ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು
ಬೆಂಗಳೂರು, ಜುಲೈ 14: ಜೆಪಿ ಭವನದಲ್ಲಿ ಆಯೋಜಿತವಾಗಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾವುಕರಾಗಿ ಕಣ್ಣೀರು ಹಾಕಿದರು.
ನಾಡಿದ ಜನತೆಗೆ ಒಳ್ಳೆಯದನ್ನು ಮಾಡಬೇಕೆಂಬ ಉದ್ದೇಶದಿಂದ ನಾನು ಚುನಾವಣೆಗೆ ಬಂದಿದ್ದೆ ಆದರೆ ಜನ ನನ್ನ ಮೇಲೆ ವಿಶ್ವಾಸವಿಡಲಿಲ್ಲ ಎಂದು ಹೇಳುತ್ತಾ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದರು.
ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ತೀವ್ರ ಅಸಮಾಧಾನ
ನಾನು ಹೋದಲ್ಲೆಲ್ಲಾ ಲಕ್ಷಾಂತರ ಜನ ಸೇರುತ್ತಿದ್ದರು, ಆದರೆ ಮತ ಹಾಕುವಾಗ ಮಾತ್ರ ಪಕ್ಷವನ್ನು ಮರೆತರು ಎಂದು ಅವರು ಭಾವುಕರಾಗಿ ನುಡಿದರು. ಕುಮಾರಸ್ವಾಮಿ ಗದ್ಗದಿತರಾಗುತ್ತಿದ್ದಂತೆ ಕಾರ್ಯಕರ್ತರು 'ನಾವು ನಿಮ್ಮಜೊತೆಗಿದ್ದೇವೆ' ಎಂದು ಕೂಗಿ ಹೇಳಿದರು.
ತಂದೆ-ತಾಯಿಯ ಪುಣ್ಯದಿಂದ, ಅವರ ಪೂಜಾ ಫಲದಿಂದ ನಾನು ಮತ್ತೆ ಮುಖ್ಯಮಂತ್ರಿಯಾಗಿದ್ದೇನೆ, ನೀವು ಸಹ ನಿಮ್ಮ ಅಣ್ಣ-ತಮ್ಮನೇ ಮುಖ್ಯಮಂತ್ರಿ ಆಗಿದ್ದಾನೆ ಎಂದು ಸಂಭ್ರಮಪಟ್ಟಿದ್ದೀರಿ ನಿಮ್ಮ ಋಣವನ್ನು ಮರೆಯುವುದಿಲ್ಲ ಎಂದು ಅವರು ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.
ಉಡುಪಿಯ ಹೆಣ್ಣು ಮಕ್ಕಳು 'ಕುಮಾರಸ್ವಾಮಿ ನಾಟ್ ಮೈ ಸಿಎಂ' ಎಂದು ಇಂಗ್ಲಿಷ್ನಲ್ಲಿ ಬೋರ್ಡ್ ಪ್ರದರ್ಶಿಸಿದ್ದಾರೆ. ಬಿಜೆಪಿಯವರು ಮೀನುಗಾರ ಹೆಣ್ಣುಮಕ್ಕಳಿಗೆ ಇಂಗ್ಲಿಷ್ ಕಲಿಸಿದ್ದಕ್ಕೆ ನಾನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯ ಮಾಡಿದ ಸಿಎಂ, ಕರಾವಳಿಯಲ್ಲಿ ಬಿಜೆಪಿಯು ಸರ್ಕಾರದ ಬಗ್ಗೆ ಸುಳ್ಳು ಭಿತ್ತುತ್ತಿದೆ ಎಂದು ಆರೋಪಿಸಿದರು.
ನಾನೇ ಸ್ವತಃ ಕರಾವಳಿ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ, ಮೀನುಗಾರರ ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ, ಆ ಹೆಣ್ಣುಮಕ್ಕಳ ಜೊತೆ ಮಾತನಾಡಿ ಅವರ ತಪ್ಪು ಕಲ್ಪನೆ ದೂರ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಭಾವಪೂರ್ಣವಾಗಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆದೆನೆಂದು ನೀವೆಲ್ಲಾ ಸಾಕಷ್ಟು ಸಂತೋಶ ಪಟ್ಟಿರಿ ಆದರೆ ನನಗೆ ಸಂತೋಶವಾಗಿಲ್ಲ. 'ನನಗೆ ಬಂದ ಕಷ್ಟಗಳ ಬಗ್ಗೆ ನನಗೆ ಮಾತ್ರ ಗೊತ್ತು, ಆ ನೋವನ್ನೆಲ್ಲಾ ಒಬ್ಬನೇ ವಿಷಕಂಠನಂತೆ ನುಂಗಿದ್ದೇನೆ' ಎಂದು ಅವರು ಗದ್ಗದಿತರಾದರು.
ನನಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಒಂದು ಯೋಜನೆಯಿದೆ, ದೃಷ್ಠಿಕೋನವಿದೆ ಅದರಂತೆ ನಾನು ಕೆಲಸ ಮಾಡುತ್ತಿದ್ದೇನೆ, ಅದಕ್ಕೆ ಪ್ರೋತ್ಸಾಹಕೊಡಿ ಆದರೆ ಅಪಪ್ರಚಾರ ಮಾಡಬೇಡಿ ಎಂದು ಅವರು ವಿರೋಧಿಗಳಲ್ಲಿ ಮನವಿ ಮಾಡಿಕೊಂಡರು.