ಕೊರೊನಾ ವೈರಸ್: ಸಿಎಂ ಯಡಿಯೂರಪ್ಪ ವಿರುದ್ಧ ದೂರು ದಾಖಲು
ಬೆಂಗಳೂರು, ಮಾ. 17: ಕೊರೊನಾ ವೈರಸ್ ಹರಡುವಿಕೆ ವಿಚಾರವಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಂತರ ದೂರು ದಾಖಲಾದ ಬಳಿಕ ಇದೀಗ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮೇಲೆ ಕೊರೊನಾ ವೈರಸ್ ಹರಡಿಸುವ ಪೊತೂರಿ ಆರೋಪದಲ್ಲಿ ಮುಜಾಫರ್ಪುರ್ ನ್ಯಾಯಾಲಯದಲ್ಲಿ ವಕೀಲ ಸುಧೀರ್ ಕುಮಾರ್ ಓಜಾ ದೂರು ದಾಖಲಿಸಿದ್ದರು.
ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕೊರೊನಾ ವೈರಸ್ ತಡೆಗಟ್ಟಲು ಇರುವ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಕೊರೊನಾ ವೈರಸ್ ತಡೆಗಟ್ಟಲು ಮಾದರಿಯಾಗಿರಬೇಕಾಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆಂದು ದೂರಿನಲ್ಲಿ ದಾಖಲಿಸಲಾಗಿದೆ.
ತಮ್ಮ ಆದೇಶವನ್ನೇ ತಾವೇ ಉಲ್ಲಂಘಿಸಿದ್ದ ಸಿಎಂ ಯಡಿಯೂರಪ್ಪ
ಕೊರೊನಾ ವೈರಸ್ ತಡೆಯುವ ಹಿನ್ನೆಲೆಯಲ್ಲಿ ಮದುವೆ ಸೇರಿದಂತೆ ಜನರು ಸೇರುವ ಕಾರ್ಯಕ್ರಮಗಳನ್ನು ರದ್ದು ಮಾಡಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ. ಆದರೆ ಅವರೇ ಮಾಡಿದ್ದ ಆದೇಶವನ್ನು ಉಲ್ಲಂಘಿಸಿ, ಇಡೀ ಜಿಲ್ಲಾಡಳಿತದೊಂದಿಗೆ ಬೆಳಗಾವಿಯಲ್ಲಿ ಮಾ. 15 ರಂದು ಮದುವೆಯಲ್ಲಿ ಭಾಗವಹಿಸಿದ್ದರು. ಕೊರೊನಾ ವೈರಸ್ ಹರಡುವ ಶಂಕೆ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಲ್ಲಿ ನೂರಕ್ಕು ಹೆಚ್ಚು ಜನರು ಸೇರುವಂತಿಲ್ಲ ಎಂದು ಸರ್ಕಾರ ಆದೇಶ ಮಾಡಿದೆ. ಆದರೆ ಸರ್ಕಾರದ ಆದೇಶವನ್ನು ಸ್ವತಃ ಮುಖ್ಯಮಂತ್ರಿಯವರೇ ಉಲ್ಲಂಘನೆ ಮಾಡಿದ್ದಾರೆ. ಇದು ಕ್ರಮಿನಲ್ ಅಪರಾಧವಾಗಿದೆ ಎಂದು ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಮಾನವ ಹಕ್ಕುಗಳ ಹೋರಾಟಗಾರ ಟಿ. ನರಸಿಂಹ ಮೂರ್ತಿ ಹೇಳಿದ್ದಾರೆ.
ಸ್ವತಃ ಅದ್ಧೂರಿ ಮದುವೆಯಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ
ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧ
ಜಗತ್ತಿನಾದ್ಯಂತ ಆತಂಕ ಸೃಷ್ಟಿ ಮಾಡೊರುವ ಕೊರೊನಾ ವೈರಸ್ ತಡೆಗಟ್ಟಲು ಅನುಕೂಲವಾಗುವಂತೆ ಮಾ. 11 ರಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿಗಳನ್ನು ಉಲ್ಲಂಘಟನೆ ಮಾಡುವುದು ಐಪಿಸಿ ಸೆಕ್ಷನ್ 188ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದಾಗ್ಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಾದ ಬಸವರಾಜ್ ಬೊಮ್ಮಾಯಿ, ಶ್ರೀಮಂತ ಪಾಟೀಲ್ ಸೇರಿದಂತೆ ಇಡೀ ಜಿಲ್ಲಾಡಳಿತದೊಂದಿಗೆ ಬೆಳಗಾವಿಯಲ್ಲಿ ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ಡಾ. ಪೂಜಾ ವಿವಾಹದಲ್ಲಿ ಭಾಗಿಯಾಗಿದ್ದು ಕಾನೂನಿಗೆ ವಿರುದ್ಧವಾಗಿದ್ದು, ರಾಜ್ಯಪಾಲರು ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಕೊವಿಡ್-19ನಿಂದ ದೇಶದಲ್ಲೇ ಮೊದಲ ಸಾವು ರಾಜ್ಯದಲ್ಲಿ ಸಂಭವಿಸಿದೆ
ಕೊರೊನಾ ವೈರಸ್ನಿಂದಾಗಿ ದೇಶದಲ್ಲೆ ಮೊದಲ ಸಾವು ರಾಜ್ಯದಲ್ಲಿ ಆಗಿದೆ. ಜೊತೆಗೆ ದೇಶದಲ್ಲಿ ನೂರಕ್ಕು ಹೆಚ್ಚು ಜನರು ಕೊವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ. ಇಂತಹ ಆತಂಕದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಾರಿಗೆ ತಂದಿರುವ ಮಾರ್ಗಸೂಚಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಜನಪ್ರತಿನಿಧಿಗಳು ಅಪಹಾಸ್ಯ ಮಾಡಿದಂತಾಗಿದೆ. ಇದು ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬಂತಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಕೊರೊನಾ ಭೀತಿ; ಯಡಿಯೂರಪ್ಪ ಭೇಟಿಗೆ ಮಾರ್ಗಸೂಚಿಗಳು
ಹೈಕೋರ್ಟ್ ಮೊರೆ ಹೋಗಲು ಚಿಂತನೆ
ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋಗುವವರಿಗೂ ಹಲವು ಮಾರ್ಗಸೂಚಿಗಳನ್ನು ಸರ್ಕಾರ ನಿಗದಿ ಮಾಡಿದೆ. ಆದರೆ ಸಿಎಂ ಮದುವೆಯಲ್ಲಿ ಭಾಗವಹಿಸಿದ್ದು, ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿರುವುದು ಕ್ರಮಿನಲ್ ಪ್ರಕರಣವಾಗಿದ್ದು, ರಾಜ್ಯಪಾಲರು ಕೈಗೊಳ್ಳುವ ತೀರ್ಮಾನವನ್ನು ದೂರುದಾರ ನರಸಿಂಹ ಮೂರ್ತಿ ಎದುರು ನೋಡುತ್ತಿದ್ದಾರೆ. ರಾಜ್ಯಪಾಲರ ನಡೆಯನ್ನು ನೋಡಿಕೊಂಡು ಹೈಕೋರ್ಟ್ ಮೊರೆ ಹೋಗಲು ದೂರುದಾರರು ತೀರ್ಮಾನ ಮಾಡಿದ್ದಾರೆ.