ಕೇಂದ್ರದ 2ನೇ ದಿನದ ಘೋಷಣೆ ಬಗ್ಗೆ ಸಿಎಂ ಯಡಿಯೂರಪ್ಪ ಹೇಳುವುದೇನು?
ಬೆಂಗಳೂರು, ಮೇ.14: ಭಾರತ ಲಾಕ್ ಡೌನ್ ನಡುವೆ ಸ್ವಾವಲಂಬಿ ದೇಶವನ್ನು ಕಟ್ಟುವುದಕ್ಕಾಗಿ 20 ಲಕ್ಷ ಕೋಟಿ ರೂಪಾಯಿ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ.
ಗುರುವಾರವಷ್ಟೇ ಎರಡನೇ ದಿನ ಆತ್ಮನಿರ್ಭರ್ ಭಾರತ್ ಆರ್ಥಿಕ ಯೋಜನೆಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕೇಂದ್ರೀಕೃತವಾಗಿರುವಂತೆ ಯೋಜನೆಗಳನ್ನು ಘೋಷಿಸಿದ್ದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಘೋಷಿಸಿದ ಎರಡನೇ ದಿನದ ಪ್ಯಾಕೇಜ್ ಗಳ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಬಗ್ಗೆ ಬಿಎಸ್ ವೈ ಹೇಳುವುದೇನು ಎಂಬುದರ ಕುರಿತು ವರದಿ ಇಲ್ಲಿದೆ ನೋಡಿ.
ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಇರುವ ಕಾಳಜಿ
ಆತ್ಮನಿರ್ಭರ್ ಭಾರತ್ ಆರ್ಥಿಕ ಪುನಶ್ಚೇತನ ಯೋಜನೆಯೆ ಎರಡನೇ ದಿನದ ಘೋಷಣೆಗಳು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ಬಿಂಬಿಸುತ್ತದೆ. ಅಲ್ಲದೆ ಎಲ್ಲರನ್ನೊಳಗೊಂಡ ಪ್ರಗತಿಯ ಆಶಯವನ್ನು ದೃಢಪಡಿಸುತ್ತದೆ ಎಂದು ಸಿಎಂ ತಿಳಿಸಿದ್ದಾರೆ.
ಭಾರತದಲ್ಲಿನ ವಲಸೆ ಕಾರ್ಮಿಕರಿಗೆ ವರ
ದೇಶದಲ್ಲಿನ ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರು, ಕೂಲಿ ಕಾರ್ಮಿಕರು ಮೊದಲಾದ ಎಲ್ಲ ಸಮುದಾಯಗಳಿಗೆ ಮೂಲಸೌಲಭ್ಯ ಮತ್ತು ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿದೆ. ರಾಜ್ಯ ಮತ್ತು ಪ್ರಾಂತೀಯ ವಲಯದಲ್ಲಿ ಇರುವ ಕನಿಷ್ಠ ವೇತನ ತಾರತಮ್ಯ ತೆಗೆದು ಹಾಕುವುದು, ತಮ್ಮ ಊರುಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ವರದಾನವಾಗಲಿದೆ ಸಿಎಂ ಬಿಎಸ್ ವೈ ಹೇಳಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ಸೌಲಭ್ಯ
ಭಾರತದ 8 ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲದಿದ್ದರೂ 3,500 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಪಡಿತರ ವಿತರಿಸಲಾಗುತ್ತದೆ. ವಲಸೆ ಕಾರ್ಮಿಕರಿಗೆ ಮನೆ ಬಾಡಿಗೆ ದರ ನಿಗದಿ ಮೊದಲಾದ ಕ್ರಮಗಳು ಅವರಿಗೆ ಹೆಚ್ಚಿನ ಭದ್ರತೆ ನೀಡಲಿದೆ. ಮುದ್ರಾ ಶಿಶು ಸಾಲ ಯೋಜನೆಗೆ ಬಡ್ಡಿ ರಿಯಾಯಿತಿ, ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿವರೆಗೆ ವಿಶೇಷ ಸಾಲ ಸೌಲಭ್ಯ ಒದಗಿಸಲು 5 ಸಾವಿರ ಕೋಟಿ ಅನುದಾನ ನಿಗದಿ ಪಡಿಸಿರುವುದು ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಮಧ್ಯಮ-ಕೆಳ ವರ್ಗದವರಿಗೆ ಗೃಹಸಾಲ ಸಬ್ಸಿಡಿ
ಮಧ್ಯಮ, ಕೆಳ ಮಧ್ಯಮ ವರ್ಗದವರಿಗೆ ಗೃಹ ಸಾಲ ಸಬ್ಸಿಡಿ ಯೋಜನೆಗೆ 70 ಸಾವಿರ ಕೋಟಿ ರೂ. ನೆರವು ಘೋಷಿಸಿರುವುದು ಈ ವರ್ಗದ ಜನರ ಕನಸು ಸಾಕಾರಗೊಳಿಸಲು ನೆರವಾಗಲಿದೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಬೆಳೆ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆಗೆ ರೈತ ನಿಧಿಗೆ ಹೆಚ್ಚುವರಿ 30 ಸಾವಿರ ಕೋಟಿ ರೂಪಾಯಿ ಸೇರ್ಪಡೆ. ಸಣ್ಣ ರೈತರು, ಪಶುಪಾಲಕರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನಡಿ 2 ಲಕ್ಷ ಕೋಟಿ ಸಾಲ ಸೌಲಭ್ಯ ನೀಡುವ ಕ್ರಮಗಳು ಸಂಕಷ್ಟಕ್ಕೊಳಗಾದ ಈ ವಲಯಗಳ ಜನರಿಗೆ ಉಸಿರು ನೀಡಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.