160 ಭರವಸೆಗಳಲ್ಲಿ 9 ಭರವಸೆ ಪೂರ್ಣ- ಸಿದ್ದರಾಮಯ್ಯ
ಬೆಂಗಳೂರು, ಮೇ.30:ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದ 160 ಭರವಸೆಗಳಲ್ಲಿ 9 ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನವಿಕೃತ ಪ್ರೆಸ್ ಕ್ಲಬ್ ಭವನವನ್ನು ಉದ್ಘಾಟನೆ ಮಾಡಿ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಉಳಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುವುದಾಗಿ ಸ್ಪಷ್ಟಪಡಿಸಿದರು.
ಪ್ರತಿ ತಿಂಗಳ ಏಳನೇ ತಾರೀಕಿನಂದು ಅನ್ನ ಭಾಗ್ಯದ ಅಕ್ಕಿ ಸರಿಯಾಗಿ ತಲುಪತ್ತದೋ ಇಲ್ಲವೊ ಎಂಬುದನ್ನು ಪರಿಶೀಲಿಸಲು ಪಡಿತರ ಅಂಗಡಿಯಲ್ಲಿ ಆಹಾರ ಆದಾಲತ್ಗಳನ್ನು ನಡೆಸಲಾಗುವುದು. ಈ ಆದಾಲತ್ನಲ್ಲಿ ಅಧಿಕಾರಿಗಳು ಫಲಾನುಭವಿಗಳ ಜೊತೆ ಸಂವಾದ ಮತ್ತು ವಿತರಣೆಯಾಗುತ್ತಿರುವ ಅಕ್ಕಿ ಗುಣಮಟ್ಟವನ್ನು ಪರೀಶಿಲಿಸಲಿದ್ದಾರೆ ಎಂದು ತಿಳಿಸಿದರು.
ಅನ್ನ ಭಾಗ್ಯಕ್ಕಾಗಿ ಪ್ರತಿ ತಿಂಗಳ ಒಂದನೇ ತಾರೀಕಿನಿಂದ ಹತ್ತನೇ ತಾರೀಕಿನವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಪಡಿತರ ಅಂಗಡಿ ತೆರೆದಿರುವಂತೆ ಸೂಚನೆ ನೀಡಲಾಗಿದೆ. ಶೇ.99ರಷ್ಟು ಬಡವರಿಗೆ ಅನ್ನಭಾಗ್ಯದ ಅಕ್ಕಿ ತಲುಪುತ್ತಿದ್ದು, ಬೋಗಸ್ ಕಾರ್ಡ್ ತೆಗೆದು ಹಾಕಲು ಸ್ಪಷ್ಟವಾದ ಆದೇಶವನ್ನು ನೀಡಲಾಗಿದೆ ಎಂದರು.
1340 ಕೋಟಿ ವೆಚ್ಚದಲ್ಲಿ ಹತ್ತು ಲಕ್ಷ ಜನರ ಸಾಲವನ್ನು ಮನ್ನಾ ಮಾಡಿದ್ದೇವೆ. ಈ ಹಿಂದೆ ಕೆಎಂಎಫ್ಗೆ ದಿನಂಪ್ರತಿ 35 ಲಕ್ಷ ಲೀಟರ್ ಬರುತಿತ್ತು. ಆದರೆ ರೈತರಿಗೆ ನಾಲ್ಕು ರೂಪಾಯಿ ಸಬ್ಸಿಡಿ ನೀಡಿದ್ದರಿಂದ ಈಗ ಈ ಸಂಖ್ಯೆ 55 ಲಕ್ಷ ಲೀಟರ್ಗೆ ಏರಿಕೆಯಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಕೊಂಡಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ರೋಷನ್ ಬೇಗ್ ಅವರು ವಾರ್ತಾ ಇಲಾಖೆಯನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನಾಗಿ ಬದಲಾಯಿಸುವ ಪ್ರಸ್ತಾಪ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು.
ಸಮಯದ ಅಭಾವದಿಂದಾಗಿ ಕಡಿಮೆ ಹೊತ್ತು ಸಂವಾದ ನಡೆದರೂ ಪತ್ರಕರ್ತರ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ.
ತನಿಖೆ ನಡೆಸಿ ಕ್ರಮ:
ಎಡಿಜಿಪಿ ರವೀಂದ್ರನಾಥ್ ಪ್ರಕರಣದಲ್ಲಿ ಗೃಹ ಇಲಾಖೆ ಮತ್ತು ಸರ್ಕಾರದ ವೈಫಲ್ಯವಿಲ್ಲ. ಸಿಐಡಿ ತನಿಖೆಗೆ ವಹಿಸಲಾಗಿದೆ. ನಾವು ಅಶಿಸ್ತನ್ನು ಸಹಿಸುವುದಿಲ್ಲ. ತಪ್ಪಿತಸ್ತರಿಗೆ ಶಿಕ್ಷೆ ನೀಡಲಾಗುವುದು. ಮುಂದೆ ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಡಿ ಬೇರೆ ಪ್ರಶ್ನೆ ಕೇಳಿ.
ಬಡವರಿಗೆ ಅನುದಾನ ನೀಡುತ್ತೇವೆ
ಸರ್ಕಾರ ಸುಮಾರು ಎಂಟು ಸಾವಿರ ಕೋಟಿ ಹಣವನ್ನು ಅನುದಾನ ನೀಡುವ ಯೋಜನೆಗೆ ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಅನುದಾನ ನೀಡುವ ಯೋಜನೆ ಕಡಿಮೆ ಮಾಡುತ್ತೀರಾ? ಹೊಸದಾಗಿ ಬೇರೆ ಯೋಜನೆ ಆರಂಭ ಮಾಡುತ್ತೀರಾ?
ಬಡುವರಿಗಾಗಿ ಅನುದಾನ ನೀಡುವ ಯೋಜನೆಯಿಂದಾಗಿ ಸರ್ಕಾರ ಹಣವನ್ನು ಪೋಲುಮಾಡುತ್ತದೆ ಎಂದು ಹೇಳುವುದು ತಪ್ಪು. ಬಡವರಿಗೆ ಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರದ ಕೆಲಸ. ಬೇರೆ ಮೂಲಗಳಿಂದ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುವುದು.
ನಾನೊಬ್ಬನೇ ಕಾರಣನಲ್ಲ ಎಲ್ಲರೂ ಭಾಗಿಗಳು
ನಾನು ಮೈಸೂರು ಒಂದು ಕ್ಷೇತ್ರದ ಮುಖ್ಯಮಂತ್ರಿಯಲ್ಲ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾನೊಬ್ಬನೇ ಕಾರಣನಲ್ಲ.ರಾಜ್ಯದ ನಾಯಕರು ಸಾಮೂಹಿಕವಾಗಿ ಸೋಲಿನ ಹೊಣೆಯನ್ನು ಹೊರಬೇಕಾಗುತ್ತದೆ.
ಸೋಲಿಗೆ ರಾಜ್ಯ ಸರ್ಕಾರದ ವೈಫಲ್ಯವಲ್ಲ:
ರಾಷ್ಟ್ರ ಮಟ್ಟದ ವಿಚಾರಗಳಿಗೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆ ನಡೆದಿದೆ. ಜನ ಆ ವಿಚಾರಗಳಿಗೆ ಸಂಬಂಧಿಸಿದಂತೆ ಮತದಾನ ಮಾಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರದ ವಿರುದ್ಧ ತೀರ್ಪು ನೀಡಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ. ಒಂದು ವರ್ಷದ ಸರ್ಕಾರದ ಮೇಲೆ ಜನ ಈಗಲೇ ಅಂತಿಮ ತೀರ್ಮಾನವನ್ನು ಪ್ರಕಟಿಸಲು ಸಾಧ್ಯವಿಲ್ಲ.
ಸಂಸದರ ಜೊತೆ ಸೇರಿ ರಾಜ್ಯದ ಅಭಿವೃದ್ಧಿ:
ಮೋದಿಯವರ ಪ್ರಮಾಣವಚನ ದಿನ ನಿಗದಿತ ಕಾರ್ಯಕ್ರಮಗಳಿದ್ದ ಹಿನ್ನಲೆಯಲ್ಲಿ ಸಮಾರಂಭಕ್ಕೆ ತೆರಳಲು ಸಾಧ್ಯವಾಗಿಲ್ಲ. ರಾಜ್ಯದ ಎಲ್ಲಾ ಸಂಸದರ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಬೇಕಾಗಿರುವ ಯೋಜನೆ ಚರ್ಚೆ ಮಾಡಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಸಂಘರ್ಷವಿಲ್ಲ.
ಉಪಮುಖ್ಯಮಂತ್ರಿ ನೇಮಕ ಹೈಕಮಾಂಡ್ಗೆ ಬಿಟ್ಟದ್ದು
ಉಪಮುಖ್ಯಮಂತ್ರಿ ನೇಮಕ ಗೊತ್ತಿಲ್ಲ.ಅದೆಲ್ಲ ಅಂತೆ ಕಂತೆ ಸುದ್ದಿ. ಏನಿದ್ದರೂ ಹೈ ಕಮಾಂಡ್ ಇದೆ. ನಾನು ಆ ವಿಚಾರದ ಬಗ್ಗೆ ಮಾತನಾಡುವುದಿಲ್ಲ.
ನಮ್ಮ ಸಾಧನೆಯನ್ನು ಮಂತ್ರಿಗಳು ಹೇಳುತ್ತಿದ್ದಾರೆ
ಸರ್ಕಾರದ ಸಾಧನೆಯನ್ನು ನಾನೊಬ್ಬನೇ ಹೇಳುತ್ತಿಲ್ಲ. ಎಲ್ಲಾ ಮಂತ್ರಿಗಳು ಹೇಳುತ್ತಿದ್ದಾರೆ. ಪತ್ರಿಕೆಗಳ ಎಡಿಷನ್ನಿಂದಾಗಿ ನಿಮಗೆ ಗೊತ್ತಿಲ್ಲ. ಎಲ್ಲಾ ಮಂತ್ರಿಗಳು ಸಾಧನೆಯನ್ನು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ.
ಟ್ವಿಟ್ಟರ್, ಫೇಸ್ಬುಕ್ಗೆ ಎಂಟ್ರಿ
ಅದರ ಆಲೋಚನೆ ಇದೆ .ಟ್ವಿಟರ್ ಫೇಸ್ಬುಕ್ಗೆ ಎಂಟ್ರಿ ಕೊಡಲಿದ್ದೇನೆ.
ಗುರಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಲಾಗುವುದು.
ದೇಶದ ಹಣದುಬ್ಬರದಿಂದಾಗಿ ಅರ್ಥಿಕ ಪ್ರಗತಿ ಕುಂಠಿತವಾಗಿದೆ. ಒಂದು ವರ್ಷದಲ್ಲಿ ಶೇ.13ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ವರ್ಷ ನಮ್ಮ ಗುರಿಗಿಂತಲೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗುವುದು.
ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್
ಪ್ರೆಸ್ ಕ್ಲಬ್ನಲ್ಲಿ ಉದ್ಘಾಟನೆಯಾದ ನೂತನ ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್
ಟೇಬಲ್ ಟೆನ್ನೀಸ್ ಬೋರ್ಡ್
ಪ್ರೆಸ್ ಕ್ಲಬ್ನಲ್ಲಿ ಉದ್ಘಾಟನೆಯಾದ ನೂತನ ಟೇಬಲ್ ಟೆನ್ನೀಸ್ ಬೋರ್ಡ್