ಏ.29ರಂದು ಸಿಎಂ ದೆಹಲಿಗೆ: ಸಚಿವ ಸಂಪುಟ ವಿಸ್ತರಣೆ ಅಂತಿಮ?
ಬೆಂಗಳೂರು, ಏ.27: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸರ್ಕಸ್ ನಡೆದಿರುವುದರ ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏ.29ರಂದು ದೆಹಲಿಗೆ ಹೊರಟಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಸಮೀಪಿಸುತ್ತಿದ್ದರೂ ಸಂಪುಟ ವಿಸ್ತರಣೆಗೆ ಸಮಯ ಕೂಡಿಬರುತ್ತಿಲ್ಲ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಾದರೂ ಸಂಪುಟ ವಿಸ್ತರಣೆ ಮಾಡಿ ಎಂದು ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ.
ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಯಿತಾದರೂ ಅಂತಿಮ ಆಗಲಿಲ್ಲ. ಕರ್ನಾಟಕದ ಸಂಪುಟ ವಿಸ್ತರಣೆ ಸಂಬಂಧ ನೀವು ಪಟ್ಟಿ ಕೊಡಿ. ದೆಹಲಿಯಲ್ಲಿ ಪಕ್ಷದ ವರಿಷ್ಠರು ಕುಳಿತು ಚರ್ಚಿಸುತ್ತೇವೆ. ಆ ಬಳಿಕ ನಿಮ್ಮನ್ನು ಬರಹೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿ ಹೋಗಿದ್ದರು. ಹೈಕಮಾಂಡ್ ನಾಯಕರ ಬರ ಹೇಳುವುದನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕಾದು ಕುಳಿತಿದ್ದಾರೆ.
ಸಿಎಂ ದೆಹಲಿಗೆ:
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೊರಟಿದ್ದಾರೆ. 'ಏ.29ರಂದು ರಾತ್ರಿ 8 ಗಂಟೆ ಸುಮಾರಿಗೆ ರೆಗ್ಯುಲರ್ ವಿಮಾನದ ಮೂಲಕ ನವದೆಹಲಿಗೆ ಹೋಗಲಿದ್ದಾರೆ. ಏಪ್ರಿಲ್ 30 ರಂದು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ' ಎಂದು ಮುಖ್ಯಮಂತ್ರಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಸಂಪುಟ ವಿಸ್ತರಣೆ ಅಂತಿಮವಾಗುತ್ತದೆಯೇ?
ಸದ್ಯ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇತ್ತೀಚೆಗೆ ಖಾಲಿಯಾದ ಕೆ.ಎಸ್. ಈಶ್ವರಪ್ಪ ಅವರ ಸ್ಥಾನ ಸಹಿತ ಒಟ್ಟು ಐದು ಸ್ಥಾನಗಳು ಖಾಲಿ ಇವೆ. ಕೆಲ ಹಳಬರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಇದೆ. ಒಟ್ಟಾರೆ 12-15 ಹೊಸ ಸಚಿವರು ಬರಲಿದ್ದಾರೆ ಎಂಬ ಊಹಾಪೋಹಗಳು ಬಹುದಿನಗಳಿಂದ ಹರಿದಾಡುತ್ತಿವೆ. ಪ್ರತಿ ಸಾರಿ ಹೋಗಿ ಬರಿಗೈಲಿ ವಾಪಸಾಗುತ್ತಿರುವ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯಾದರೂ ತಮ್ಮ ಸಂಪುಟಕ್ಕೆ ಬಲ ತಂದುಕೊಳ್ಳುತ್ತಾರಾ ಎಂಬ ನಿರೀಕ್ಷೆ ಎಲ್ಲರನ್ನೂ ಕಾಡುತ್ತಿದೆ.