ಸಂಪುಟ ಸಭೆ ಕರೆದ ಕುಮಾರಸ್ವಾಮಿ: ಸಿಎಂ ಸ್ಥಾನಕ್ಕೆ ರಾಜೀನಾಮೆ?
ಬೆಂಗಳೂರು, ಜುಲೈ 07: ಅಮೆರಿಕದಿಂದ ವಾಪಸ್ ಬರುತ್ತಿರುವ ಸಿಎಂ ಕುಮಾರಸ್ವಾಮಿ, ನಾಳೆ ಸಚಿವ ಸಂಪುಟ ತುರ್ತು ಸಭೆಯನ್ನು ಕರೆದಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು, ಮೈತ್ರಿ ಸರ್ಕಾರಕ್ಕೆ ಒದಗಿಬಂದಿರುವ ದೊಡ್ಡ ಮಟ್ಟದ ಕುತ್ತು ಮತ್ತು ಕುಮಾರಸ್ವಾಮಿ ಕರೆದಿರುವ ತುರ್ತು ಸಂಪುಟ ಸಭೆಯನ್ನು ಪಕ್ಕ-ಪಕ್ಕದಲ್ಲಿಟ್ಟು ನೋಡಿದರೆ, ಕುಮಾರಸ್ವಾಮಿ ಅವರು ರಾಜೀನಾಮೆ ನಿರ್ಣಯವನ್ನೇನಾದರೂ ಪ್ರಕಟಿಸುತ್ತಾರೆಯೇ ಎಂಬ ಅನುಮಾನ ಮೂಡದಿರದು.
ಸರ್ಕಾರ ಉಳಿಸಲು ಎಚ್.ಡಿ.ಕುಮಾರಸ್ವಾಮಿ ಮುಂದೆ 2 ಆಯ್ಕೆ
ನಿನ್ನೆಯಷ್ಟೆ ಜೆಡಿಎಸ್-ಕಾಂಗ್ರೆಸ್ನ ಹಲವು ಶಾಸಕರು ರಾಜೀನಾಮೆ ನೀಡಿ, 14 ಶಾಸಕರು ಮುಂಬೈನ ಹೊಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸರ್ಕಾರಕ್ಕೆ ಅತ್ಯಂತ ಸಂಕಷ್ಟದ ಸ್ಥಿತಿ ಇದಾಗಿದ್ದು, ಕಳೆದ ಒಂದು ವರ್ಷದಿಂದಲೂ ಇದನ್ನೇ ನೋಡುತ್ತಾ ಬಂದಿರುವ ಕುಮಾರಸ್ವಾಮಿ ಅವರಿಗೆ ಇದೆಲ್ಲಾ ರೇಜಿಗೆ ಹುಟ್ಟಿಸಿದೆ ಎಂದು ಹೇಳಲಾಗುತ್ತಿದೆ.
ಸಚಿವ ಸಂಪುರ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹ
ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಪಡೆದು ಕುಮಾರಸ್ವಾಮಿ ಅವರು ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದ್ದು, ಮೈತ್ರಿಗೆ ಆಗಬಹುದಾದ ಮುಜುಗರವನ್ನು ತಡೆಯಲು ತಾವೇ ರಾಜೀನಾಮೆಗೆ ಮುಂದಾದರೂ ಆಶ್ಚರ್ಯವಿಲ್ಲ.
ಕೆಲವು ಸಚಿವರ ರಾಜೀನಾಮೆ ಸೂಚನೆ
ಮತ್ತೊಂದು ಮೂಲದ ಪ್ರಕಾರ, ನಾಳೆ ಸಂಪುಟ ಸಭೆಯಲ್ಲಿ ಚರ್ಚಿಸಿ, ಕೆಲವು ಸಚಿವರನ್ನು ರಾಜೀನಾಮೆಗೆ ಉತ್ತೇಜಿಸಿ ಅತೃಪ್ತರಿಗೆ ಅವಕಾಶ ಮಾಡಿಕೊಡಲಾಗುವುದು ಎನ್ನಲಾಗುತ್ತಿದೆ.
ಕುಮಾರಸ್ವಾಮಿಗೆ 'ಕಾಮರಾಜ ಮಾರ್ಗ' ಈಗ ಉಳಿದಿರುವ ಏಕೈಕ ಆಯ್ಕೆ
ಸಚಿವರ ರಾಜೀನಾಮೆಗೆ ವೇಣುಗೋಪಾಲ್ ಸೂಚನೆ
ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಕೆಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಅತೃಪ್ತರಾಗಿರುವ ರಾಮಲಿಂಗಾ ರೆಡ್ಡಿ ಮತ್ತು ಇನ್ನೂ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಇಂದು ಸಂಜೆ ವಾಪಸ್ಸಾಗುತ್ತಿರುವ ಸಿಎಂ
ಕಳೆದ ಒಂದು ವಾರದಿಂದಲೂ ಅಮೆರಿಕದಲ್ಲಿರುವ ಕುಮಾರಸ್ವಾಮಿ ಅವರು ಇಂದು ಸಂಜೆ ರಾಜ್ಯಕ್ಕೆ ಬರುತ್ತಿದ್ದು, ಬಂದ ಕೂಡಲೇ ಮೈತ್ರಿ ಸರ್ಕಾರದ ಕುರಿತು ಸ್ಪಷ್ಟ ನಿಲವು ತೆಗೆದುಕೊಳ್ಳಲು ದೇವೇಗೌಡ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆ.