ರಾಜ್ಯದ ಕೀರ್ತಿಪತಾಕೆ ಹಾರಿಸಿದ ವಿಕ್ರಂಗೆ ಸಿಎಂ ಎಚ್ಡಿಕೆ ಅಭಿನಂದನೆ
Recommended Video
ಬೆಂಗಳೂರು, ಜುಲೈ 2: ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಅರಣ್ಯ ರಕ್ಷಕ ವಿಕ್ರಂ ಸಿ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಹಿಮಾಲಯ ಪರ್ವತ ಏರಿದ ಯಶೋಗಾಥೆಯನ್ನು ವಿಕ್ರಂ ಅವರು ಸೋಮವಾರ (ಜು 2) ವಿವರಿಸಿದರು. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿಯವರು, ನಿಮ್ಮ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಜಯಪುರ ಗ್ರಾಮದವರಾದ ವಿಕ್ರಂ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಏನಾದರೊಂದು ಸಾಧಿಸಬೇಕೆಂದು ಛಲ ಹೊಂದಿದ್ದ ಅವರು ಹಿಮಾಲಯ ಪರ್ವತವೇರುವ ಸಾಹಸಕ್ಕೆ ಕೈ ಹಾಕಿದ್ದರು.
ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಕ್ರಂ, ಹಿಮಾಲಯ ಪರ್ವತವೇರಲು ಸಾಕಷ್ಟು ತಯಾರಿ ನಡೆಸಿದ್ದರು. ಪರ್ವತಾರೋಹಿಗಳಿಗೆ ನಡೆದ ಆಯ್ಕೆ ಸಂದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ 25 ಮಂದಿ ಆಯ್ಕೆಯಾಗಿದ್ದರು.
ಅದರಲ್ಲಿ ಯಶಸ್ವಿಯಾಗಿ ಹಿಮಾಲಯ ಪರ್ವತವನ್ನು ಏರಿದ 8 ಮಂದಿಗಳ ಪೈಕಿ ವಿಕ್ರಂ ಕೂಡ ಒಬ್ಬರು. ಇನ್ನೂ ವಿಶೇಷವೆಂದರೆ ಕರ್ನಾಟಕದ ಪೈಕಿ ಇವರೊಬ್ಬರೇ ಈ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ವಿಕ್ರಂ ಅವರ ಈ ಸಾಧನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮುಕ್ತಕಂಠದಿಂದ ಹೊಗಳಿ ಶ್ಲಾಘಿಸಿದರು.