ಧನ್ವಂತರಿ ಹೋಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ!
ಬೆಂಗಳೂರು, ಜು. 22: ರಾಜ್ಯದಲ್ಲಿ ಒಂದೆಡೆ ನಾಯಕತ್ವ ಬದಲಾವಣೆ ವಿಚಾರವಾಗಿ ಬಹಳಷ್ಟು ಬೆಳವಣಿಗೆಗಳಾಗುತ್ತಿದೆ. ಮತ್ತೊಂದೆಡೆ ಇದೇ ವೇಳೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಧನ್ವಂತರಿ ಯಾಗದಲ್ಲಿ ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಿಂದ ತೆರಳಿದ್ದ ಯಡಿಯೂರಪ್ಪ ಅವರು ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಧನ್ವಂತರಿ ಯಾಗದಲ್ಲಿ ಭಾಗಿಯಾದರು. ವರ್ತೂರಿನ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಧನ್ವಂತರಿ ಯಾಗವನ್ನು ಹಮ್ಮಿಕೊಂಡಿದೆ. ಯಾಗದಲ್ಲಿ ಭಾಗವಹಿಸುಸಲು ತೆರಳುವ ಮೊದಲು ಹಲವು ಮಠಾಧೀಶರನ್ನು ಭೇಟಿ ಮಾಡಿದ್ದ ಯಡಿಯೂರಪ್ಪ ಅವರು, ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಸ್ವಾಮೀಜಿಗಳಿಗೆ ಹೇಳಿದ್ದರು. ಧನ್ವಂತರಿ ಯಾಗದಲ್ಲಿ ಪೇಜಾವರ ಶ್ರೀಗಳು ಹಾಗೂ ಆದಿಚುಂನಗಿರಿ ಮಠದ ನಿರ್ಮಲಾನಂದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.
ಯಾಗ ಕಾರ್ಯದಲ್ಲಿ ಭಾಗವಹಿಸಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹತ್ವದ ನಿರ್ಧಾರ ಪ್ರತಿಕಟಿಸಿದ್ದಾರೆ. ಜುಲೈ 26ರಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಗತುಂಬಲಿದೆ, ಅಂದು ನಡೆಯುವ ಕಾರ್ಯಕ್ರಮದ ಬಳಿಕ ಸಿಎಂ ಯಡಿಯೂರಪ್ಪ ಅವರು ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ನಿನ್ನೆ ರಾತ್ರಿ ಮಹತ್ವದ ಟ್ವೀಟ್ ಮಾಡಿದ್ದ ಅವರು, ಯಾರೂ ಕೂಡ ತಮ್ಮ ಪರವಾಗಿ ಪ್ರತಿಭಟನೆ ಮಾಡುವುದಾಗಿ ಅಥವಾ ಹೇಳಿಕೆಗಳನ್ನು ಕೊಡುವುದಾಗಲಿ ಮಾಡಬಾರದು. ಪಕ್ಷ ನನಗೆ ತಾಯಿ ಸಮಾನ, ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತವೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ವಿನಂತಿಸಿದ್ದರು. ಇದೀಗ ಯಾಗದಲ್ಲಿ ಭಾಗವಹಿಸಿದ ಬಳಿಕ ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮ ಕುರಿತು ಮೊದಲ ಸಲ ಮೌನ ಮುರಿದು ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, "ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ" ಎಂದಿದ್ದಾರೆ. "ಇದೇ ಜುಲೈ 25 ರಂದು ವರಿಷ್ಠರು ಸೂಚನೆ ಕೊಡುತ್ತಾರೆ. ಜು. 26ರ ನಂತರ ರಾಷ್ಟ್ರೀಯ ನಾಯಕರ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಯಾವುದೇ ಪ್ರತಿಭಟನೆ, ಹೇಳಿಕೆ ಸೂಕ್ತ ಅಲ್ಲ. ಮಠಾಧೀಶರು ನನಗೆ ಬೆಂಬಲ ಕೊಟ್ಟು ಆಶೀರ್ವದಿಸಿದ್ದಾರೆ. ಇಂಥ ಬೆಂಬಲ, ಆಶೀರ್ವಾದ ಹಿಂದೆ ಯಾರಿಗೂ ಸಿಕ್ಕಿಲ್ಲ. ಯಡಿಯೂರಪ್ಪ ಕೆಲಸ ಮೆಚ್ಚಿ ವರಿಷ್ಠರು 75 ಆದ ಬಳಿಕ 78ನೇ ವಯಸ್ಸಿನ ವರೆಗೂ ಅಧಿಕಾರಕ್ಕೆ ಅವಕಾಶ ಮಾಡಿ ಕೊಟ್ಟಿದಾರೆ. ಮುಂದೆ ಪಕ್ಷ ಮತ್ತೆ ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ. ಜು. 26ಕ್ಕೆ ಸರ್ಕಾರದ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಲಿದ್ದೇವೆ. ಆ ಕಾರ್ಯಕ್ರಮದ ಬಳಿಕ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ವರಿಷ್ಠರ ತೀರ್ಮಾನವೇ ನನ್ನ ತೀರ್ಮಾನ" ಎಂದು ಮೊದಲ ಬಾರಿ ಮಾತನಾಡಿದ್ದಾರೆ.