ಸಿದ್ದರಾಮಯ್ಯರನ್ನು ವಿಪಕ್ಷದಲ್ಲಿ ಕೂರಿಸದೇ ಹೋದರೆ ನಾನು ಯಡಿಯೂರಪ್ಪನೇ ಅಲ್ಲ!
ಬೆಂಗಳೂರು, ಮಾ. 08: ಪ್ರಮುಖ ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲಿ ಬಜೆಟ್ ಓದುವ ಮೂಲಕ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇತಿಹಾಸ ನಿರ್ಮಿಸಿದ್ದಾರೆ. ಹೀಗಾಗಿ ಬಜೆಟ್ ಮಂಡಿಸಿದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಸಿಎಂ ಹರಿಹಾಯ್ದಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಸಿಎಂ ಯಡಿಯೂರಪ್ಪ ಅವರ ಸಂಪುಟದ ಆರು ಸಚಿವರು ಕೋರ್ಟ್ ಮೊರೆ ಹೋಗಿದ್ದು ಹಾಗೂ ಭೂಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರು ಸುಪ್ರೀಂಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಕಳೆದುಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಬಜೆಟ್ ಕಲಾಪ ಸಭಾತ್ಯಾಗ ಮಾಡಿದ್ದರು.
ತಮ್ಮ ಬಜೆಟ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನು ಹೇಳಿದ್ರು?
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆಯಂತೆ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ಬಜೆಟ್ ಮಂಡನೆ ಮುಗಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾನು ಯಡಿಯೂರಪ್ಪನೇ ಅಲ್ಲ!
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130 ರಿಂದ 135 ಸ್ಥಾನಗಳನ್ನು ಗೆದ್ದು ಸಿದ್ದರಾಮಯ್ಯ ಅವರನ್ನು ವಿಪಕ್ಷದಲ್ಲಿ ಕೂರಿಸದೇ ಹೋದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಸಿಎಂ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಬಜೆಟ್ ಕಲಾಪ ಬಹಿಷ್ಕರಿಸಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗರಂ ಆಗಿದ್ದರು. ಹೀಗಾಗಿ ಬಜೆಟ್ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯರ ಮೇಲೆ ಹರಿಹಾಯ್ದರು.
ನಾನು ನಿಮ್ಮನ್ನೇ ಕೇಳುತ್ತೇನೆ, ಅವರ ನೈತಿಕತೆ ಅವ್ರ ತಲೆ. ನಾಳೆ ಅವರ ನೈತಿಕತೆ ಬಗ್ಗೆ ನಾನು ಹೇಳ್ತೇನೆ. ಸಿದ್ದರಾಮಯ್ಯ ಅವರಿಗೆ ತಾನು ಏನು ಮಾತನಾಡ್ತಿದ್ದೇನೆ ಅನ್ನೋದೇ ಗೊತ್ತಿಲ್ಲ. ನಾಳೆಯಿಂದ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಯಾರು ರಾಜೀನಾಮೆ ಕೊಡಬೇಕು ಅಂತ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಮೇಲೆ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದರು.
ಈ ರೀತಿ ಸಭಾತ್ಯಾಗ ಇತಿಹಾಸದಲ್ಲೇ ಮಾಡಿಲ್ಲ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ನಾವೂ ಬಿಚ್ಚಿಡುತ್ತೇವೆ. ಪ್ರತಿಪಕ್ಷಗಳು ಬೇಕಾದರೆ ಚರ್ಚೆ ಮಾಡಬೇಕಿತ್ತು. ಆದರೆ ಬಜೆಟ್ ಮಂಡನೆ ಸಂದರ್ಭದಲ್ಲಿ ವಿಪಕ್ಷ ಈ ರೀತಿ ಬಹಿಷ್ಕಾರ ಹಾಕಿದ್ದು ಇತಿಹಾಸದಲ್ಲೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಗರಂ ಆದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗಕ್ಕೆ ಅವರ ತಲೆ ಎಂದು ಬಯ್ದು ಯಡಿಯೂರಪ್ಪ ಗರಂ ಆಗಿದ್ದು ಕಂಡು ಬಂತು.
ವಿಧಾನಸಭೆಯಲ್ಲಿ 'ಸಿಡಿ' ಬಗ್ಗೆ ಚರ್ಚೆ ಆಗಲಿ
ಇನ್ನು 'ಸಿಡಿ' ಪ್ರಕರಣದ ತನಿಖೆಗೆ ನಾನು ಸಿದ್ಧನಿದ್ದೇನೆ. ವಿಧಾನಸಭೆಯಲ್ಲಿ ಆ ಬಗ್ಗೆ ಚರ್ಚೆ ಆಗಲಿ. ಅವರು ಏನು ಸಲಹೆ ಕೊಡ್ತಾರೆ ಅದರ ಆಧಾರದ ಮೇಲೆ ಮುಂದಿನ ತನಿಖೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಇದೇ ಸಂದರ್ಭದಲ್ಲಿ ಸಿಡಿ ವಿಚಾರದ ಪ್ರಶ್ನೆಗೆ ಸಿಎಂ ನೆರವಿಗೆ ಬಂದ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಸಚಿವರು ಕಾನೂನು ಮೊರೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಏನೇನಾಗಿದೆ ಅಂತ ಗೊತ್ತಿದೆ. ಅವರ ಕಾಲದಲ್ಲೂ ಅವರು ಕೋರ್ಟ್ಗೆ ಹೋಗಿದ್ದರು ಎಂದು ವಿವರಿಸಿದರು. ಸಚಿವ ಬೊಮ್ಮಾಯಿ ಉತ್ತರ ಕೊಡುವ ವೇಳೆ ಸಿಎಂ ಮೌನವಹಿಸಿದ್ದರು.
ಎಲ್ಲ ರಾಜ್ಯಗಳಿಗಿಂತ ನಮ್ಮಲ್ಲಿ ಕಡಿಮೆ ಇದೆ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಎಲ್ಲ ರಾಜ್ಯಗಳಿಗಿಂತ ನಮ್ಮಲ್ಲಿ ಕಡಿಮೆ ಇದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು. ನಾವು ಯಾವ ಇಲಾಖೆಯ ಹಣವನ್ನು ಕೂಡ ಕಡಿತ ಮಾಡಿಲ್ಲ. ಕೇಂದ್ರದಿಂದ ನಾನು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚಿನ ಅನುದಾನ ಬರುತ್ತದೆ. ಜೊತೆಗೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ಹಣ ನೀಡಿರುವ ಬಗ್ಗೆ ನಾನು ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಣ್ಣ ಸಣ್ಣ ಜಾತಿಗಳಳಿಗೆ ತಾರತಮ್ಯ ಮಾಡಲಾಗಿದೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ ಅವರು, ಎಲ್ಲ ಸಮುದಾಯಗಳಿಗೂ ಕೂಡ ಹೆಚ್ಚಿನ ಅನುದಾನ ನೀಡಲು ನಾನು ಸಿದ್ದನಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳನ್ನು ನೀಡುತ್ತೇನೆ ಎಂದು ವಿವರಿಸಿದರು. ಯಡಿಯೂರಪ್ಪ 135 ಸೀಟು ಗೆಲ್ತೇವೆ ಎಂಬ ಹೇಳಿಕೆ.
ಯಡಿಯೂರಪ್ಪಗೆ ಸಿದ್ದರಾಮಯ್ಯ ತಿರುಗೇಟು
ಇನ್ನು ಬಜೆಟ್ ಕಲಾಪ ಬಾಯ್ಕಾಟ್ ಮಾಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸಿಂ ಯಡಿಯೂರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಅವರ ಸಂಪುಟದ ಆರು ಸಚಿವರು ಕೋರ್ಟ್ಗೆ ಹೋಗಿದ್ದಾರೆ. ಅವರು ತೇಜೋವಧೆ ಮಾಡ್ತಾರೆ ಅಂತ ಹೋಗಿದ್ದಾರಲ್ಲಾ? ಯಾಕಪ್ಪಾ ಹೋದ್ರು? ಏನೋ ಇದೆ ತಾನೇ ಕೋರ್ಟ್ಗೆ ಹೋಗಿರೋದು? ಅದು ಅನೈತಿಕ ಅಂತ ನಾವು ಕಲಾಪದಲ್ಲಿ ಭಾಗವಹಿಸಲಿಲ್ಲ.
ಇನ್ನೂ 19 ಜನರ ಮೇಲೆ ಸಿಡಿಗಳು ಇವೆ ಅಂದಿದ್ದಾರೆ. ಪಿಟಿಷನ್ ಹಾಕಿಕೊಂಡಿದ್ದಾರೆ, ಏನೂ ಇಲ್ಲಾಂದ್ರೆ ನೀವು ಧೈರ್ಯವಾಗಿರ್ರಪ್ಪಾ. ಯಾಕೆ ನೀವು ಕೋರ್ಟ್ಗೆ ಹೋಗಿದ್ದು? ನಾನು ತಲೆ ಸರಿಯಾಗಿರೋದಕ್ಕೆ ಇದನ್ನೆಲ್ಲಾ ಹೇಳ್ತಿರೋದು. ಯಡಿಯೂರಪ್ಪಗೆ ತಲೆ ಕೆಟ್ಟಿರೋದಕ್ಕೆ ಹಾಗೆ ಹೇಳಿರೋದು ಎಂದು ತಿರುಗೇಟು ನೀಡಿದರು.
ಈ ಎಲ್ಲ ಸವಾಲು-ಪಾಟೀ ಸವಾಲುಗಳ ಮಧ್ಯೆ ನಾಳೆಯಿಂದ ಬಜೆಟ್ ಮೇಲೆ ರಂಗೇರಿದ ಚರ್ಚೆ ನಡೆಯಲಿದೆ. ಜೊತೆಗೆ 'ಸಿಡಿ' ವಿಚಾರದಲ್ಲಿ ಎಲ್ಲ ಪಕ್ಷಗಳ ಹಣೆಬರಹ ಒಂದೇ ಎಂಬುದು ಸಿಎಂ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತಿನಿಂದ ಬಹಿರಂಗವಾಗಿದೆ.