ಲಾಕ್ಡೌನ್ ತೆರವಿನ ಬಳಿಕ ಯಡಿಯೂರಪ್ಪ ಸಂಪುಟದ ಸಚಿವರಿಗೆ ಕಾದಿದೆ "ಶಾ'ಕ್!
ಬೆಂಗಳೂರು, ಮೇ 27: ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೆ ಒಂದು ರೀತಿಯಲ್ಲಿ ಸ್ತಬ್ದವಾಗಿದೆ. ಜನರ ಜೀವ ರಕ್ಷಣೆ ಬಿಟ್ಟು ಯಾವುದೇ ಕೆಲಸಕ್ಕೂ ಸರ್ಕಾರ ಗಮನ ಹರಿಸಿಲ್ಲ. ಆದರೆ ಇದೇ ಸ್ಥಿತಿ ಬಹಳಷ್ಟು ದಿನ ಮುಂದುವರೆಯುವ ಸಾಧ್ಯತೆಗಳಿಲ್ಲ. ಸರ್ಕಾರ ನಿಧಾನವಾಗಿ ಲಾಕ್ಡೌನ್ಗೆ ಒಂದೊಂದಾಗಿ ಸಡಿಲಿಕೆ ಕೊಡುತ್ತಿದೆ.
Recommended Video
ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಲಿದೆ. ಜುಲೈ 26ಕ್ಕೆ ಬಿ.ಎಸ್. ಯಡಿಯೂರಪ್ಪ ಅವರು 4ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ವರ್ಷವಾಗಲಿದೆ. ಪ್ರತಿಬಾರಿ ಸಿಎಂ ಆದಾಗಲೂ ಹೊಸ ಹೊಸ ಸಮಸ್ಯೆಗಳನ್ನು ಯಡಿಯೂರಪ್ಪ ಎದುರಿಸಿದ್ದಾರೆ. ಇದೀಗ ಕೊರೊನಾವೈರಸ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ ರೀತಿಯನ್ನು ಬಿಜೆಪಿ ಹೈಕಮಾಂಡ್ ಗಮನಿಸಿದೆ. ಆದರೆ ಸಚಿವರ ವಿಷಯಕ್ಕೆ ಬಂದರೆ ಅಭಿಪ್ರಾಯ ಹಾಗಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಸಂಪುಟ ಸಹೋದ್ಯೊಗಿಗಳಿಗೆ ಈಗಲೇ ಆತಂಕ ಶುರುವಾಗಿದೆ.
ಕೆಲವೇ ಸಚಿವರ ಸಾಥ್!
ದೇಶದಲ್ಲಿ ಕೊರೊನಾವೈರಸ್ ಮೊದಲ ಬಲಿ ಪಡೆದಿದ್ದು ಕರ್ನಾಟಕ ರಾಜ್ಯದಲ್ಲಿ. ಹೀಗಾಗಿ ದೇಶದ ಮೊದಲ ಕೋವಿಡ್ ಹಾಟ್ಸ್ಪಾಟ್ ಎಂದು ರಾಜ್ಯವನ್ನು ಗುರುತಿಸಲಾಗಿತ್ತು. ಆ ಸ್ಥಿತಿಯಿಂದ ಹೊರಬಂದು ರಾಜ್ಯವನ್ನು ಒಂದರಿಂದ 12ನೇ ಸ್ಥಾನಕ್ಕೆ ಇಳಿಸಿದ್ದು ಸಣ್ಣ ಸಾಧನೆ ಏನಲ್ಲ. ಈ ಸಾಧನೆ ಸಿಎಂ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ನಡೆದಿದೆ. ಆದರೂ ಕೆಲವು ಸಚಿವರು ಯಡಿಯೂರಪ್ಪ ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರಿಂದಲೇ ಇದು ಸಾಧ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಉಳಿದ ಸಚಿವರು?
ಕಾರ್ಯವೈಖರಿ ಪರಾಮರ್ಶೆ
ಕೆಲವೊಂದಿಷ್ಟು ಸಚಿವರು ಲಾಕ್ಡೌನ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಕಂಡುಬಂದಿಲ್ಲ. ಇಡೀ ರಾಜ್ಯ ಸಂಕಷ್ಟದ ಸ್ಥಿತಿ ಎದರಿಸುತ್ತಿರುವಾಗ ಮನೆಯಿಂದ ಹೊರಗೆ ಬರದಿದ್ದ ಸಚಿವರೂ ಇದ್ದಾರೆ. ಹೀಗಾಗಿ ಈಗ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಆಯಾ ಇಲಾಖೆಗಳ ಸಚಿವರ ಸಾಧನೆ, ಕಾರ್ಯವೈಖರಿ ಪರಾಮರ್ಶೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ ಎಂಬ ಮಾಹಿತಿಯಿದೆ.
ಅಮಿತ್ ಶಾ ಸೂಚನೆಯಂತೆ ಇದೀಗ ರಾಜ್ಯ ಬಿಜೆಪಿಯು ಸಚಿವರ ಕಾರ್ಯವೈಖರಿ ಹಾಗು ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಿದ ರೀತಿಯನ್ನು ಪರಾಮರ್ಶೆ ಮಾಡುತ್ತಿದೆ. ಅದರಿಂದಾಗಿ ಹಲವು ಸಚಿವರಿಗೆ ಕೊಕ್ ಕೊಡುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.
ಯಾರಿಗೆ ಕೊಕ್
ನೆರೆ ಪರಿಸ್ಥಿತಿ ಹಾಗು ಕೊರೊನಾವೈರಸ್ ಸಂಕಷ್ಟದ ಲಾಕ್ಡೌನ್ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈಬಿಡಲು ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿಯಿದೆ. ಅದರಂತೆ ರಾಜ್ಯ ಬಿಜೆಪಿಯಿಂದಲೂ ಸಚಿವರ ಕಾರ್ಯವೈಖರಿಯ ಬಗ್ಗೆ ಸರ್ವೆ ಆರಂಭಿಸಲಾಗಿದೆ. ಎರಡೂ ಸರ್ವೆ ಆಧರಿಸಿ ಸಚಿವರಿಗೆ ಕೊಕ್ ಕೊಡಲು ತೀರ್ಮಾನಿಸಲಾಗಿದೆ.
ಸರ್ಕಾರ ಹಾಗೂ ಬಿಜೆಪಿ ರಾಜ್ಯ ಘಟಕ ಕೊಡುವ ವರದಿ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷರೊಂದಿಗೆ ಚರ್ಚಿಸಿ ಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಕೆಲಸ ಮಾಡಿದವರಿಗೆ ಮತ್ತಷ್ಟು
ನೆರೆ ಪರಿಸ್ಥಿತಿ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ ಆಯಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಕೊಡಲು ಬಿಜೆಪಿ ತೀರ್ಮಾನಿಸಿದೆ.
ಆ ಮೂಲಕ ಸರ್ಕಾರವನ್ನು ಮತ್ತಷ್ಟು ಭದ್ರಪಡಿಸಿ ಪಕ್ಷ ಸಂಘಟನೆಯ ಗುರಿಯನ್ನು ಕೇಂದ್ರ ಬಿಜೆಪಿ ಇಟ್ಟುಕೊಂಡಿದೆ. ಈಗ ಸಧ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಸಚಿವರಾದವರಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಉತ್ತಮ ಕೆಲಸ ಮಾಡಿದ್ದಾರೆ. ಉಳಿದವರ ಕಾರ್ಯವೈಖರಿ ಸರಿಯಾಗಿಲ್ಲ. ತಮ್ಮ ಇಲಾಖೆಗಳಲ್ಲೂ ಉತ್ತಮ ಕೆಲಸ ಮಾಡಿಲ್ಲ. ಹೀಗಾಗಿ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.
ಸಮುದಾಯದ ನಾಯಕರು
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮರ್ಥರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಚರ್ಚೆ ನಡೆದಿದೆ. ಜೊತೆಗೆ ಕೆಲವರ ಖಾತೆಗಳನ್ನೂ ಬದಲಾವಣೆ ಮಾಡಿಸುವ ಸಂಬಂಧವೂ ಪಕ್ಷದಲ್ಲಿ ಚರ್ಚೆ ಆಗಿದೆ. ಸಮುದಾಯಗಳನ್ನು ಪ್ರತಿನಿಧಿಸುವ ಹಿರಿಯ ಸಚಿವರನ್ನು ಕೈಬಿಡುವುದು ಸಮಂಜಸವಾಗುವುದಿಲ್ಲ. ಹೀಗಾಗಿ ಸಮುದಾಯದ ನಾಯಕರು ಎಂದು ಗುರುತಿಸಿಕೊಂಡಿರುವ ಹಿರಿಯ ಸಚಿವರ ಖಾತೆ ಬದಲಾವಣೆ ಮಾಡಿ. ಅಂಥವರಿಗೆ ಮಹತ್ವವಲ್ಲದ ಖಾತೆಗಳನ್ನು ಕೊಡಿ. ಆ ಮೂಲಕ ಸಮುದಾಯಕ್ಕೂ ಮನ್ನಣೆ ಕೊಟ್ಟಂತಾಗುತ್ತದೆ. ಕೆಲಸ ಮಾಡುವ ಅರ್ಹ ಶಾಸಕರಿಗೆ ಪ್ರಭಾವಿ ಖಾತೆಗಳನ್ನು ಕೊಡಲು ಬಿಜೆಪಿ ತೀರ್ಮಾನಿಸಿದೆ.
ಬಿಜೆಪಿಗೆ ಬಂದವರು ಬಚಾವ್
ಇನ್ನು ಸಚಿವರು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿ, ಮಂತ್ರಿಸ್ಥಾನ ಗಿಟ್ಟಿಸಿಕೊಂಡಿರುವವರನ್ನು ಸಂಪುಟದಿಂದ ಕೈಬಿಡದಿರಲು ತೀರ್ಮಾನಿಸಲಾಗಿದೆ. ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ ಮಂತ್ರಿಯಾದವರು ಸಾಧ್ಯವಾದಷ್ಟು ಕೆಲಸಗಳನ್ನು ಕಡಿಮೆ ಕಾಲದಲ್ಲಿ ಮಾಡಿದ್ದಾರೆ.
ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ ವಿರೋಧ ಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿ ಬಿಜೆಪಿ ಸೇರಿ ಶಾಸಕರಾಗಿ ಮಂತ್ರಿಗಳಾಗಿರುವ 9 ಜನರಿಗೆ ಸಧ್ಯಕ್ಕೆ ಯಾವುದೇ ತೊಂದರೆಯಿಲ್ಲ. ಹೀಗಾಗಿ ಬಿಜೆಪಿಗೆ ಬಂದು ಚುನಾಯಿತರಾಗಿ ಮಂತ್ರಿಗಳಾದವರನ್ನು ಸಂಪುಟದಿಂದ ಕೈಬಿಡದಿರಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿಯಿದೆ.
ವರ್ಷಾಚರಣೆ ಬಳಿಕ ವಿಸ್ತರಣೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ತೀರ್ಮಾನ ಮಾಡಲಾಗಿದೆ. ಸರಳ ಕಾರ್ಯಕ್ರಮದ ಮೂಲಕ ಜನಹಿತ ಕಾರ್ಯಕ್ರಮ ಮಾಡಿರುವುದನ್ನು ಜನರಿಗೆ ತಿಳಿಸುವ ಗುರಿಯನ್ನು ಸರ್ಕಾರ ಹಾಗೂ ಬಿಜೆಪಿ ಹೊಂದಿವೆ.
ಸಂಪೂರ್ಣವಾಗಿ ಲಾಕ್ಡೌನ್ ತೆರವಾದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಮೂಲ ಬಿಜೆಪಿಯ ಹಲವು ಹಿರಿಯರು ಮಂತ್ರಿಸ್ಥಾನ ಕಳೆದುಕೊಳ್ಳುವುದು ಖಚಿತ ಎಂಬುದು ಬಿಜೆಪಿ ವಲಯದಲ್ಲಿ ಬಹು ಚರ್ಚಿತವಾಗುತ್ತಿರುವ ವಿಚಾರ.