ಕಾಂಗ್ರೆಸ್ ಗೆದ್ದಿದ್ದಕ್ಕೆ ದೇವೇಗೌಡರಿಗೆ ಧನ್ಯವಾದ ಹೇಳಿದ ಸಿಎಂ!!
ಬೆಂಗಳೂರು, ಏಪ್ರಿಲ್ 13: ''ಜೆಡಿಎಸ್ ಪಕ್ಷವು ಈ ಬಾರಿಯ ಉಪಚುನಾವಣೆಯಿಂದ ದೂರ ಉಳಿದಿತ್ತು. ಗುಂಡ್ಲುಪೇಟೆಯಲ್ಲಿ ಹಾಗೂ ನಂಜನಗೂಡಿನಲ್ಲಿ ತನ್ನ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಇದರಿಂದಾಗಿ, ಮತ ಎಣಿಕೆ ವೇಳೆ ಸ್ಪಷ್ಟ ಫಲಿತಾಂಶ ಸಿಗುವಂತಾಗಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಜಯ ಸಿಗಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರಾದ ದೇವೇಗೌಡ, ಕುಮಾರ ಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ''
ಇದು, ಗುರುವಾರ ಹೊರಬಿದ್ದ ಉಪಚುನಾವಣೆಗಳ ಫಲಿತಾಂಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಕ್ಷಿಪ್ತ ವಿಶ್ಲೇಷಣೆ.
ಗುಂಡ್ಲು ಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಮಾಧ್ಯಮದವರಿಗೂ ಅವರು ಧನ್ಯವಾದ ಹೇಳಿದರು.
ಮುಖ್ಯಮಂತ್ರಿಯವರ ಈ ಮಾತು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಕೈ ಜೋಡಿಸುವ ಸಂಭವವನ್ನು ಮತ್ತಷ್ಟು ಗಟ್ಟಿಯಾಗಿಸಿದೆ.