ಬರ ಪರಿಸ್ಥಿತಿ ನಿರ್ವಹಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು
ಬೆಂಗಳೂರು, ಮೇ 15: ರಾಜ್ಯದಲ್ಲಿನ ಬರ ಪರಿಸ್ಥಿತಿಯ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಡನೆ ಇಂದು ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಜಿಲ್ಲಾವಾರು ಮಳೆಯ ಕೊರತೆ, ಬರದ ವಸ್ತು ಸ್ಥಿತಿ, ಬರ ನಿರ್ವಹಿಸಲು ತೆಗೆದುಕೊಂಡಿರುವ ಕ್ರಮಗಳು, ತೆಗೆದುಕೊಳ್ಳಬೇಕಾದ ಕ್ರಮಗಳು, ಬರ ನಿರ್ವಹಣೆಯ ಅಂದಾಜು ವೆಚ್ಚ, ಬರ ನಿರ್ವಹಣೆಗೆ ಹಣ ನಿಯೋಜನೆ, ಗುಳೆ ಪ್ರಮಾಣ, ಗುಳೆ ತಡೆಯಲು ಕ್ರಮಗಳು ಇನ್ನೂ ಹಲವು ವಿಷಯಗಳ ಬಗ್ಗೆ ಸಿಎಂ ಅವರು ಮಾಹಿತಿ ವಿನಿಮಯ ಮಾಡಿಕೊಂಡರು.
2018-19ನೇ ಸಾಲಿನಲ್ಲಿ ರಾಜ್ಯದ್ಯಾಂತ ತೀವ್ರ ಮಳೆಕೊರತೆಯಿಂದ, ಮುಂಗಾರು ಹಂಗಾಮಿನಲ್ಲಿ 100 ತಾಲ್ಲೂಕುಗಳನ್ನು ಹಾಗೂ ಹಿಂಗಾರು ಋತುವಿನಲ್ಲಿ 156 ತಾಲ್ಲೂಕುಗಳನ್ನು ಬರ-ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಬರ ನಿರ್ವಹಣೆ: ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಭೆ
ರಾಜ್ಯ ಸರ್ಕಾರದಿಂದ ಬರ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳು ಇಂತಿವೆ, ರಾಜ್ಯ ಸರ್ಕಾರವು ಮುಖ್ಯವಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಲಭ್ಯತೆಯಾಗುವಂತೆ ಮಾಡುವುದರ ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ನೀಡುವ ಮೂಲಕ ಗುಳೆ ಹೋಗುವುದನ್ನು ನಿವಾರಿಸಲಾಗಿದೆ.
ಕುಡಿಯುವ ನೀರಿನ ಪರಿಸ್ಥಿತಿ
ಪ್ರಸ್ತುತ ಟ್ಯಾಂಕರ್ ಹಾಗೂ ಖಾಸಗಿ ಬೋರ್ವೆಲ್ಗಳ ಮೂಲಕ 2,999 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ, ಇದರ ಪೈಕಿ 1,632 ಗ್ರಾಮಗಳಿಗೆ 2,322 ಟ್ಯಾಂಕರ್ಗಳ ಮೂಲಕ ಹಾಗೂ 1,367 ಗ್ರಾಮಗಳಿಗೆ 1,873 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶದಲ್ಲಿ 440 ವಾರ್ಡ್ಗಳಿಗೆ 271 ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಆಧಾರದ ಮೇರೆಗೆ ಪಡೆದುಕೊಳ್ಳಲಾಗಿದೆ.
ರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ
ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಂಟ್ರೋಲ್ ರೂಂ
24x7 ಮಾದರಿಯಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆದು 1077/1070 ಉಚಿತ ದೂರವಾಣಿ ಮೂಲಕ ಕುಡಿಯುವ ನೀರಿನ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಸದರಿ ಉಚಿತ ದೂರವಾಣಿ ಸಂಖ್ಯೆಗೆ ಯಾವುದೇ ನೆಟ್ವರ್ಕ್ನಿಂದಲೂ ಕರೆ ಮಾಡಬಹುದಾಗಿರುತ್ತದೆ.
ಕುಡಿಯುವ ನೀರಿನ ಸಮಸ್ಯೆಯೇ ಸಹಾಯವಾಣಿಗೆ ಕರೆ ಮಾಡಿ
ಕಂದಾಯ ವಿಭಾಗ ಮಟ್ಟದಲ್ಲಿ ಉಪಸಮಿತಿ ರಚನೆ
ಬರ ಪರಿಹಾರ ಕಾರ್ಯಗಳ ಪ್ರಗತಿ ಮತ್ತು ನಿರ್ವಹಣೆಯ ಅವಲೋಕನಕ್ಕೆ ಸಂಬಂಧಿಸಿದಂತೆ ಕಂದಾಯ ವಿಭಾಗದ ಮಟ್ಟದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ರಚಿಸಲಾಗಿದ್ದು, ಸದರಿ ಸಚಿವ ಸಂಪುಟ ಸಮಿತಿಗಳು ಬರ ಪೀಡಿತ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿರುತ್ತಾರೆ.
ಮಹಾರಾಷ್ಟ್ರ ಬರಕ್ಕೆ 2,160 ಕೋಟಿ ಕೇಂದ್ರ ಹೆಚ್ಚುವರಿ ನೆರವು
ಶುದ್ಧ ಕುಡಿಯುವ ನೀರಿನ ಘಟನ ಪರಿಶೀಲನೆ
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರತಿನಿತ್ಯ ಪರಿಶೀಲಿಸುವುದು ಹಾಗೂ ತೊಂದರೆ ಇದ್ದಲ್ಲಿ ಕೂಡಲೇ ದುರಸ್ಥಿ ಕೈಗೊಳ್ಳುವುದು. ಒಂದು ವೇಳೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಲಭ್ಯತೆ ಇಲ್ಲದಿದ್ದಲ್ಲಿ, ಟ್ಯಾಂಕರ್ ಮೂಲಕ ಪೂರೈಕೆ ಮಾಡುವುದು. ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪ್ರತಿ ನಿತ್ಯ ಪರಿಶೀಲನೆ ಮಾಡಿ ದುರಸ್ಥಿಗೊಳಗಾದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ .
15 ದಿವಸಗಳೊಳಗೆ ಬಾಕಿ ಬಿಲ್ಲು ಪಾವತಿಸಲು ಸೂಚನೆ
ಪ್ರತಿ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿ ಹೋಬಳಿ ಹಂತದ ಎಲ್ಲಾ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಸೃಜನೆ, ಮೇವು ಪರಿಸ್ಥಿತಿ ಇತ್ಯಾದಿ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಸರಬರಾಜಿನ ಬಾಕಿ ಬಿಲ್ಲುಗಳ ಮೊತ್ತವನ್ನು ಪ್ರತಿ 15 ದಿವಸದೊಳಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಸಿ
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಗತಿ ಪರಿಶೀಲನೆಗಾಗಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು, ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುವಂತೆ ಸೂಚಿಸಲಾಗಿದೆ. ಕುಡಿಯುವ ನೀರು ಪೂರೈಸುತ್ತಿರುವ ಟ್ಯಂಕರ್ಗಳಿಗೆ ವಿಳಂಬವಿಲ್ಲದೇ ಜಿ.ಪಿ.ಎಸ್ ಅಳವಡಿಸಲು ಸೂಚಿಲಾಗಿದೆ.
62,48,640 ಮೆಟ್ರಿಕ್ ಟನ್ ಮೇವು ಲಭ್ಯ
ರಾಜ್ಯದಲ್ಲಿ 1,29,08,292 ಜಾನುವಾರುಗಳಿದ್ದು, ಪ್ರಸ್ತುತ 62,48,640 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದು ಮುಂದಿನ 12 ವಾರಗಳಿಗೆ ಸಾಕಾಗುತ್ತದೆ. ಪ್ರಸ್ತುತ 165 ಮೇವು ಬ್ಯಾಂಕ್ಗಳನ್ನು ತೆರೆಯಲಾಗಿದ್ದು, ಸದರಿ ಮೇವು ಬ್ಯಾಂಕ್ಗಳಲ್ಲಿ ಪ್ರತಿ ಕೆ.ಜಿಗೆ ರೂ.2.00 ರಂತೆ ಮೇವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. 16 ಗೋಶಾಲೆಗಳನ್ನು ತೆರೆಯಲಾಗಿದ್ದು, ಇದರಲ್ಲಿ 14,054 ಜಾನುವಾರುಗಳನ್ನು ಸಂರಕ್ಷಿಸಲಾಗಿದೆ. ಅಗತ್ಯತೆಯನುಸಾರ ಗೋಶಾಲೆ ಹಾಗೂ ಮೇವಿನ ಬ್ಯಾಂಕ್ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಹಸಿರು ಮೇವು ಬೆಳೆಯಲು 42.7 ಕೋಟಿ
ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಹಸಿರು ಮೇವು ಬೆಳೆಯಲು ರೂ.42.7 ಕೋಟಿಗಳ ವೆಚ್ಚದಲ್ಲಿ 16.80 ಲಕ್ಷ ಮಿನಿಕಿಟ್ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಇದರಿಂದಾಗಿ 63.00 ಲಕ್ಷ ಮೆಟ್ರಿಕ್ ಟನ್ ಹಸಿರು ಮೇವು ಇಲ್ಲಿಯವರೆಗೆ ಉತ್ಪಾದನೆಯಾಗಿದೆ.
ಒಣ ಮೇವು ಕೊರತೆ ಬರದಂತೆ ಎಚ್ಚರ
ನೀರಾವರಿ ಪ್ರದೇಶಗಳಾದ ರಾಯಚೂರು, ಮಂಡ್ಯ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭತ್ತದ ಮೇವನ್ನು ಬೇಲಿಂಗ್ ಮಾಡಿ ಕ್ರಮವಹಿಸಲಾಗಿದ್ದು, ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಒಣ ಮೇವನ್ನು ಮೇವಿನ ಕೊರತೆ ಇರುವ ಜಿಲ್ಲೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಹಣ
ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) - ಬರಪೀಡಿತ ತಾಲ್ಲೂಕುಗಳಿಗೆ ತಲಾ ರೂ.2.00 ಕೋಟಿಯಂತೆ ರೂ.324 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. - ಪ್ರತಿ ತಾಲ್ಲೂಕಿಗೆ ತಲಾ ರೂ.1. 00 ಕೋಟಿಯಂತೆ ಎರಡು ಬಾರಿ ಬಿಡುಗಡೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ - ಬಿಡುಗಡೆಯಾದ ಅನುದಾನ : ರೂ.201.4 ಕೋಟಿ - ಟಾಸ್ಕ್ಫೋರ್ಸ್ ಅಡಿಯಲ್ಲಿ.
ಪ್ರಸ್ತುತ ಲಭ್ಯವಿರುವ ಅನುದಾನ
ನಗರಾಭಿವೃದ್ಧಿ ಇಲಾಖೆ - ಬಿಡುಗಡೆಯಾದ ಅನುದಾನ : ರೂ.50.00 ಕೋಟಿ - ತುರ್ತು ಕುಡಿಯುವ ನೀರು ಪೂರೈಕೆ. ಪಶುಸಂಗೋಪನೆ ಇಲಾಖೆ - ರೂ.42.70 ಕೋಟಿಗಳು ಮಿನಿಕಿಟ್ಗಾಗಿ - ಕಂದಾಯ ಇಲಾಖೆಯಿಂದ ಬಿಡುಗಡೆಯಾದ ಅನುದಾನ ಒಟ್ಟು - ರೂ. 618.10 ಕೋಟಿ, ಬರ ಮತ್ತು ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು ರೂ.713.76 ಕೋಟಿಗಳು ಲಭ್ಯವಿದೆ.
ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ಸೃಜನೆ
ಉದ್ಯೋಗ ಸೃಜನೆ ಕಾಮಗಾರಿಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಸಮುದಾಯ ಮಟ್ಟದ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗದುಕೊಳ್ಳಲು ಸೂಚಿಸಲಾಗಿದೆ. ಮಾರ್ಚ್ 31, 2019ರ ಅವಧಿಯವರೆಗೆ ನಿಗದಿಪಡಿಸಿರುವ ಒಟ್ಟು 10.00 ಕೋಟಿ ಮಾನವ ದಿನಗಳ ಗುರಿಗೆ ಎದುರಾಗಿ 10.47 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 21.11 ಲಕ್ಷ ಕುಟಂಬಗಳಿಗೆ ಉದ್ಯೋಗ ಒದಗಿಸಿ ರೂ.3821.46 ಕೋಟಿ ವೆಚ್ಚ ಮಾಡಲಾಗಿದೆ.
ಕೂಲಿ ಕಾರ್ಮಿಕರಿಗೆ 15 ದಿನದಲ್ಲಿ ಹಣ
ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕನಿಷ್ಟ ಒಂದು ಸಾಮೂಹಿಕ ಕೆಲಸವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳಲಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು 8.10 ಕೋಟಿ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ 3.03 ಲಕ್ಷ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಬಿಸಿಲಿನ ತಾಪಮಾನ ಮತ್ತು ಉಷ್ಣಾಂಶದ ಪ್ರಖಾರತೆ ಹೆಚ್ಚಾಗಿರುವುದರಿಂದ ಕಾಮಗಾರಿಗಳ ಸ್ಥಳದಲ್ಲಿ ಶುದ್ದಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇನ್ನೂ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶೇ.98 ರಷ್ಟಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರ ಕೂಲಿ ಹಣ ಪಾವತಿಯನ್ನು 15 ದಿನಗೊಳಗೆ ಪಾವತಿಸಲಾಗಿದೆ.