ಬಜೆಟ್ ಮುಗಿಯುವವರೆಗೂ 'ಜನತಾದರ್ಶನ' ಇಲ್ಲ, ಸಾರ್ವಜನಿಕ ಭೇಟಿಯೂ ಇಲ್ಲ
Recommended Video
ಬೆಂಗಳೂರು, ಜೂನ್ 11: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಹು ಜನಪ್ರಿಯ 'ಜನತಾ ದರ್ಶನ' ಕಾರ್ಯಕ್ರಮವು ನಾಳೆಯಿಂದ (ಜೂನ್ 12)ರಿಂದ ಸುಮಾರು ಒಂದು ತಿಂಗಳ ಕಾಲ ಇರುವುದಿಲ್ಲ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳ ಕಚೇರಿ, ಮುಖ್ಯಮಂತ್ರಿ ಅವರು ಆಯವ್ಯಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕಾಗಿರುವುದರಿಂದ ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಜನತಾ ದರ್ಶನ ಮತ್ತು ಸಾರ್ವಜನಿಕರ ಭೇಟಿಯನ್ನು ಮುಂದೂಡಲಾಗಿದೆ' ಎಂದು ತಿಳಿಸಿದ್ದಾರೆ.
ಬಜೆಟ್ ಅಧಿವೇಶನವು ಮುಂದಿನ ತಿಂಗಳು ಮೊದಲ ಅಥವಾ ಎರಡನೇ ವಾರ ನಡೆಯಲಿದ್ದು, ಅಲ್ಲಿಯವರೆಗೆ ಜನತಾದರ್ಶನ ಮತ್ತು ಸಾರ್ವಜನಿಕ ಭೇಟಿ ಇರುವುದಿಲ್ಲ. ಇಂದು ಕೂಡ ಮುಖ್ಯಮಂತ್ರಿ ಅವರು ಜನತಾದರ್ಶನ ಮಾಡಲಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬಂದಿದ್ದ ಜನರ ಅವಹಾಲುಗಳನ್ನು ಅಧಿಕಾರಿಗಳೇ ಸ್ವೀಕರಿಸಿದರು.
ದಾರಿಯಲ್ಲಿ ಸಿಕ್ಕ ಅಭಿಮಾನಿಗಳನ್ನು ನಿಂತು ಮಾತನಾಡಿಸಿದ ಸಿಎಂ ಕುಮಾರಸ್ವಾಮಿ
ಈ ಬಾರಿಯ ಬಜೆಟ್ನಲ್ಲಿ ರೈತ ಸಾಲ ಮನ್ನಾ ಘೋಷಣೆ ಮಾಡಲು ಕುಮಾರಸ್ವಾಮಿ ತಯಾರಿ ನಡೆಸಿದ್ದು, ಅದಕ್ಕೆಂದು ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರದ ಮೊದಲ ಬಜೆಟ್ ಸಹ ಇದಾಗಿರುವುದರಿಂದ ಪೂರ್ಣ ಗಮನ ಬಜೆಟ್ ಕಡೆ ನೀಡಬೇಕಾದ ಕಾರಣ ಜನತಾದರ್ಶನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಖಾತೆ-ಕ್ಯಾತೆಯೇ ಮುಗಿದಿಲ್ಲ ಬಜೆಟ್ ಮಂಡಿಸಲು ಕುಮಾರಸ್ವಾಮಿ ರೆಡಿ
ಜನತಾದರ್ಶನ ಕಾರ್ಯಕ್ರಮವು ಯಶಸ್ವಿ ಕಾರ್ಯಕ್ರಮವಾಗಿ ನಡೆಯುತ್ತಿತ್ತು. ಪ್ರತಿದಿನ ನೂರಾರು ಜನ ನೇರವಾಗಿ ಮುಖ್ಯಮಂತ್ರಿಗಳ ಬಳಿಯೇ ಅವಹಾಲು ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಪಡೆದುಕೊಳ್ಳುತ್ತಿದ್ದರು. ಆದರೆ ಇದಕ್ಕೆ ಈಗ ಅಲ್ಪ ವಿರಾಮ ಬಿದ್ದಿದೆ.