ನರೇಂದ್ರ ಮೋದಿ 'ಕಾಲ್ಗುಣ' ನೆನಪಿಸಿದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 07: ರಾಹುಲ್ ಕಾಲಿಟ್ಟಲೆಲ್ಲಾ ಬಿಜೆಪಿ ಗೆಲ್ಲುತ್ತದೆ ಎಂಬುದು ಈಗ ರಾಷ್ಟ್ರೀಯ 'ನಂಬಿಕೆ' ಆಗಿ ಬಿಟ್ಟಿದೆ. ಸದಾನಂದಗೌಡ ಸೇರಿದಂತೆ ರಾಜ್ಯದ ಬಿಜೆಪಿಗರಂತೂ ರಾಹುಲ್ ಗಾಂಧಿ ಹೆಚ್ಚು ಹೆಚ್ಚು ರಾಜ್ಯಕ್ಕೆ ಬರಲಿ ನಮಗೆ ಒಳ್ಳೆಯದಾಗುತ್ತದೆ ಎಂದು ನೇರವಾಗಿ ಸಿಎಂಗೆ ಟ್ವೀಟ್ ಮಾಡುತ್ತಿದ್ದಾರೆ.
ಆದರೆ ಸಿದ್ದರಾಮಯ್ಯ ಉಳಿದ ನಾಯಕರಂತಲ್ಲ, ಅವರದ್ದು ಗಟ್ಟಿ ಮನಸ್ಥಿತಿ, ಟೀಕೆಗೆ ಹೆದರುವರಲ್ಲ, ಟೀಕೆಗಳನ್ನು ಹೇಗೆ ಟೀಕಾರಾರರ ವಿರುದ್ಧವೇ ಬಳಸಬೇಕು ಎಂಬುದು ಅವರಿಗೆ ಕರಗತ. ರಾಹುಲ್ ಕಾಲ್ಗುಣದ ಬಗ್ಗೆ ಆಡಿಕೊಳ್ಳು ಬಿಜೆಪಿಗೆ ಮೋದಿ ಅವರ ಕಾಲ್ಗುಣದ ಬಗ್ಗೆ ಸಿದ್ದರಾಮಯ್ಯ ತಿಳಿಸಿಕೊಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿಯವರು ವ್ಯಾಪಕ ಪ್ರಚಾರ ನಡೆಸಿದ್ದರೂ ಅಲ್ಲಿನ ಎಂಟು ಕ್ಷೇತ್ರಗಳಲ್ಲಿ ಏಳನ್ನು ಕಾಂಗ್ರೆಸ್ ಗೆದ್ದಿತ್ತು. ಅವರ 'ಕಾಲ್ಗುಣ' ಚೆನ್ನಾಗಿತ್ತು, ಅದೇ ನಿರೀಕ್ಷೆಯಲ್ಲಿ.
— Siddaramaiah (@siddaramaiah) March 7, 2018
ಟ್ವಿಟ್ಟರ್ನಲ್ಲಿ ಮೋದಿ ಅವರ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ 'ಕಳೆದ ವಿಧಾನಸಭಾ ಚುನವಾಣೆಯಲ್ಲಿ ಮೋದಿ ಅವರು ದ.ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ಮಾಡಿದರು ಆದರೆ ಅಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಗೆದ್ದಿತು, ಅವರ 'ಕಾಲ್ಗುಣ' ಚೆನ್ನಾಗಿತ್ತು, ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದೇವೆ' ಎಂದು ಟ್ವೀಟ್ ಮಾಡಿ ಬಿಜೆಪಿಯವರ ಬಾಯಿ ಮುಚ್ಚಿಸಿದ್ದಾರೆ.
ಈ ಟ್ವೀಟ್ನಿಂದ ರಾಹುಲ್ ಕಾಲ್ಗುಣದ ಬಗ್ಗೆ ಕಾಲೆಳೆಯುತ್ತಿದ್ದ ಬಿಜೆಪಿಗರ ಬಾಯಿ ಮುಚ್ಚಿಸುವ ಪ್ರಯತ್ನ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಟ್ವೀಟ್ಗೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಸಿದ್ದರಾಮಯ್ಯ ಅವರ ಮಾತುಗಳನ್ನು ಬೆಂಬಲಿಸಿದರೆ, ಕೆಲವರು ಮೋದಿ ಅವರನ್ನು ಬೆಂಬಲಿಸಿ ಪ್ರತಿಕ್ರಿಯಿಸಿದ್ದಾರೆ.