ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಮುಂದಾದ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ!
ಬೆಂಗಳೂರು, ಡಿ. 14: ಎರಡು ಉಪ ಚುನಾವಣೆಯಲ್ಲಿ ಸೋತು ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಅಘಾತ ಎದುರಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಹಿರಿಯ ನಾಯಕ, ಮಾಜಿ ಕೆಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಕಾಂಗ್ರೆಸ್ ತೊರೆಯುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಬ್ರಾಹಿಂ ಅವರನ್ನು ಭೇಟಿ ಮಾಡಿ ಸಮಾಧಾನ ಮಾಡುವ ಪ್ರಯತ್ನವನ್ನೂ ಮಾಡಿದ್ದರು.
Recommended Video
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಜೆಡಿಎಸ್ ಸೇರುವ ಬಗ್ಗೆ ಅವರು ದೃಢಪಡಿಸಿದ್ದು, ತಂದೆ ಮಗ ಬರುವುದಕ್ಕೆ ಬೇಡ ಅಂತಾನಾ ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್ ಸೇರುವುದನ್ನು ಖಚಿತಪಡಿಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆ ಕುರಿತು ಭೇಟಿ ಮಾತುಕತೆ ನಡೆದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಬ್ರಾಹಿಂ ಭೇಟಿ ಮಾಡಿದ್ದ ಎಚ್ಡಿಕೆ
ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆಗಲೇ ಇಬ್ರಾಹಿಂ ಅವರು ಕಾಂಗ್ರೆಸ್ ತೊರೆದು ಜಡಿಎಸ್ ಸೇರುವವುದು ಖಚಿತವಾಗಿತ್ತು. ಹೀಗಾಗಿ ಎಚ್ಡಿಕೆ-ಇಬ್ರಾಹಿಂ ಭೇಟಿ ಬಳಿಕ ತಕ್ಷಣವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೂ ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುವಂತೆ ಡಿಕೆಶಿ ಮನವಿ ಮಾಡಿಕೊಂಡಿದ್ದರು. ಆದರೆ ಅದು ವರ್ಕೌಟ್ ಆಗಿಲ್ಲ ಎಂದಬುದು ಇಂದಿನ ಎಚ್ಡಿಡಿ-ಇಬ್ರಾಹಿಂ ಭೇಟಿಯಿಂದ ಬಹಿರಂಗವಾಗಿದೆ.
ಕಾಂಗ್ರೆಸ್ ಕುರಿತು ಅಸಮಾಧಾನ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ನಾಯಕರ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಂದೆ ಮಗನಿಗೆ ಬೇಡ ಅಂತಾರಾ? ಎನ್ನುವ ಮೂಲಕ ದೇವೇಗೌಡರು ಜೆಡಿಎಸ್ಗೆ ಸೇರುವ ಬಗ್ಗೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ನೇರವಾಗಿಯೇ ಹೇಳಿದರು. ಆ ಮೂಲಕ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವುದು ಖಚಿತ ಎಂದರು.
ನಾನು ಮುಸ್ಲಿಂ ನಾಯಕನಲ್ಲ!
ಮಾಜಿ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ಮನೆಗೆ ಈಗಲೂ ಹೋಗ್ತೇನೆ. ನನಗೆ ಯಾರೂ ಮೇಲೂ ವ್ಯಕ್ತಿಗತ ದ್ವೇಷ ಇಲ್ಲ. ನಾನು ಅಜಾತ ಶತ್ರು. ಡಿ.ಕೆ. ಶಿವಕುಮಾರ್ ಕೂಡ ನಮ್ಮ ಮನೆಗೆ ಬಂದಿದ್ರು. ಎಲ್ಲರ ಅಭಿಪ್ರಾಯ ಪಡೆದು ತಿಳಿಸುವುದಾಗಿ ಹೇಳಿದ್ದೇನೆ. ಗೋ ಹತ್ಯೆ ವಿಧೇಯಕದ ಬಗ್ಗೆ ರೈತ ಸಂಘದ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ಮಾಡಲಿ ಎಂದಿರುವ ಸಿ.ಎಂ. ಇಬ್ರಾಹಿಂ ನಾನೊಬ್ಬ ಮುಸ್ಲಿಂ ನಾಯಕ ಅಲ್ಲ ಎಂದರು. ನಾವಿದ್ದಾಗ ದೇವೇಗೌಡರು ಮುಸ್ಲಿಂ ಸಮುದಾಯದಕ್ಕೆ ಮೀಸಲು ಕೊಟ್ಟಿದ್ದರು. ಈಗ ಕಾಂಗ್ರೆಸ್ ಪಕ್ಷದ ಒಳಗೆ ಎಲ್ಲರೂ ಕೂತಿದ್ದಾರೆ ನಾವು ಮಾತ್ರ ನಿಂತಿದ್ದೇವೆ. ಅದು ನೋವಾಗುತ್ತದೆ ಎಂದು ತಾವು ಕಾಂಗ್ರೆಸ್ ತೊರೆಯಲು ಕಾರಣವಾದ ವಿಚಾರವನ್ನು ವ್ಯಕ್ತಪಡಿಸಿದರು.
ಎಲ್ಲೂ ಸಾಬರ ಪೋಟೋ ಇಲ್ಲ
ಕಾಂಗ್ರೆಸ್ ಪೋಸ್ಟರ್ನಲ್ಲಿ ಎಲ್ಲೂ ಸಾಬರ ಪೋಟೋ ಇಲ್ಲ. ಯಾಕಿಲ್ಲ? ಕಳೆದ 13 ಉಪ ಚುನಾವಣೆ ಪ್ರಚಾರಕ್ಕೆ ನಾನು ಹೋಗಿಲ್ಲ. ಶಿರಾ ಉಪ ಚುನಾವಣೆ ಏನಾಯ್ತು? ಸೋತರು. ನಾನು ಆಗಲೂ ಪ್ರಚಾರಕ್ಕೆ ಹೋಗಿರಲಿಲ್ಲ. ನನ್ನಿಂದಾಗಿಯೇ ಸೋತರೆಂದು ಅಹಂಕಾರ ಪಡಲ್ಲ. ಸೋಲಿಗೆ ನನ್ನ ಕೊಡುಗೆ ಇಲ್ಲ. ಯಾರು ಏನೇ ಮಾಡಿದರೂ ಮುಂದೆ ಸಂಪೂರ್ಣ ಬಹುಮತ ಬರುತ್ತದೆ ಎಂದು ಎದೆತಟ್ಟಿ ಹೇಳಲಾಗುವುದಿಲ್ಲ ಎಂದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಕಿಂಗ್ಮೇಕರ್ ಆಗುವ ಸೂಚನೆ ನೀಡಿದರು.