ದೇಶ ವಿರೋಧಿ ಹೇಳಿಕೆ ನೀಡದಂತೆ ಇಬ್ರಾಹಿಂಗೆ ಬೆದರಿಕೆ ಸಂದೇಶ!
ಬೆಂಗಳೂರು, ಜೂನ್ 22 : ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಸಂದೇಶ ಬಂದಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಕುರಿತು ದೂರು ನೀಡಲಾಗಿದೆ.
ಶುಕ್ರವಾರ ಸಿ.ಎಂ.ಇಬ್ರಾಹಿಂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಈ ಕುರಿತು ದೂರು ನೀಡಿದರು. ವಾಟ್ಸಪ್ ಸಂದೇಶ ಕಳಿಸಿದವರು ಯಾರು? ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರವಿ ಪೂಜಾರಿಯಿಂದ ಜೆಡಿಎಸ್ ಶಾಸಕನಿಗೆ ಕೊಲೆ ಬೆದರಿಕೆ
'ನಿನ್ನ ಭಾಷೆ ಮೇಲೆ ಹಿಡಿತವಿರಲಿ. ದೇಶದ ಬಗ್ಗೆ ಅಗೌರವದಿಂದ ಮಾತನಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ' ಎಂದು ಸಿ.ಎಂ.ಇಬ್ರಾಹಿಂ ಅವರಿಗೆ ವಾಟ್ಸಪ್ ಸಂದೇಶ ಬಂದಿದೆ. ಸಂದೇಶ ಕಳಿಸಿದ ವ್ಯಕ್ತಿ ರವಿ ಪೂಜಾರಿ ಎಂದು ಹೇಳಿಕೊಂಡಿದ್ದಾನೆ.
'ರವಿ ಪೂಜಾರಿ ಜೊತೆ ನಾನು ಎಂದೂ ಮಾತನಾಡಿಲ್ಲ. ನಾನು ಯಾವುದೇ ದೇಶ ವಿರೋಧಿ ಹೇಳಿಕೆಗಳನ್ನೂ ನೀಡಿಲ್ಲ. ಸಂದೇಶ ಕಳುಹಿಸಿದ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಸಿ.ಎಂ.ಇಬ್ರಾಹಿಂ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಚಿವ ತನ್ವೀರ್ ಸೇಠ್ ಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ
ರವಿ ಪೂಜಾರಿಯಿಂದ ಕರ್ನಾಟಕದ ರಾಜಕಾರಣಿಗಳಿಗೆ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. ಹಿಂದೆ ಎಚ್.ಎಂ.ರೇವಣ್ಣ, ತನ್ವೀರ್ ಸೇಠ್, ರಮಾನಾಥ ರೈ ಅವರಿಗೆ ರವಿ ಪೂಜಾರಿ ಕಡೆಯಿಂದ ಕರೆ ಬಂದಿತ್ತು.