ಸಾ.ರಾ.ಮಹೇಶ್-ಬಿಜೆಪಿ ನಾಯಕರ ಭೇಟಿ ಆಕಸ್ಮಿಕ: ಕುಮಾರಸ್ವಾಮಿ
Recommended Video
ಬೆಂಗಳೂರು, ಜುಲೈ 11: ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರು ಬಿಜೆಪಿ ನಾಯಕರನ್ನು ಇಂದು ಭೇಟಿ ಆಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಸೂಚಿಸಲಿದೆ ಎಂದೇ ಲೆಕ್ಕ ಹಾಕಲಾಗುತ್ತಿದೆ. ಆದರೆ ಈ ಭೇಟಿಯ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಸಾ.ರಾ.ಮಹೇಶ್ ಮತ್ತು ಬಿಜೆಪಿ ಮುಖಂಡರ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕೆಎಸ್ಟಿಡಿಸಿ ನಿರ್ವಹಿಸುವ ಕುಮಾರಕೃಪಾ ಅತಿಥಿ ಗೃಹದ ಹೊಸ ಕಟ್ಟಡಕ್ಕೆ ಕಾರ್ಯ ನಿಮಿತ್ತ ತೆರಳಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರ ಬಿಜೆಪಿ ನಾಯಕರೊಂದಿಗಿನ ಭೇಟಿ ಆಕಸ್ಮಿಕ, ಮಾತುಕತೆ ಸೌಜನ್ಯದ್ದು, ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದಿದ್ದಾರೆ.
ಕರ್ನಾಟಕ ರಾಜಕೀಯಕ್ಕೆ ರೋಚಕ ತಿರುವು! ಬಿಜೆಪಿ ನಾಯಕರೊಂದಿಗೆ ಸಾರಾ ಮಹೇಶ್!
ಮುಂದುವರೆದು, ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸುಭದ್ರವಾಗಿದೆ. ವಿಧಾನಮಂಡಲ ಅಧಿವೇಶನ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಸಚಿವ ಸಾ.ರಾ.ಮಹೇಶ್ ಅವರು ಗೆಸ್ಟ್ ಹೌಸ್ ಒಂದರಲ್ಲಿ ಬಿಜೆಪಿಯ ನಾಯಕರುಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತುಕತೆ ಮಾಡಿದ್ದರು, ಇದು ಭಾರಿ ಸುದ್ದಿಯಾಗಿತ್ತು.
ಜೆಡಿಎಸ್ ಪಕ್ಷವು ಬಿಜೆಪಿಗೆ ಬೆಂಬಲ ನೀಡಲಿದೆ, ಹಾಗಾಗಿ ಸಾ.ರಾ.ಮಹೇಶ್ ಅವರು ಬಿಜೆಪಿ ಮುಖಂಡರನ್ನು ಕುಮಾರಸ್ವಾಮಿ ಸೂಚನೆ ಮೇರೆಗೆ ಭೇಟಿ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಹಾಗಾಗಿ ಕುಮಾರಸ್ವಾಮಿ ಅವರು ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.
ಇದೇ ವಿಷಯದ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರು ಸಹ ಟ್ವೀಟ್ ಮಾಡಿದ್ದು, ಜೆಡಿಎಸ್ ಸಚಿವರ ಜೊತೆ ಸರ್ಕಾರದ ವಿಷಯ ಮಾತನಾಡಿದ್ದು ಸುಳ್ಳು, ಸಾರ್ವಜನಿಕ ಸ್ಥಳದಲ್ಲಿ ಅವರು ಭೇಟಿಯಾದದ್ದು ಕೇವಲ ಕಾಕತಾಳೀಯ ಅಷ್ಟೆ ಎಂದು ಹೇಳಿದ್ದಾರೆ.