ಅಮೆರಿಕದಿಂದ ಮರಳಿದ ಸಿಎಂ: ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಭಾಗಿ
ಬೆಂಗಳೂರು, ಜುಲೈ 07: ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರು ಇಂದು ಸಂಜೆ 6:30 ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದರು. ಅವರು ಎಂಟು ದಿನಗಳ ದೀರ್ಘ ಪ್ರವಾಸದ ಬಳಿಕ ಇಂದು ವಾಪಸ್ಸಾಗಿದ್ದಾರೆ.
ಇಂದು ಸಂಜೆ ವೇಳೆಗೆ ದೆಹಲಿಗೆ ಬಂದಿಳಿದ ಕುಮಾರಸ್ವಾಮಿ ಅವರು, ವಿಶೇಷ ವಿಮಾನದಲ್ಲಿ ತುರ್ತಾಗಿ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಅತ್ಯಂತ ಕ್ಷಿಪ್ರ ಬೆಳವಣಿಗೆಗಳು ಕುಮಾರಸ್ವಾಮಿ ಅವರು ಅನುಪಸ್ಥಿತಿಯಲ್ಲಿ ನಡೆದಿವೆ. ಹಾಗಾಗಿ ಅವರ ಈ ಬರುವಿಕೆ ರಾಜ್ಯ ರಾಜಕಾರಣಕ್ಕೆ ಮತ್ತಷ್ಟು ಬಿರುಸು ಮತ್ತು ಬದಲಾವಣೆ ನೀಡುವ ನಿರೀಕ್ಷೆ ಇದೆ.
ಬೆಂಗಳೂರಿಗೆ ಬಂದ ಕೂಡಲೇ ರಾಜಕೀಯವಾಗಿ ಸಕ್ರಿಯರಾಗಿರುವ ಕುಮಾರಸ್ವಾಮಿ, ತಾಜ್ ವೆಸ್ಟ್ ಎಂಡ್ ಹೊಟೆಲ್ನಲ್ಲಿ ಆಯೋಜಿಸಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.
18 ಗಂಟೆ ವಿಮಾನ ಪ್ರಯಾಣ ಮಾಡಿರುವ ಸಿಎಂ
ಸುಮಾರು 18 ಗಂಟೆ ವಿಮಾನ ಯಾನ ಮಾಡಿರುವ ಕುಮಾರಸ್ವಾಮಿ ಅವರು, ಬಂದ ಕೂಡಲೇ ಯಾವುದೇ ವಿಶ್ರಾಂತಿಯ ಮೊರೆ ಹೋಗದೇ ನೇರವಾಗಿ ಸರ್ಕಾರವನ್ನು ಭದ್ರಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಸಂಪುಟ ಸಭೆ ಕರೆದಿರುವ ಕುಮಾರಸ್ವಾಮಿ
ಇಂದು ಜೆಡಿಎಸ್ ಶಾಸಕಕಾಂಗ ಸಭೆ ಮುಗಿಸಿ ತಮ್ಮ ಪಕ್ಷದ ಶಾಸಕರನ್ನು ಭದ್ರಗೊಳಿಸಿಕೊಳ್ಳಲಿರುವ ಕುಮಾರಸ್ವಾಮಿ ಅವರು, ನಾಳೆ ಸಂಪುಟ ಸಭೆ ಕರೆದಿದ್ದು, ಕೆಲವು ಸಚಿವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಿದ್ದಾರೆ.
ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚೆ
ಜೆಡಿಎಸ್ ಶಾಸಕಾಂಗ ಸಭೆಯ ಬಳಿಕ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ಸಹ ಚರ್ಚೆ ನಡೆಸಿ ಮುಂದಿನ ಕ್ರಮಕ್ಕೆ ಕೈ ಹಾಕಲಿದ್ದಾರೆ.
ಜೂನ್ 28 ರಂದು ಅಮೆರಿಕಕ್ಕೆ ತೆರಳಿದ್ದ ಸಿಎಂ
ಕುಮಾರಸ್ವಾಮಿ ಅವರು ಜೂನ್ 28 ರಂದು ಅಮೆರಿಕಕ್ಕೆ ತೆರಳಿದ್ದರು, ಅಲ್ಲಿ ನ್ಯೂ ಜರ್ಸಿಯಲ್ಲಿ ಕಾಲಭೈರವೇಶ್ವರ್ ಸ್ವಾಮಿ ದೇವಾಲಯ ಶಂಕು ಸ್ಥಾಪನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಹೂಡಿಕೆದಾರರ ಸಮಾವೇಶ, ಒಕ್ಕಲಿಗರ ಸಮಾವೇಶದಲ್ಲಿಯೂ ಸಿಎಂ ಅವರು ಪಾಲ್ಗೊಂಡಿದ್ದರು. ಇದು ಸರ್ಕಾರಿ ಅಧಿಕೃತ ಪ್ರವಾಸ ಆಗಿರಲಿಲ್ಲ.