ಕೊರೊನಾದಿಂದ ಅನಾಥರಾದ ಮಕ್ಕಳಿಗೆ "ಬಾಲ ಸೇವಾ ಯೋಜನೆ" ಘೋಷಿಸಿದ ಸಿಎಂ
ಬೆಂಗಳೂರು, ಮೇ 29: ಕೊರೊನಾ ಸೋಂಕಿನ ಕಾರಣವಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ "ಬಾಲ ಸೇವಾ ಯೋಜನೆ"ಯನ್ನು ಘೋಷಣೆ ಮಾಡಿದರು.
ಈ ಯೋಜನೆಯಡಿ, ಕೊರೊನಾ ಕಾರಣವಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪ್ರತಿ ತಿಂಗಳು 3500 ರೂ ಹಾಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ವಿಸ್ತೃತ ಕುಟುಂಬದ ಆಸರೆಯಿಲ್ಲದ, 10 ವರ್ಷದೊಳಗಿನವರಾಗಿದ್ದು, ಕೋವಿಡ್ ನಿಂದಾಗಿ ಅನಾಥರಾಗಿರುವ ಮಕ್ಕಳ ಪೋಷಣೆ ಮತ್ತು ಅವರಿಗೆ ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಹೇಳಿದರು.
ಕೊರೊನಾದಿಂದ ಅನಾಥರಾಗಿರುವ ಮಕ್ಕಳ ನೋವು ಅರ್ಥ ಮಾಡಿಕೊಂಡು ಕಾಳಜಿ ವಹಿಸಿ; ಸುಪ್ರೀಂ ಕೋರ್ಟ್ ಸೂಚನೆ
Recommended Video
21 ವರ್ಷ ತುಂಬಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು 1 ಲಕ್ಷ ರೂ. ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ/ಹಿತೈಷಿಗಳನ್ನು ನೇಮಿಸಲಾಗುವುದು. ಯೋಜನೆಯ ಸಮಗ್ರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.