ಮೋದಿಯದ್ದು 90% ಭ್ರಷ್ಟ ಸರ್ಕಾರ: ಸಿದ್ದರಾಮಯ್ಯ ಹೂಂಕಾರ
ಬೆಂಗಳೂರು, ಫೆಬ್ರವರಿ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅವಧಿಯ ಸರ್ಕಾರದ ಕೊನೆಯ ವಿಧಾನಸಭೆ ಅಧಿವೇಶನದಲ್ಲಿ ಭಾವುಕತೆ, ವ್ಯಂಗ್ಯ, ಸಿಟ್ಟು, ಹೆಮ್ಮೆ, ಕುಹುಕ, ಆರೋಪ, ಹೀಗೆ ಹಲವು ರಸಗಳಿಂದ ಕೂಡಿದ ಭಾಷಣ ಮಾಡಿದರು.
ತಮ್ಮ ಸರ್ಕಾರದ ಸಾಧನೆ, ವಿರೋಧ ಪಕ್ಷಗಳ ಟೀಕೆ, ತಮ್ಮ ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡಿದ ಸಿಎಂ ಅವರು ತಮ್ಮ ಟೀಕಾಕಾರರನ್ನು ಜರಿಯುವುದನ್ನು ಮರೆಯಲಿಲ್ಲ.
ಟ್ವಿಟ್ಟರ್ ಮೂಲಕ ಸರ್ಕಾರದ ಸಾಧನೆಗಳನ್ನು ಹಂಚಿಕೊಂಡ ಸಿಎಂ
ತಮ್ಮ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದ ಮೋದಿ ಅವರ ಬಗ್ಗೆ ಸಿಟ್ಟಿನಿಂದ ಮಾತನಾಡಿದ ಮುಖ್ಯಮಂತ್ರಿಗಳು ನಮ್ಮದು 10% ಆದರೆ ಅವರದ್ದು 90% ಎಂದರು. ಅದೇ ಮಾತನ್ನು ಪುನರ್ ಉಚ್ಛರಿಸಿದ ಅವರು ಕೇಂದ್ರದಲ್ಲಿರುವುದು 90% ಭ್ರಷ್ಟ ಸರ್ಕಾರ ಎಂದು ಆರೋಪ ಮಾಡಿದರು.
ದ್ರೋಹಿಗಳಿಗೆ ಸಹಕಾರ
ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯಾ ಅವರೆಲ್ಲಾ ಕೋಟ್ಯಾಂತರ ಹಣ ಲೂಟಿ ಮಾಡಿ ದೇಶ ತೊರೆದು ಓಡಿ ಹೋಗಿದ್ದಾರೆ ಇವರಿಗೆಲ್ಲಾ ಕೇಂದ್ರ ಸಹಾಯ ಮಾಡಿದೆ. ಅವರು ದೋಚಿ ಹೋದ ದುಡ್ಡಿಗೆ ಯಾರು ಜವಾಬ್ದಾರಿ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಹಿಟ್ ಆಂಡ್ ರನ್
ಬಿಜೆಪಿ ಅವರು ಮಾತೆತ್ತಿದರೆ ಡೈರಿ ವಿಷಯ ಪ್ರಸ್ತಾಪಿಸುತ್ತಾರೆ ಆದರೆ 'ಸಹರ ಡೈರಿ'ಯಲ್ಲಿ ಯಾರ ಇನಿಷಿಯಲ್ ಇದೆ ಎಂಬುದನ್ನು ಅವರು ಹೇಳಬೇಕು. ಜೈನ್ ಹವಾಲ ಕೇಸ್ ಗಳಲ್ಲಿ ಯಾರ ಸಂಕೇತಾಕ್ಷರಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಎಂದು ಕರೆಯುವವರು ಈ ಬಗ್ಗೆಯೂ ಮಾತನಾಡಲಿ ಎಂದು ಪ್ರಧಾನಿ ಮೋದಿ ವಿರುಧ್ಧ ಪರೋಕ್ಷವಾಗಿ ಹರಿಹಾಯ್ದ ಸಿದ್ದರಾಮಯ್ಯ. ಸಾಕ್ಷ್ಯ ನೀಡದೇ ಆಪಾದನೆ ಮಾಡಿದರೆ ಅದು ಹಿಟ್ ಅಂಡ್ ರನ್ ಆದಂತಾಗುತ್ತದೆ ಎಂದರು.
ಕೇಂದ್ರದಿಂದ 10500 ಕೋಟಿ ಖೋತಾ
ಅಮಿತ್ ಶಾ ಮತ್ತು ಮೋದಿ ಅವರ 'ರಾಜ್ಯವು ಕೇಂದ್ರದ ಹಣದ ಸಮರ್ಪಕ ಬಳಕೆ ಮಾಡಿಲ್ಲ' ಎಂಬ ಆರೋಪಕ್ಕೆ ಉತ್ತರಿಸಿದ ಸಿಎಂ 'ಕೇಂದ್ರ ದುಡ್ಡು ಕೊಟ್ಟಿದೆ ಲೆಕ್ಕ ಕೊಡಿ ಎನ್ನುತ್ತಾರೆ. ಈಗ ಲೆಕ್ಕ ಕೊಡುತ್ತಿಲ್ಲವೇ. ಕೇಂದ್ರ ಅನುದಾನ ಕೊಟ್ಟಿದೆ. ಅದನ್ನು ರಾಜ್ಯ ತಿಂದು ಹಾಕಿದೆ ಎಂದು ಸುಳ್ಳು ಹೇಳಬಾರದು. ಕೇಂದ್ರ ಸರ್ಕಾರ ಕೊಡುವುದು ನಮ್ಮ ತೆರಿಗೆ ಹಣವನ್ನೇ. ಯಾರೂ ಕೈನಿಂದ ಕೊಡುವುದಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ ₹10,500 ಕೋಟಿ ಖೋತಾ ಆಗಿದೆ. ಈ ಬಗ್ಗೆ ನಾವು ಯಾರನ್ನು ಕೇಳಬೇಕು' ಎಂದು ಗುಡುಗಿದರು.
ಪ್ರಧಾನಿ ಮೋದಿ ಮೌನಕ್ಕೆ ಟ್ವಿಟ್ಟರ್ ನಲ್ಲಿ ಗುದ್ದು ನೀಡಿದ ಸಿದ್ದು!
ಅನಿಲ ಭಾಗ್ಯಕ್ಕೆ ಅಮ್ಮನೇ ಪ್ರೇರಣೆ
ಮಾತನಾಡುತ್ತಾ ನೆನಪಿನಂಗಳಕ್ಕೆ ಜಾರಿದ ಸಿಎಂ ಅವರು 'ನಮ್ಮ ಅಮ್ಮ ಹಸಿ ಸೌದೆಯಲ್ಲಿ ಅಡುಗೆ ಮಾಡುವಾಗ ಹೊಗೆ ಬಂದು ಕಣ್ಣೀರು ಹಾಕುತ್ತಿದ್ದರು. ಆ ಕಷ್ಟದ ಅರಿವಾಗಿಯೇ ಅನಿಲ ಭಾಗ್ಯ ಯೋಜನೆಯಲ್ಲಿ ಸ್ಟವ್, ಅನಿಲದ ಸಿಲಿಂಡರ್ ನೀಡುತ್ತಿದ್ದೇವೆ' ಎಂದರು. ನಾನು ಬಿಎಸ್ಸಿ ಪಾಸು ಮಾಡಿ ಎಂಎಸ್ಸಿಗೆ ಸೀಟು ಸಿಗದೆ ಊರಿಗೆ ಹೋಗಿ ಹೊಲ ಉಳುತ್ತಿದ್ದೆ. ಬಳಿಕ ಕಾನೂನು ಪದವಿಗೆ ಸೇರಿಕೊಂಡೆ ಎಂದು ಹಳೆಯ ದಿನ ನೆನಸಿಕೊಂಡರು.
ಆರ್ಥಿಕ ತಜ್ಞರ ಮೆಚ್ಚುಗೆ
ಸರ್ಕಾರ ಹೆಚ್ಚು ಸಾಲ ಮಾಡಿದೆ, ರಾಜ್ಯ ದಿವಾಳಿ ಆಗಿದೆ ಎಂದು ಆರೋಪಿಸುತ್ತಾರೆ. ಆದರೆ ನಾವು ವಿತ್ತೀಯ ಶಿಸ್ತು ಮೀರಿಲ್ಲ. ಸಾಲ ಶೇ.25 ಮೀರಬಾರದು ಎಂದಿದೆ. ಆದರೆ ಶೇ.19ಕ್ಕಿಂತ ಕಡಿಮೆ ಇದೆ. ದಿವಾಳಿ ಆಗಲು ಹೇಗೆ ಸಾಧ್ಯ. ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿಯವರ ಬಾಯಿ ಮುಚ್ಚಿಸಿದರು.
ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ
ಇದು ಹದಿನಾಲ್ಕನೇ ವಿಧಾನಸಭೆಯ ಕೊನೆಯ ಅಧಿವೇಶನ. ಹದಿನೈದನೆ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಜನರು ನಮ್ಮ ಸರ್ಕಾರದ ಬಗ್ಗೆ ಸಮಾಧಾನದಿಂದ ಇದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಇದರ ಆಧಾರದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಮಾತು ಹೇಳುತ್ತಿದ್ದೇನೆಯೇ ಹೊರತು ಭ್ರಮೆ ಅಲ್ಲ ಎಂದು ಸಿದ್ದರಾಮಯ್ಯ ವಿಶ್ವಾಸದಿಂದ ನುಡಿದರು.
ಜೀವನ ತೆರೆದ ಪುಸ್ತಕ
ಕೆಲವರು ನನ್ನನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಾರೆ. ಪರವಾಗಿಲ್ಲ ನಾನು ಅದನ್ನು ಎದುರಿಸಬಲ್ಲೆ. ಸಮರ್ಥವಾಗಿ ಉತ್ತರಿಸಬಲ್ಲೆ. ನನ್ನ ರಾಜಕೀಯ ಪುಸ್ತಕ ತೆರೆದ ಪುಸ್ತಕ. ನನ್ನ ರಾಜಕೀಯ ಮುಗಿಸಿದರೆ ಜನ ಮುಗಿಸಬೇಕಷ್ಟೆ ಎಂದು ಅವರು ಹೇಳಿದರು.
ಬಿಜೆಪಿಯ ಸಿಎಂ ಜೈಲಿಗೆ ಹೋಗಿದ್ರು
ಸುಮ್ಮನೆ ನಮ್ಮ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ಇಲ್ಲಿ ಮುಖ್ಯಮಂತ್ರಿ ಆಗಿದ್ದವರು ಜೈಲಿಗೆ ಹೋಗಿಲ್ಲವೆ. ಅವರಿಂದ ನಾವು ಪಾಠ ಕಲಿಯಬೇಕೇ? ದಾಖಲೆ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡುವುದು ಹಿಟ್ ಅಂಡ್ ರನ್ ಕೇಸಿನಂತೆ. ಸತ್ಯ ಹೇಳಿದರೆ ಬಿಜೆಪಿಯವರು ಸಹಿಸುವುದಿಲ್ಲ. ನೀರವ್ ಮೋದಿ ಬಗ್ಗೆ ಮಾತನಾಡಿದರೆ ಏಕೆ ಅವರು ಸಹನೆ ಕಳೆದುಕೊಳ್ಳಬೇಕು.