ನೇರ ನಗದು ವರ್ಗಾವಣೆಗೆ 'ಡಿಬಿಟಿ' ಆ್ಯಪ್ ಬಿಡುಗಡೆ ಮಾಡಿದ ಯಡಿಯೂರಪ್ಪ
ಬೆಂಗಳೂರು, ಜೂನ್ 10: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಭಿವೃದ್ಧಿಪಡಿಸಿರುವ 'ಡಿಟಿಬಿ' ನಗದು ವರ್ಗಾವಣೆ ಆ್ಯಪ್ನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬಿಡುಗಡೆ ಮಾಡಿದರು.
''ರಾಜ್ಯದಲ್ಲಿ ಈ ವರೆಗೆ ಸುಮಾರು 120 ಯೋಜನೆಗಳನ್ನು ಈ ವೇದಿಕೆಗೆ ಒಳಪಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 12 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತವನ್ನು ಫಲಾನುಭವಿಗಳ ಆಧಾರ್ ಜೋಡಣೆಯಾದ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಹಣ ದುರುಪಯೋಗ, ಲೋಪ ದೋಷ ಅಥವಾ ಮಧ್ಯವರ್ತಿಗಳ ಹಾವಳಿ ಇಲ್ಲ'' ಎಂದು ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದರು.
''ಈ ಪದ್ಧತಿಯಿಂದಾಗಿ ವಿವಿಧ ಯೋಜನೆಗಳಲ್ಲಿ ಹಣದ ಸೋರಿಕೆ ತಡೆಗಟ್ಟಲು ಹೆಚ್ಚು ಅನುಕೂಲವಾಗುತ್ತದೆ. ಕೋವಿಡ್ 19 ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿರಾಜ್ಯ ಸರ್ಕಾರ ಘೋಷಿಸಿದ ಎಲ್ಲಾ ಪ್ಯಾಕೇಜ್ಗಳನ್ನು ಡಿಬಿಟಿ ಮೂಲಕವೇ ಪಾವತಿಸಲಾಗಿದೆ'' ಎಂದು ಸಿಎಂ ಹೇಳಿದರು.
ಈ ಬಾರಿಯ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲ ಯೋಜನೆಗಳನ್ನು ಡಿ.ಬಿ.ಟಿ. ವೇದಿಕೆಯಡಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ಆ್ಯಪ್ ಅನ್ನು ನಾಗರೀಕರು ಹೆಚ್ಚು-ಹೆಚ್ಚಾಗಿ ಬಳಸಿದಾಗ ಪಾರದರ್ಶಕತೆ ಇರುವ ಸರ್ಕಾರದ ಉದ್ದೇಶ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ನಾಗರೀಕರು ಈ ಆ್ಯಪ್ನ ಸದುಪಯೋಗ ಪಡೆದುಕೊಂಡು ಫಲಾನುಭವಿಗಳಿಗೆ ವರ್ಗಾವಣೆಯಾಗಿರುವ ನಗದು ವಿವರವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಇ-ಆಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಡಿ.ಬಿ. ಟಿ. ಯೋಜನಾ ನಿರ್ದೇಶಕ ಶ್ರೀವತ್ಸ, ಎನ್.ಐ.ಸಿ ಉಪ ನಿರ್ದೇಶಕರಾದ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.
# ಡಿ.ಬಿ.ಟಿ ಅಪ್ಲಿಕೇಷನ್ ಬಗ್ಗೆ: ಈ ಆಪ್ನ್ನು ಗೂಗಲ್ ಪ್ಲೇ-ಸ್ಟೋರ್ನ ಮೂಲಕ ಡೌನ್ಲೋಡ್ ಮಾಡಿಕೊಂಡು, ಆಧಾರ್ e-ಕೆವೈಸಿ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಆಪ್ NPCI (National Payment Corporation of India) ಗೆ ಸಂಪರ್ಕಿಸಿ ಆಧಾರ್ ಬ್ಯಾಂಕ್ ಸೀಡಿಂಗ್ನ ಪ್ರಸ್ತುತ ಸ್ಥಿತಿಯನ್ನು ನೀಡುತ್ತದೆ.
• ಡಿ.ಬಿ.ಟಿ ಮೊಬೈಲ್ ಆಪ್ ಯೋಜನೆವಾರು ವಿವಿಧ ಕಂತುಗಳಲ್ಲಿ ವರ್ಗಾಹಿಸಿದ ಪಾವತಿ ಮೊತ್ತ, ಪಾವತಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಯು.ಟಿ.ಆರ್ ಸಂಖ್ಯೆಯನ್ನು ಒದಗಿಸುತ್ತದೆ.
ಆಧಾರ್ ಆರ್ಥಿಕ ವಿಳಾಸ
ಈ ವೇದಿಕೆಯು ಫಲಾನುಭವಿಯನ್ನು ಆಧಾರ್ ಸಂಖ್ಯೆ ಮೂಲಕ ಗುರುತಿಸಿ ಫಲಾನುಭವಿಯ ಆಧಾರ್ ಅನ್ನು ಆರ್ಥಿಕ ವಿಳಾಸವಾಗಿ (Financial Address) ಪರಿಗಣಿಸಿ ನಗದು ವರ್ಗಾವಣೆಯನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.
ಆಧಾರ್ ಜೋಡಣೆ ಮಾಹಿತಿ
ಬ್ಯಾಂಕ್ ಖಾತೆಗೆ ಆಧಾರ್ ಜೋಡನೆ ಮಾಹಿತಿಯು ಯು.ಐ.ಡಿ.ಐ. ಜಾಲತಾಣದಲ್ಲಿ ಮಾತ್ರ ಲಭ್ಯವಿದ್ದು ನಾಗರಿಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವ ಬಗ್ಗೆ ತಿಳಿದುಕೊಳ್ಳಲು ಕಷ್ಟವಾಗಿತ್ತು. ನಾಗರಿಕರ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆಯಾಗದೇ ಇದ್ದಲ್ಲಿ ರಾಜ್ಯ ಸರ್ಕಾರವು ನಗದು ಸೌಲಭ್ಯ ವರ್ಗಾವಣೆಗೆ ಬಳಸುತ್ತಿರುವ ಆಧಾರ್ ಆಧಾರಿತ ನಗದು ವರ್ಗಾವಣೆ ವ್ಯವಸ್ಥೆ (Aadhaar Based Payment System) ಮೂಲಕ ಹಣ ಪಡೆಯಲು ಸಾಧ್ಯವಾಗುವುದಿಲ್ಲ.
ಯಾವ ಖಾತೆಗೆ ನಗದು ಸೌಲಭ್ಯ ಜಮೆ
ಇದಲ್ಲ ಬಹಳಷ್ಟು ನಾಗರಿಕರಿಗೆ ತಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಇದರಿಂದ ಸರ್ಕಾರವು ಯಾವ ಬ್ಯಾಂಕ್ ಖಾತೆಗೆ ನಗದು ಸೌಲಭ್ಯವನ್ನು ಜಮೆ ಮಾಡಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಲು ಇವರುಗಳಿಗೆ ಬಹಳ ಕಷ್ಟವಾಗುತ್ತದೆ.
Recommended Video
ಎಲ್ಲಕ್ಕೂ ಡಿಟಿಬಿಯಿಂದ ಪರಿಹಾರ
ಅಲ್ಲದೆ ಇತ್ತೀಚಿಗೆ ರಾಜ್ಯ ಸರ್ಕಾರವು ನಾಗರಿಕರಿಂದ ಯಾವುದೇ ಅರ್ಜಿ ಪಡೆಯದೇ ಅರ್ಹತೆ ಆಧಾರದ ಮೇಲೆ ನಗದು ವರ್ಗಾವಣೆಯನ್ನು ಮಾಡುತ್ತಿರುವುದರಿಂದ ಇವರುಗಳಿಗೆ ಹಣ ಬ್ಯಾಂಕ್ ಖಾತೆಯಲ್ಲಿ ಜಮೆಯಾಗುವ ಬಗ್ಗೆಯು ಮಾಹಿತಿ ಲಭ್ಯ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಡಿ.ಬಿ.ಟಿ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.