ರಾಜ್ಯದಲ್ಲಿ ಯಡಿಯೂರಪ್ಪ ಬದಲಾವಣೆ ಕುರಿತು ಬಿಜೆಪಿ ಅಧಿಕೃತ ಹೇಳಿಕೆ!
ಬೆಂಗಳೂರು, ಸೆ. 22: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಬಿಜೆಪಿಯಲ್ಲಿನ ಕೆಲವರು ನಾಯಕತ್ವ ಬದಲಾವಣೆ ಕುರಿತು ಒಳಗೊಳಗೆ ಮಾತನಾಡುತ್ತಲೇ ಇದ್ದಾರೆ. ಈಗ ಮತ್ತೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಬಿಜೆಪಿಯಲ್ಲಿ ಚರ್ಚೆ ಶುರುವಾಗಿದೆ. ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ ಎಂದೂ ಹೇಳಲಾಗಿತ್ತು. ಸಿಎಂ ಯಡಿಯೂರಪ್ಪ ಅವರು ಮೂರು ದಿನಗಳ ದೆಹಲಿ ಪ್ರವಾಸದ ಸಂದರ್ಭದಲ್ಲಿ ಹೈಕಮಾಂಡ್ ಭೇಟಿ ಮಾಡಿ ಚರ್ಚೆ ಮಾಡಿದ್ದರು.
ಹೈಕಮಾಂಡ್ ಭೇಟಿಯ ಬಳಿಕ ಅಧಿಕೃತ ಹೇಳಿಕೆ ಕೊಟ್ಟಿದ್ದ ಸಿಎಂ ಯಡಿಯೂರಪ್ಪ ಅವರು ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಅನುಮತಿ ಕೇಳಿದ್ದೇನೆ. ಅವಕಾಶ ಕೊಟ್ಟರೆ ಸಂಪುಟ ವಿಸ್ತರಣೆ ಮಾಡುತ್ತೇನೆ ಎನ್ನುವ ಮೂಲಕ ನಾಯಕತ್ವ ಬದಲಾವಣೆಯ ಮಾತನ್ನು ಪರೋಪಕ್ಷವಾಗಿ ತಳ್ಳಿ ಹಾಕಿದ್ದರು. ಇದೀಗ ರಾಜ್ಯ ಬಿಜೆಪಿ ಕೂಡ ಮೌನ ಮುರಿದಿದ್ದು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಕುರಿತು ಮಹತ್ವದ ಘೋಷಣೆ ಮಾಡಿದೆ.
ಕೊರೊನಾ ವೈರಸ್ ಸಂಕಷ್ಟ: ಯಡಿಯೂರಪ್ಪ ಸೇರಿ ಏಳು ಸಿಎಂ ಜತೆ ಮೋದಿ ಚರ್ಚೆ
BSY ಬದಲಾವಣೆ ಕುರಿತು ಡಾ. ಸುಧಾಕರ್ ಹೇಳಿಕೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರವ ದೆಹಲಿ ಪ್ರವಾಸದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ರಾಜ್ಯ ನಾಯಕತ್ವ ಬದಲಾವಣೆ ಗರಂ ಆಗಿಯೇ ಮಾತನಾಡಿದ್ದರು. ದೆಹಲಿ ಪ್ರವಾಸ, ನಾಯಕತ್ವ ಬದಲಾವಣೆ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮದವರು ತುಮಕೂರಿನಲ್ಲಿ ಕೇಳಿದ್ದ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟಿದ್ದ ಡಾ. ಸುಧಾಕರ್ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡವನಲ್ಲ ಎಂದಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೇ ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳಿ. ಸತ್ಯ ಗೊತ್ತಿಲ್ಲದೇ ಮನಸೋ ಇಚ್ಛೆ ಮಾತನಾಡುವುದು ಸರಿಯಲ್ಲ. ನಾನು ಸಹ ಈ ಬಗ್ಗೆ ಏನೂ ಹೇಳುವುದಿಲ್ಲ. ಕೆಲವರು ಮಂತ್ರಿ ಆಗುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ, ಅದೇನು ಅಪರಾಧ ಅಲ್ಲವಲ್ಲಾ? ಈ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ ಎಂದು ಗರಂ ಆಗಿದ್ದರು.
ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ
ಅಧಿವೇಶನಕ್ಕೂ ಮೊದಲು ರಾಜ್ಯ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಸುಕರಾಗಿದ್ದರು. ದೆಹಲಿ ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಈ ಬಗ್ಗೆ ಚರ್ಚಿಸಿ, ಅನುಮತಿ ಕೊಡುವಂತೆಯೂ ಕೇಳಿಕೊಂಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ ಬಳಿಕ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಡ್ಡಾ ಹೇಳಿದ್ದರು ಎನ್ನಲಾಗಿದೆ. ಆದರೆ ಅಧಿವೇಶನಕ್ಕೆ ಮೊದಲು ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಅನುಮತಿ ನೀಡಲಿಲ್ಲ.
ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡದೇ ಇದ್ದುದು ರಾಜಕೀಯ ವಲಯದಲ್ಲಿ ಬೇರೆಯದ್ದೆ ಚರ್ಚೆಯನ್ನು ಹುಟ್ಟುಹಾಕಿತು. ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನಿರಾಕರಿಸಿದೆ ಎಂಬ ಸುದ್ದಿಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದವು. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಘಟಕ ಸಿಎಂ ಯಡಿಯೂರಪ್ಪ ಬದಲಾವಣೆ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದೆ.
ಪಕ್ಷದೊಳಗಿನ ಭಿನ್ನಮತೀಯರಿಗೆ ದೆಹಲಿಯಿಂದ ಯಡಿಯೂರಪ್ಪ ಖಡಕ್ ಸಂದೇಶ
ಬಿಎಸ್ವೈ ಬದಲಾವಣೆ ಬಗ್ಗೆ ಬಿಜೆಪಿ ಅಧಿಕೃತ ಹೇಳಿಕೆ
ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಘಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಕುರಿತು ಸ್ಪಷ್ಟನೆ ಕೊಟ್ಟಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ವರದಿಗಳು ಪ್ರಸಾರವಾಗುತ್ತಿವೆ. ಕರ್ನಾಟಕ ಬಿಜೆಪಿ ಈ ವಿಚಾರವನ್ನು ತಳ್ಳಿ ಹಾಕುತ್ತಿದೆ. ಈ ವರದಿಗಳು ಸಂಪೂರ್ಣವಾಗಿ ನಿರಾಧಾರವಾಗಿದ್ದು, ಸತ್ಯಕ್ಕೆ ದೂರವಾಗಿವೆ. ಸಿಎಂ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಸುದ್ದಿ ಜನರನ್ನು ದಾರಿ ತಪ್ಪಿಸುವಂತಿದೆ. ಆ ರೀತಿಯ ಯಾವುದೇ ಚರ್ಚೆಗಳು ಬಿಜೆಪಿಯಲ್ಲಿ ನಡೆದಿಲ್ಲ.
ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಮುನ್ನಡೆಯುತ್ತಿದೆ ಎಂದೂ ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಅವರು ರಾಜ್ಯ ಬಿಜೆಪಿ ಪರವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸೂಚನೆ ಮೇರೆಗೆ ಈ ಸ್ಪಷ್ಟನೆಯನ್ನು ಕೊಡಲಾಗಿದೆ ಎಂದು ತಿಳಿದು ಬಂದಿದೆ.
Recommended Video
ಅಕ್ಟೋಬರ್ 5ಕ್ಕೆ ಸಂಪುಟ ವಿಸ್ತರಣೆ?
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ರಾಜ್ಯ ಬಿಜೆಪಿ ಘಟಕದ ಅಧಿಕೃತ ಸ್ಪಷ್ಟನೆ ಬೆನ್ನಲ್ಲೆ ಮತ್ತೆ ಸಂಪುಟ ವಿಸ್ತರಣೆ ಚರ್ಚೆ ಶುರುವಾಗಿದೆ. ಬಿಜೆಪಿ ಹೈಕಮಾಂಡ್ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಇದೇ ಅಕ್ಟೋಬರ್ 5 ಅಥವಾ 6 ರಂದು ಸಂಪುಟ ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮೂರು ಸಚಿವರಿಗೆ ಕೋಕ್ ಕೊಟ್ಟು ಆರು ಶಾಸಕರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ಕಳಪೆ ಸಾಧನೆ ಮಾಡಿರುವ ಹಿರಿಯ ಸಚಿವರಲ್ಲಿ ನಡುಕ ಹುಟ್ಟಿದೆ ಎನ್ನಲಾಗಿದೆ. ಒಟ್ಟಾರೆ ನಾಯಕತ್ವ ಬದಲಾವಣೆ ಮಾತನ್ನು ರಾಜ್ಯ ಬಿಜೆಪಿ ಸಧ್ಯಕ್ಕೆ ತಳ್ಳಿಹಾಕಿದೆ.