ಕೊನೆಗೂ ಲಿಂಗಾಯತ ಸಮುದಾಯದ ಒತ್ತಡಕ್ಕೆ ಮಣಿದ ಯಡಿಯೂರಪ್ಪ!
ಬೆಂಗಳೂರು, ನ. 17: ತಮ್ಮದೇ ಸಮುದಾಯದ ಒತ್ತಡಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊನೆಗೂ ಮಣಿದಿದ್ದಾರೆ. ಕಳೆದ ಹಲವು ವರ್ಷಗಳಿಂದ ಈಡೇರದ ಲಿಂಗಾಯತ ಸಮುದಾಯದ ಬೇಡಿಕೆ ಬಸವಕಲ್ಯಾಣ ಉಪ ಚುನಾವನೆ ಹಿನ್ನೆಲೆಯಲ್ಲಿ ಈಡೇರಿದೆ. ಇತ್ತೀಚೆಗಷ್ಟೆ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದ ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮರಾಠ ಸಮುದಾಯದ ನಾಯಕರ ಸಭೆಯನ್ನು ನಡೆಸಿದ್ದರು. ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ಅಕಾಲಿನ ನಿಧನದಿಂದ ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇದೇ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಕ್ಷೇತ್ರಕ್ಕೆ ಪ್ರವಾಸ ತೆರಳಿದ್ದರು ಎನ್ನಲಾಗಿತ್ತು.
ವಿಜಯೇಂದ್ರ ಅವರ ಬಸವಕಲ್ಯಾಣಕ್ಕೆ ಭೇಟಿ, ಅಲ್ಲಿ ಮರಾಠ ಸಮುದಾಯದ ನಾಯಕರೊಂದಿಗಿನ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಅವರು ಮಹತ್ವವ ಘೋಷಣೆ ಮಾಡಿದ್ದರು. ಮರಾಠ ಸಮುದಾಯದ ಸಮಗ್ರ ಅಭಿವೃದ್ಧಿಗೆ 'ಮರಾಠ ಅಭಿವೃದ್ಧಿ ಪ್ರಾಧಿಕಾರ' ರಚನೆ ಹಾಗೂ 50 ಕೋಟಿ ರೂ.ಗಳನ್ನು ಕಾಯ್ದಿರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ಮಾಡಿದ್ದರು.
ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರಗೆ ಮೊದಲ ಬಾರಿ ಭಾರಿ ಹಿನ್ನಡೆ!
ಆ ಆದೇಶಕ್ಕೆ ಇಡೀ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿನ ಲಿಂಗಾಯತ ನಾಯಕರೂ ಕೂಡ ಯಡಿಯೂರಪ್ಪ ಎದುರು ಮಹತ್ವದ ಬೇಡಿಕೆ ಇಟ್ಟಿದ್ದರು. ಅದಕ್ಕೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ ಸಚಿವರೂ ಧ್ವನಿ ಗೂಡಿಸಿದ್ದರು. ಇದೀಗ ಎಲ್ಲರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಆದೇಶ ಮಾಡಿದ್ದಾರೆ.
ಲಿಂಗಾಯತ ಸಮುದಾಯದ ಬೇಡಿಕೆ
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸಿಎಂ ಯಡಿಯೂರಪ್ಪ ಅವರು ಆದೇಶ ಮಾಡುತ್ತಿದ್ದಂತೆಯೆ ಪ್ರಬಲ ಲಿಂಗಾಯತ ಸಮುದಾಯ ಬೇಡಿಕೆ ಇಟ್ಟಿತ್ತು. ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ಲಿಂಗಾಯತರಲ್ಲಿಯೂ ಕಡು ಬಡವರಿದ್ದಾರೆ ಎಂದಿದ್ದರು. ಆದರೆ ಮರಾಠ ಪ್ರಾಧಿಕಾರ ರಚನೆ ಮಾಡಿದ್ದಕ್ಕೆ ಕನ್ನಡ ಪರ ಸಂಘಟನೆಗಳಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಗಲಿಬಿಲಿಗೊಂಡಿದ್ದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದೆ.
ಸಿಎಂ ಯಡಿಯೂರಪ್ಪ ಆದೇಶ
ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ. ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ 'ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸುವುದು ಅಗತ್ಯವಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ನಿಗಮವನ್ನು ಸ್ಥಾಪಿಸಲು ಆದೇಶ ಮಾಡಲಾಗಿದೆ ಎಂದು ಸರ್ಕಾರದ ಮುಖ್ಯಕಾರ್ಯರ್ಶಿಗೆ ಸಿಎಂ ಯಡಿಯೂರಪ್ಪ ಆದೇಶ ಮಾಡಿದ್ದಾರೆ.
ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವೀರಶೈವ ಮಹಾಸಭಾ ಆಗ್ರಹ!
ಆ ಮೂಲಕ ತಮ್ಮದೇ ಸಮಾಜದಿಂದ ಎದುರಾಗಿದ್ದ ಆಕ್ಷೇಪವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಣಿಸಿದ್ದಾರೆ. ಆದರೆ ಲಿಂಗಾಯತ ಸಮುದಾಐದ ಮತ್ತೊಂದು ಬಹುದೊಡ್ಡ ಬೇಡಿಕೆ ಕುರಿತು ಯಾವುದೇ ಮಾತನ್ನು ಯಡಿಯೂರಪ್ಪ ಅವರು ಆಡಿಲ್ಲ. ಅದು ಮೀಸಲಾತಿ ವಿಚಾರ.
ಮೀಸಲಾತಿಗೆ ಲಿಂಗಾಯತರ ಆಗ್ರಹ!
ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಬದಲು ನಮ್ಮ ಸಮುದಾಯಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಶೇಕಡಾ 16 ರಿಂದ 18ರಷ್ಟು ಉದ್ಯೋಗ, ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಮೀಸಲಾತಿ ಒಡಿ ಎಂದು ಲಿಂಗಾಯತ ಸಮುದಾಯದ ನಾಯಕರಾದ ಮಾಜಿ ಸಚಿವರಾದ ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಎಂ.ಬಿ. ಪಾಟೀಲ್ ಅವರು ಒತ್ತಾಯಿಸಿದ್ದಾರೆ. ಅದಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಬಿ.ಸಿ. ಪಾಟೀಲ್ ಅವರೂ ಧ್ವನಿಗೂಡಿಸಿದ್ದರು. ಹೀಗಾಗಿ ಬರಿ ಪ್ರಾಧಿಕಾರ ರಚನೆಯಿಂದ ಲಿಂಗಾಯತ ಸಮುದಾಯ ತೃಪ್ತಿಗೊಳ್ಳುತ್ತದೆಯಾ ಎಂಬುದು ಈಗಿನ ಪ್ರಶ್ನೆ.
Recommended Video
ಉಪ ಚುನಾವಣೆ ಗೆಲ್ಲುವ ತಂತ್ರ
ಲಿಂಗಾಯತ ಸಮುದಾಯದ ಬೇಡಿಕೆ ಈಡೇರಿಸುವ ಮೂಲಕ ತಕ್ಷಣದ ವಿರೋಧದಿಂದ ಯಡಿಯೂರಪ್ಪ ಸರ್ಕಾರ ಬಚಾವಾಗಿದೆ. ಆದರೆ ಮತ್ತೊಂದೆಡೆ ವೀರಶೈವ-ಲಿಂಗಾಯತ ಮೀಸಲಾತಿ ಕೂಗು ಉಪ ಚುನಾವಣೆ ಹಿನ್ನೆಲೆಯಲ್ಲಿಯೇ ಜೋರಾಗುವ ಸಾಧ್ಯತೆಗಳೂ ಇವೆ. ಜೊತೆಗೆ ಕನ್ನಡ ಪರ ಸಂಘಟನೆಗಳು ಭಾಷಾ ಅಲ್ಪಸಂಖ್ಯಾತರ ಅಭಿವೃದ್ಧಿಗೆ, ಅದರಲ್ಲೂ ಆಗಾಗ ಬೆಳಗಾವಿಯಲ್ಲಿ ಗಡಿ ತಂಟೆ ತೆಗೆಯುವ ಮರಾಠಿ ಭಾಷಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿವೆ.
ಇದೆಲ್ಲವನ್ನೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಗೆ ಎದುರಿಸಿ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.