರತಿಪಕ್ಷಗಳು ಮೇಲಿಂದ ಮೇಲೆ ಆರೋಪಿಸುತ್ತಿವೆ. ಬೆಂಗಳೂರು ಕೊವಿಡ್-19 ಹಾಟ್ ಸ್ಪಾಟ್ ಆಗಿದ್ದರೆ, ಜಿಲ್ಲಾಮಟ್ಟದಲ್ಲಿಯೂ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ.
ಜಿಲ್ಲಾವಾರು ಕೊರೊನಾವೈರಸ್ ಸೋಂಕಿತ ಪ್ರಕರಣ
ರಾಜ್ಯದಲ್ಲಿ ಒಟ್ಟು 39305 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, ಬೆಂಗಳೂರು ಗ್ರಾಮಾಂತರ 704, ಬೆಂಗಳೂರು 16747, ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಗಳೂರು 362, ಚಿತ್ರದುರ್ಗ 172, ದಕ್ಷಿಣ ಕನ್ನಡ 1175, ದಾವಣಗೆರೆ 197, ಧಾರವಾಡ 1006, ಗದಗ 332, ಹಾಸನ 1800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1133, ಮೈಸೂರು 1537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2168, ಉಡುಪಿ 855, ಉತ್ತರ ಕನ್ನಡ 885, ವಿಜಯಪುರ 659, ಯಾದಗಿರಿ 727 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಯಾರಿಗೆಷ್ಟು ಕೊವಿಡ್-19 ಲಸಿಕೆ?
ಕರ್ನಾಟಕದಲ್ಲಿ ಈವರೆಗೂ 1,06,08,539 ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ರಾಜ್ಯದಲ್ಲಿ 6,91,756 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 4,49,183 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ.4,63,175 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 1,80,286 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. 45 ವರ್ಷದಿಂದ 60 ವರ್ಷದವರೆಗಿನ 73,20,518 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 14,86,102 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 84,92,968 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 21,15,571 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಲಸಿಕೆಗೂ ಕೊರತೆ?
ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಒಂದು ಕಡೆ ಕರ್ನಾಟಕ ದಾಖಲೆ ಬರೆಯುತ್ತಿದೆ. ಇನ್ನೊಂದು ಕಡೆಯಲ್ಲಿ ಲಸಿಕೆಯ ಅಭಾಯ ಸೃಷ್ಟಿಯಾಗುತ್ತಿದೆ. ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸದ್ಯಕ್ಕೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ರಾಜ್ಯದ ಜಿಲ್ಲಾಕೇಂದ್ರಗಳಲ್ಲೇ ಲಸಿಕೆಯು ಖಾಲಿ ಆಗಿದೆ. 20 ಡೋಸ್ ಲಸಿಕೆಯಿರುವ ಕೇಂದ್ರಗಳ ಎದುರಿನಲ್ಲಿ ಲಸಿಕೆ ಪಡೆಯುವುದಕ್ಕಾಗಿ 100ಕ್ಕೂ ಹೆಚ್ಚು ಮಂದಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.