ಜೆಡಿಎಸ್ಗೆ ಹೊರಟು ನಿಂತ ಎಂಎಲ್ಸಿ, ಕಾಂಗ್ರೆಸ್ ನಾಯಕ?
ಬೆಂಗಳೂರು, ಸೆಪ್ಟೆಂಬರ್ 23; ಜೆಡಿಎಸ್ನ ಕೆಲವು ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ನಡುವೆಯೇ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯರೊಬ್ಬರು ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎಂಬ ಮಾತು ದಟ್ಟವಾಗಿ ಹಬ್ಬಿದೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಪ್ತರಾಗಿರುವ ಸಿ. ಎಂ. ಇಬ್ರಾಹಿಂ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡಿರುವ ಅವರು ಪಕ್ಷ ಬದಲಾವಣೆ ಮಾಡಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಭದ್ರಾವತಿಗೆ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಕುಮಾರಣ್ಣ
ಎರಡು ದಿನಗಳ ಅಂತರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯನ್ನು ಎರಡು ಸಲ ಸಿ. ಎಂ. ಇಬ್ರಾಹಿಂ ಭೇಟಿ ಮಾಡಿದ್ದರು. ಮಂಗಳವಾರ ಭದ್ರಾವತಿಯಲ್ಲಿ ಕುಮಾರಸ್ವಾಮಿ. ವೈ. ಎಸ್. ವಿ. ದತ್ತಾ, ಸಿ. ಎಂ. ಇಬ್ರಾಹಿಂ ಒಂದೇ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು.
ಶಿವಮೊಗ್ಗ ಜೆಡಿಎಸ್ನಲ್ಲಿ ಸಂಚಲನ ಮೂಡಿಸಿದ ಕುಮಾರಣ್ಣ!
ಜೆಡಿಎಸ್ ಸೇರುವ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಿ. ಎಂ. ಇಬ್ರಾಹಿಂ, "ರಾಜಕೀಯವಾಗಿ ನನ್ನ ತೀರ್ಮಾನ ಏನು ಎಂದು ದೆಹಲಿಗೆ ಹೋದ ನಂತರ ಅಂತಿಮಗೊಳಿಸುವೆ. ಯಾರೂ ಏನೂ ಕೊಡಬೇಕಾಗಿಲ್ಲ. ನಾನು ಈಗ ಕಾಂಗ್ರೆಸ್ನಲ್ಲಿದ್ದೇನೆ. ಬಿಜೆಪಿಯವರು ಬಂದು ಭೇಟಿಯಾಗುತ್ತಾರೆ. ಹಾಗೆಂದು ನಾನು ಬಿಜೆಪಿಗೆ ಹೋಗುತ್ತೇನೆಯೇ?" ಎಂದು ಪ್ರಶ್ನಿಸಿದ್ದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಮಾಜಿ ಶಾಸಕರ ಮಾತು!
ಎಚ್. ಡಿ. ಕುಮಾರಸ್ವಾಮಿ ಭೇಟಿ
ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭದ್ರಾವತಿಗೆ ಭೇಟಿ ನೀಡಿದ್ದರು. ತಾಲೂಕಿನ ಗೋಣಿಬೀಡು ಗ್ರಾಮದಲ್ಲಿರುವ ಶಕ್ತಿಧಾಮದಲ್ಲಿ ಮಾಜಿ ಶಾಸಕ ದಿ. ಅಪ್ಪಾಜಿ ಗೌಡ ಪ್ರತಿಮೆಯನ್ನು ಅನಾವರಣ ಮಾಡಿದ್ದರು.
ಈ ಕಾರ್ಯಕ್ರಮದಲ್ಲಿ ಸಿ. ಎಂ. ಇಬ್ರಾಹಿಂ ಸಹ ಪಾಲ್ಗೊಂಡಿದ್ದರು. "ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸುತ್ತೇವೆ" ಎಂದು ಹೇಳಿದ್ದರು. ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಸಹ ಈ ಕಾರ್ಯಕ್ರಮದಲ್ಲಿದ್ದರು.
ಇದೇ ಕಾರ್ಯಕ್ರಮದಲ್ಲಿ ಎಚ್. ಡಿ. ಕುಮಾರಸ್ವಾಮಿ, "ಅಪ್ಪಾಜಿಗೌಡ ಅವರ ಬೆಂಬಲಿಗರು, ಭದ್ರಾವತಿ ಕ್ಷೇತ್ರದ ಜನರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಹಾಗಾಗಿ ಶಾರದಾ ಅಪ್ಪಾಜಿಗೌಡ ಅವರನ್ನು ಮುಂದಿನ ಅಭ್ಯರ್ಥಿಯಾಗಿ ಮಾಡುತ್ತೇನೆ" ಎಂದು ಘೋಷಣೆ ಮಾಡಿದ್ದರು.
ಬಿಡದಿಯ ತೋಟದ ಮನೆಯಲ್ಲಿ ಭೇಟಿ
ಇನ್ನು ಬುಧವಾರ ಸಿ. ಎಂ. ಇಬ್ರಾಹಿಂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯನ್ನು ಬಿಡದಿಯ ತೋಟದ ಮನೆಯಲ್ಲಿ ಭೇಟಿ ಮಾಡಿದ್ದರು. ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆಯನ್ನು ನಡೆಸಿದ್ದರು.
ಎರಡು ದಿನಗಳಲ್ಲಿ ಎರಡು ಬಾರಿ ಸಿ. ಎಂ. ಇಬ್ರಾಹಿಂ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ನವೆಂಬರ್ನಲ್ಲಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಈ ಕುರಿತು ಯಾವುದೇ ನಾಯಕರು ಪ್ರತಿಕ್ರಿಯೆ ನೀಡಿಲ್ಲ.
ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಸಿ. ಎಂ. ಇಬ್ರಾಹಿಂ ಜೆಡಿಎಸ್ಗೆ ಬಂದರೆ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಪ್ರಸ್ತುತ ಎಚ್. ಕೆ. ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರು. 2023ರ ಚುನಾವಣೆಗೆ ತಯಾರಿ ಆರಂಭಿಸಿರುವ ಜೆಡಿಎಸ್ ಪಕ್ಷ ಹಲವಾರು ಬದಲಾವಣೆಗೆಳನ್ನು ಮಾಡಲಿದೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಸಿ. ಎಂ. ಇಬ್ರಾಹಿಂಗೆ ಅಧ್ಯಕ್ಷ ಪಟ್ಟ ನೀಡಿ ಸಮುದಾಯದ ಮತಗಳನ್ನು ಸೆಳೆಯಲು ಸಹ ತಂತ್ರ ರೂಪಿಸಿದೆ. ಸಿ. ಎಂ. ಇಬ್ರಾಹಿಂ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಆಪ್ತರಾಗಿರುವುದರಿಂದ ಅವರು ಅಧ್ಯಕ್ಷರಾಗಲು ಯಾರೂ ಸಹ ವಿರೋಧ ವ್ಯಕ್ತಪಡಿಸುವುದಿಲ್ಲ.
Recommended Video
ಕುಮಾರಸ್ವಾಮಿ ಬದಲಾಣೆ ಬಯಸಿದ್ದಾರೆ
ರಾಜರಾಜೇಶ್ವರಿ ನಗರ, ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸೋಲು ಕಂಡಿದ್ದರು. ಉಪ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದರು. ಆದರೆ ರಾಜೀನಾಮೆಗೆ ಎಚ್. ಡಿ. ದೇವೇಗೌಡರು ಸಹಮತ ವ್ಯಕ್ತಪಡಿಸಿರಲಿಲ್ಲ. ಸೋಲಿನ ಪರಾಮರ್ಶೆ ನಡೆಸೋಣ, ಪಕ್ಷ ಸಂಘಟನೆ ಬಲಪಡಿಸೋಣ ಎಂದು ಹೇಳಿದ್ದರು. ಎಚ್. ವಿಶ್ವನಾಥ್ ರಾಜೀನಾಮೆ ಬಳಿಕ ಕುಮಾರಸ್ವಾಮಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಆದರೆ ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಇವೆ. ಈಗ ಸಿ. ಎಂ. ಇಬ್ರಾಹಿಂ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.