ಕೊಪ್ಪಳ : ಕಡೇಬಾಗಿಲು-ಬುಕ್ಕಸಾಗರ ಸೇತುವೆ ಲೋಕಾರ್ಪಣೆ
ಕೊಪ್ಪಳ, ಸೆಪ್ಟೆಂಬರ್ 22 : ಕೊಪ್ಪಳ ಜಿಲ್ಲೆಯ ಆನೆಗೊಂದಿ ಮತ್ತು ಬಳ್ಳಾರಿ ಜಿಲ್ಲೆಯ ಹಂಪಿಗೆ ನೇರ ಸಂಪರ್ಕ ಕಲ್ಪಿಸುವ ಕಡೇಬಾಗಿಲು ಸೇತುವೆ ಲೋಕಾರ್ಪಣೆಗೊಂಡಿದೆ. ತುಂಗಭದ್ರಾ ನದಿಗೆ ಗಂಗಾವತಿ ತಾಲೂಕಿನ ಕಡೇಬಾಗಿಲು ಬಳಿ ಸೇತುವೆ ನಿರ್ಮಿಸಲಾಗಿದೆ.
ಹಂಪಿಗೆ ಭೇಟಿ ನೀಡಿದ್ದ ರಾಮನಾಥ್ ಕೋವಿಂದ್ ರ ಅಪರೂಪದ ಚಿತ್ರಗಳು
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ 487.50 ಮೀಟರ್ ಉದ್ದದ ಸೇತುವೆಯನ್ನುಉದ್ಘಾಟಿಸಿದರು. ಈ ಸೇತುವೆ ನಿರ್ಮಾಣದಿಂದಾಗಿ ಗಂಗಾವತಿ-ಹೊಸಪೇಟೆ ನಡುವಿನ ಪ್ರಯಾಣದ ದೂರ 14 ಕಿ.ಮೀ.ನಷ್ಟು ಕಡಿಮೆಯಾಗಿದೆ.
ತುಂಗ-ಭದ್ರಾನದಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳನ್ನು ಬೇರ್ಪಡಿಸುವ ಗಡಿ. ಮುನಿರಾಬಾದ್ ಬಳಿ ಎನ್.ಎಚ್ 13 ಕ್ಕೆ ಹೊಂದಿಕೊಂಡು ಇರುವ ಸೇತುವೆಯನ್ನು ಹೊರತುಪಡಿಸಿದರೆ ತುಂಗಭದ್ರಾ ನದಿ ದಾಟಲು 54 ಕಿ.ಮೀ ದೂರದ ಕಂಪ್ಲಿ ಸಮೀಪದ ಸೇತುವೆಯನ್ನೇ ಪ್ರಯಾಣಿಕರು ಬಳಸಬೇಕಾಗಿತ್ತು.
ಹಂಪಿಯ ನಿಸರ್ಗ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳಿ
ಇದರಿಂದಾಗಿ ಜನರಿಗೆ ಸಾಕಷ್ಟು ಸಮಯ ಹಾಗೂ ಆರ್ಥಿಕ ಹೊರೆ ಬೀಳುತ್ತಿತ್ತು. ಹಂಪಿ ಮತ್ತು ಆನೆಗುಂದಿಯಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ. ಆದರೆ, ಪ್ರವಾಸಿಗರು ಹಂಪಿ ವೀಕ್ಷಿಸಿದ ಬಳಿಕ ಆನೆಗೊಂದಿಗೆ ತೆರಳಬೇಕು ಎಂದರೆ ಸುತ್ತಿ ಬಳಸಿ ಬರಬೇಕಾಗಿತ್ತು. ಈಗ ಕಡೇಬಾಗಿಲು ಬಳಿ ಬುಕ್ಕಸಾಗರವನ್ನು ಸಂಪರ್ಕಿಸುವ ಬೃಹತ್ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಪ್ರವಾಸಿಗರಿಗೆ ಅನುಕೂಲವಾಗಿದೆ.
ಹಂಪಿ-ಆನೆಗೊಂದಿ ಸಂಪರ್ಕಿಸಲು ಆನೆಗೊಂದಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ತೂಗು ಸೇತುವೆಯೊಂದರ ನಿರ್ಮಾಣ ಕಾರ್ಯ ಹಿಂದೆ ಆರಂಭವಾಗಿತ್ತು. ಆದರೆ, ಪಾರಂಪರಿಕ ತಾಣಗಳ ಸುರಕ್ಷತಾ ದೃಷ್ಟಿಯಿಂದ ಈ ಸೇತುವೆ ನಿರ್ಮಾಣ ಮಾಡಬಾರದು ಎಂದು ಯುನೆಸ್ಕೋ ಆಕ್ಷೇಪಿಸಿದ ಕಾರಣ ಕಾಮಗಾರಿ ಸ್ಥಗಿತಗೊಂಡಿತು.
ಕೊಪ್ಪಳದ ಇಂಜಿನಿಯರಿಂಗ್ ಕಾಲೇಜು ಕನಸು ನನಸು
ತೂಗುಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಧರಿಸಿದ ಸರ್ಕಾರ, ಕಾಮಗಾರಿಯನ್ನು ಪುನಃ ಪ್ರಾರಂಭಿಸಿ, ಇನ್ನೇನು ಸೇತುವೆ ಕಾಮಗಾರಿ ಪೂರ್ಣಗೊಂಡಿತು ಎನ್ನುವ ಹಂತ ತಲುಪಿದ ಸಂದರ್ಭದಲ್ಲಿ, ಸಂಪೂರ್ಣ ಕುಸಿದು ಬಿತ್ತು. ನಂತರ ಸೇತುವೆ ನಿರ್ಮಾಣ ಕೈ ಬಿಡಲಾಯಿತು.
ಕರ್ನಾಟಕ ಸರ್ಕಾರ ಸೇತುವೆ ನಿರ್ಮಾಣ ಮಾಡಲು ಚಿಂತನೆ ನಡೆಸಿ, ಲೋಕೋಪಯೋಗಿ ಇಲಾಖೆ ಮೂಲಕ ಕಡೇಬಾಗಿಲು ಮತ್ತು ಬುಕ್ಕಸಾಗರ ಗ್ರಾಮಗಳ ಸ್ಥಳವನ್ನು ಗುರುತಿಸಿತು. ಈಗ ಸೇತುವೆ ನಿರ್ಮಾಣಗೊಂಡಿದ್ದು, ಗಂಗಾವತಿಯಿಂದ ಹೊಸಪೇಟೆಗೆ ಹೋಗುವ ದೂರ 14 ಕಿ.ಮೀ ಕಡಿಮೆಯಾಗಿದೆ.