ಕೊರೊನಾ ಸಂಕಷ್ಟದಲ್ಲಿರುವಾಗ ರಾಜ್ಯದಲ್ಲಿ ಇದೇನಿದು ರಾಜಕೀಯ!
ಬೆಂಗಳೂರು, ಏ. 07: ಚೀನಾದ ವುಹಾನ್ನಲ್ಲಿ ಹುಟ್ಟಿದ ಕೊರೊನಾ ವೈರಸ್ ಭಾರತದಲ್ಲಿ ಹೊಸ ಸಮಸ್ಯೆ ತಂದಿಟ್ಟಿದೆ. ಚೀನಾದಿಂದ ಭಾರತಕ್ಕೆ ಕೋವಿಡ್-19 ಕಾಣಿಸಿಕೊಂಡಿದ್ದ ಆರಂಭದಲ್ಲಿ ದೇಶದ ಜನರಲ್ಲಿ ಇದ್ದ ಒಗ್ಗಟ್ಟು ಈಗ ಕಾಣುತ್ತಿಲ್ಲ. ಕೊರೊನಾ ವೈರಸ್ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜೀವಹಾನಿಯನ್ನು ಮಾತ್ರ ಮಾಡುತ್ತಿದೆ. ಆದರೆ ಭಾರತದಲ್ಲಿ ಜೀವಹಾನಿಯೊಂದಿಗೆ ಸಮಾಜ ಒಡೆಯುವ ಕೆಲಸವನ್ನೂ ಈ ವೈರಸ್ ಮಾಡಿದೆ.
ಬಹುಶಃ ರೋಗವೊಂದಕ್ಕೆ ಧರ್ಮದ ಬಣ್ಣ ಬಂದಿದ್ದು ಇತಿಹಾಸದಲ್ಲಿ ಇದೇ ಮೊದಲು ಇರಬೇಕು. ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ಡೌನ್ ಘೋಷಣೆ ಮಾಡಿದ ಆರಂಭದಲ್ಲಿ ವೈರಸ್ ಬಗೆಗಿದ್ದ ಭಯವೀಗ ಬೇರೆಯ ರೂಪ ಪಡೆದುಕೊಂಡಿದೆ. ಆದರೆ ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಡೆಹಾಕಿದ್ದಾರೆ. ಪ್ರಕರಣ ದಾಖಲಿಸುವ ಎಚ್ಚರಿಯನ್ನು ಕೊಟ್ಟಿದ್ದಾರೆ.
ಕೊರೊನಾ ವೈರಸ್ಗೆ ಅಂಟಿದ ಧರ್ಮದ ಬಣ್ಣ!
ಹೌದು ಇಡೀ ದೇಶ ಕೊರೊನಾ ವೈರಸ್ ಸಂಕಷ್ಟದಲ್ಲಿದ್ದಾಗ ಮತ್ತೊಂದು ಸಮಸ್ಯೆ ಎದುರಾಗಿದೆ. ಅಲ್ಪಸಂಖ್ಯಾತ ಸಮುದಾಯದ ಕೆಲವರು ಕೊರೊನಾ ವೈರಸ್ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿವೆ. ಕೋವಿಡ್-19 ಬರುವುದಕ್ಕಿಂತ ಮೊದಲು ಚಿತ್ರೀಕರಿಸಿದ್ದ ವಿಡಿಯೊಗಳನ್ನು ಹರಿಯ ಬಿಡಲಾಗುತ್ತಿದೆ. ಖಂಡಿತವಾಗಿಯೂ ಜನರಲ್ಲಿ ಭಯವನ್ನುಂಟು ಮಾಡುವಂತಹ ಕೃತ್ಯಕ್ಕೆ ಅಲ್ಪಸಂಖ್ಯಾತ ಅಥವಾ ಬಹುಸಂಖ್ಯಾತ ಸಮುದಾಯ ಇಳಿಯುವುದು ಕಾನೂನಿಗೆ ವಿರುದ್ಧ. ಆದರೆ ಯಾರೊ ಒಂದಿಷ್ಟು ಜನರು ಮಾಡುವ ಕುಕೃತ್ಯಗಳಿಗೆ ಇಡೀ ಒಂದು ಸಮುದಾಯವನ್ನು ಹೊಣೆ ಮಾಡುವುದು ಎಷ್ಟು ಸರಿ? ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಮಂಗಳವಾರದಿಂದ ಲಾಕ್ಡೌನ್ ಇನ್ನಷ್ಟು ಕಠಿಣ: ಯಡಿಯೂರಪ್ಪ ಎಚ್ಚರಿಕೆ
ಆಶಾ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ
ಕೊರೊನಾ ವೈರಸ್ ಸಮುದಾಯಕ್ಕೆ ಹರಡದಂತೆ ತಡೆಯಲು ಇಡೀ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆರಂಭದಲ್ಲಿಯೆ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಂದೆರಡು ಪ್ರದೇಶಗಳಲ್ಲಿ ಲಾಕ್ ಡೌನ್ ಗೆ ವಿರೋಧ ವ್ಯಕ್ತವಾಗಿತ್ತು. ಆಗ ಪೊಲೀಸರ ಮೇಲೆ ಹಲ್ಲೆಯೂ ಆಗಿತ್ತು. ನಂತರ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಆರೋಪಿ ಪೋಲೀಸರ ಮೇಲೆಯೆ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು. ಅದಾದ ಬಳಿಕ ದೇಶದಲ್ಲಿ ಅಲ್ಲಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆದಿವೆ. ಬೆಂಗಳೂರಿನ ಸಾಧಿಕ್ ಪಾಳ್ಯದಲ್ಲಿಯೂ ಕೊರೊನಾ ವೈರಸ್ ಕುರಿತು ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತರ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿತ್ತು.
ಈ ಘಟನೆಗಳನ್ನು ಇಟ್ಟುಕೊಂಡು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯುವ ಚರ್ಚೆ ದಾರಿ ಬದಲಿಸಿ ಮುಸ್ಲಿಂ ಸಮುದಾಯದ ಮೇಲೆ ಚರ್ಚೆ ಶುರುವಾಗಿತ್ತು. ಕೆಲವರು ಮಾಡಿದ ತಪ್ಪನ್ನು ಇಡೀ ಸಮುದಾಯಕ್ಕೆ ಕಟ್ಟುವ ವ್ಯವಸ್ಥಿತ ಷಡ್ಯಂತ್ರ ನಡೆದಿತ್ತು.
ಖಡಕ್ ಎಚ್ಚರಿಕೆ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ
ಆಶಾ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ಮಾಡುವಂತಹ ಒಂದೆರಡು ಘಟನೆಗಳು ನಡೆದಿವೆ. ಅಂಥವರ ಮೇಲೆ ಕ್ರಮವನ್ನು ತೆಗೆದುಕೊಂಡಿದ್ದೇವೆ. ಅಲ್ಪಸಂಖ್ಯಾತ ಮುಸ್ಲಿಂ, ಮುಸ್ಲಿಂ ಶಾಸಕರ ಸಭೆಯನ್ನು ನಾನು ಕರೆದಿದ್ದೆ. ಅವರು ಎಲ್ಲಿಯವರೆಗೆ ಅಂದರೆ ಮೊದಲ ಬಾರಿಗೆ ನಾವು ಮಸೀದಿಗಳಲ್ಲಿ ನಾವು ನಮಾಜ್ ಮಾಡಲ್ಲ, ಮನೆಯಲ್ಲಿಯೇ ನಮಾಜ್ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಅವರು ಸಹಕಾರ ಕೊಡುತ್ತಿದ್ದಾರೆ. ಯಾರೊಬ್ಬರು ಸಹ ಒಂದು ಶಬ್ದವನ್ನು ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಬಗ್ಗೆ ಮಾತನಾಡ ಕೂಡದು. ನಾನು ಎಚ್ಚರಿಕೆಯನ್ನು ಕೊಡುತ್ತಿದ್ದೇನೆ. ಆ ತರ ಯಾರಾದರೂ, ಎಲ್ಲೊ ಒಂದು ಸಣ್ಣ ಘಟನೆ ನಡೆದರೂ ಇಡೀ ಮುಸ್ಲಿಂ ಸಮುದಾಯವೇ ಜವಾಬ್ದಾರರು ಅಂತಾ ಮಾತುಗಳನ್ನು ಹೇಳುವವರ ಮೇಲೂ ನಾನು ಕ್ರಮವನ್ನು ತೆಗೆದುಕೊಳ್ತೇನೆ, ನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.
'ಕೊರೊನಾ ಎಂದು ಕೋಮುಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ'
ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಬಿಎಸ್ವೈ
ಕೋವಿಡ್-19 ವೈರಸ್ ಹರಡುವುದನ್ನು ತಡೆಯಲು ಈ ಇಳಿ ವಯಸ್ಸಿನಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯುವ ಸಚಿವರನ್ನೂ ಮೀರಿಸುವ ಹಾಗೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಭಯದಿಂದ ಕೆಲ ಶಾಸಕರು ತಮ್ಮ ಕ್ಷೇತ್ರಗಳಿಗೂ ಹೋಗಿಲ್ಲ. ಯಡಿಯೂರಪ್ಪ ಅವರಿಗಿಂತ ಕಡಿಮೆ ವಯಸ್ಸಿನ ಶಾಸಕರೂ ಕೂಡ ಕೋವಿಡ್-19ಗೆ ಭಯಗೊಂಡಿದ್ದಾರೆ. ಅಂತಹ ಶಾಸಕರಿಗೆ ಕ್ಷೇತ್ರದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಇನ್ನು ಕೆಲ ಶಾಸಕರು, ಸಂಸದರು ಜೀವ ಇದ್ದರೆ ಜನ, ಅಧಿಕಾರ ಇರುತ್ತೆ ಬಿಡಿ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದಾರಂತೆ. ಮತಹಾಕಿ ಗೆಲ್ಲಿಸಿದ ಸಮಯದಲ್ಲಿ ಮತದಾರರ ಸಹಾಯಕ್ಕೆ ಬರೆದೇ ಕಾಣೆಯಾಗಿರುವ ಶಾಸಕರಿಗೆ ಮನುಷ್ಯತ್ವದ ಕೊರತೆ ಎಂದು ಜನರು ತಮ್ಮಲ್ಲಿಯೆ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಕೊರೊನಾ ಎಂಬ ಈ ವೈರಸ್ ಹಲವು ಮುಖವಾಡಗಳನ್ನು ಕಳಚಿದೆ. ಇದೇ ನೆಪದಲ್ಲಿ ಸಮಾಜ ಒಡೆಯದಿರಲಿ ಎಂಬುದು ಪ್ರಜ್ಞಾವಂತರ ಒತ್ತಾಸೆ!