ಗುರುವಾರ ಸಿಎಂ ವಿಶ್ವಾಸಮತ ಯಾಚನೆ: ಸರ್ಕಾರದ ಭವಿಷ್ಯ ಅಂದೇ ನಿರ್ಧಾರ
Recommended Video
ಬೆಂಗಳೂರು, ಜುಲೈ 15: ಸಿಎಂ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಗುರುವಾರ (ಜುಲೈ 18) ರಂದು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಇಂದೇ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು, ಆದರೆ ಕಲಾಪ ಸಲಹ ಸಮಿತಿ ಸಭೆಯಲ್ಲಿ ಚರ್ಚೆ ನಡೆದು ವಿಶ್ವಾಸಮತ ಯಾಚನೆಗೆ ಗುರುವಾರದ ಸಮಯ ನಿಗದಿ ಪಡಿಸಲಾಗಿದೆ.
ಕರ್ನಾಟಕ ರಾಜಕೀಯ LIVE: ಜುಲೈ 18ಕ್ಕೆ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ
ಕಳೆದ ಶುಕ್ರವಾರ (ಜುಲೈ 12) ಅಧಿವೇಶನದ ಮೊದಲ ದಿನವೇ ಸ್ವಯಂ ಪ್ರೇರಿತರಾಗಿ ತಾವು ವಿಶ್ವಾಸಮತ ಯಾಚಿಸುವುದಾಗಿ ಹೇಳಿದ್ದರು. ಆ ನಂತರ ನಡೆದ ಬೆಳವಣಿಗೆಗಳಲ್ಲಿ ಅತೃಪ್ತರ ಅರ್ಜಿ ವಿಚಾರಣೆ ನಡೆಸಿ ಸುಪ್ರಿಂ ಕೋರ್ಟ್ ನೀಡಿದ ಪ್ರಾಥಮಿಕ ಆದೇಶ ಮಹತ್ವ ಪಡೆದುಕೊಂಡಿತು.
ಸುಪ್ರಿಂಕೋರ್ಟ್ ನಾಳೆ ಅತೃಪ್ತ ಶಾಸಕರ ಅರ್ಜಿ ವಿಚಾರಣೆ
ನಾಳೆ ಮತ್ತೆ ಅತೃಪ್ತರ ಅರ್ಜಿಗಳ ವಿಚಾರಣೆಯನ್ನು ಸುಪ್ರಿಂಕೋರ್ಟ್ ನಡೆಸಲಿದ್ದು, ನಾಳಿನ ವಿಚಾರಣೆ ಮತ್ತು ಆದೇಶ ರಾಜ್ಯ ರಾಜಕೀಯದ ಮಟ್ಟಿಗೆ ಭಾರಿ ಮಹತ್ವದ್ದಾಗಿದೆ. ಆದ ಕಾರಣದಿಂದಲೇ ಕುಮಾರಸ್ವಾಮಿ ಸಹ ನಾಳಿನ ಸುಪ್ರಿಂಕೋರ್ಟ್ ವಿಚಾರಣೆಯ ಬಳಿಕವೇ ವಿಶ್ವಾಸಮತ ಯಾಚನೆ ಮಾಡುವ ನಿರ್ಣಯಕ್ಕೆ ಬಂದಿದ್ದರು.
ಕಲಾಪ ಸಲಹಾ ಸಮಿತಿಯಲ್ಲಿ ನಿರ್ಣಯ
ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಸ್ಪೀಕರ್ ಅವರನ್ನು ಯಡಿಯೂರಪ್ಪ ಭೇಟಿಯಾಗಿ ಇಂದೇ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ನಂತರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಬಹು ಸಮಯ ಚರ್ಚೆ ನಡೆದ ಬಳಿಕ ವಿಶ್ವಾಸಮತ ಯಾಚನೆಗೆ ದಿನಾಂಕ ಮತ್ತು ಸಮಯ ನಿಗದಿ ಮಾಡಲಾಗಿದೆ.
18 ಶಾಸಕರ ಬೆಂಬಲ ಕಳೆದುಕೊಂಡಿದೆ ಮೈತ್ರಿ
ಪ್ರಸ್ತುತ 18 ಶಾಸಕರ ಬೆಂಬಲ ಕಳೆದುಕೊಂಡಿರುವ ಮೈತ್ರಿ ಸರ್ಕಾರಕ್ಕೆ ಬಹುಮತದ ಕೊರತೆ ಇದೆ. ಆದರೆ ವಿಶ್ವಾಸಮತ ಯಾಚನೆಗೆ ಇನ್ನೂ ಮೂರು ದಿನಗಳ ಕಾಲಾವಕಾಶ ಇರುವ ಕಾರಣ ಈ ನಡುವೆ ಬಹುಮತ ಸಂಪಾದಿಸುವ ಕಾರ್ಯದಲ್ಲಿ ಮೈತ್ರಿ ಪಕ್ಷಗಳು ತೊಡಗಲಿವೆ.
ಉತ್ಸಾಹದಲ್ಲಿದೆ ಬಿಜೆಪಿ
ಬಿಜೆಪಿಯು ತನ್ನೆಲ್ಲಾ ಶಾಸಕರನ್ನು ರೆಸಾರ್ಟ್ನಲ್ಲಿ ಒಟ್ಟಿಗೆ ಇರಿಸಿಕೊಂಡಿರುವ ಜೊತೆಗೆ ಕಾಂಗ್ರೆಸ್-ಜೆಡಿಎಸ್ ನಿಂದ ಕರೆತಂದಿರುವ ಅತೃಪ್ತ ಶಾಸಕರನ್ನೂ ಸಹ ಜಾಗೃತೆಯಿಂದ ಕಾಪಾಡುತ್ತಿದೆ. ಹೆಚ್ಚು ಸಂಖ್ಯಾಬಲ ಹೊಂದಿರುವ ಬಿಜೆಪಿಯು ವಿಶ್ವಾಸಮತದಲ್ಲಿ ಸರ್ಕಾರವನ್ನು ಸೋಲಿಸುವ ಉತ್ಸಾಹದಲ್ಲಿದೆ.