ಜೂನ್ 18ರಂದು ಗಾರ್ಮೆಂಟ್ ನೌಕರರ ಸಮಸ್ಯೆ ಕುರಿತು ಸಭೆ
ಬೆಂಗಳೂರು, ಜೂನ್ 12: ಗಾರ್ಮೆಂಟ್ಸ್ ನೌಕರರು ಹಾಗೂ ಟೆಕ್ಸ್ಟೈಲ್ಸ್ ನೌಕರರಿಗೆ ಕನಿಷ್ಠ ವೇತನ ನೀಡುವ ಕುರಿತಂತೆ ಜೂನ್ 18ರಂದು ಎಚ್ಡಿ ಕುಮಾರಸ್ವಾಮಿ ಸಭೆ ನಿಗದಿ ಮಾಡಿದ್ದಾರೆ.
ಈ ಸಭೆಯಲ್ಲಿ ಗಾರ್ಮೆಂಟ್ ಹಾಗೂ ಟೆಕ್ಸ್ ಟೈಲ್ ಮಾಲೀಕರ ಸಂಘ ಹಾಗೂ ನೌಕರರ ಸಂಘದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಗಾರ್ಮೆಂಟ್ಸ್ ಹಾಗೂ ಟೆಕ್ಸ್ ಟೈಲ್ ನೌಕರರ ಸಂಘದ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಂಡ ನಂತರ ಮುಖ್ಯಮಂತ್ರಿಗಳು ಸಭೆ ಕರೆಯಲು ನಿರ್ದೇಶನ ನೀಡಿದ್ದಾರೆ.
ಹೊಸ ಸರ್ಕಾರದ ಮುಂದೆ ಬೇಡಿಕೆ ಇಡಲು ಮುಂದಾದ ಗಾರ್ಮೆಂಟ್ಸ್ ನೌಕರರು
ಗಾರ್ಮೆಂಟ್ ಕ್ಷೇತ್ರದಲ್ಲಿ ಬೆಂಗಳೂರು ಇಡೀ ದೇಶದಲ್ಲಿ ಹೆಸರಾಗಿದೆ. ಇಲ್ಲಿ ತಯಾರಾಗುತ್ತಿರುವ ವಸ್ತ್ರಗಳು ಅತ್ಯುತ್ತಮ ಮಟ್ಟ ಹಾಗೂ ವಿನ್ಯಾಸಗಳಿಂದ ಕೂಡಿದೆ. ಜಗತ್ತಿನ ನಾನಾ ದೇಶಗಳಿಗೆ ಇಲ್ಲಿ ತಯಾರಿಸಲಾದ ಉಡುಪುಗಳು ರಫ್ತಾಗುತ್ತಿವೆ.
ಆದರೆ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬದುಕಿನ ಗುಣಮಟ್ಟ ಸುಧಾರಿಸಿಲ್ಲ. ಇವರಿಗೆ ಕನಿಷ್ಠ ವೇತನ ಹಾಗೂ ಅಗತ್ಯ ಅನುಕೊಲಗಳನ್ನು ಒದಗಿಸದಿರುವುದೇ ಇದಕ್ಕೆ ಕಾರಣ ಎಂದು ಸಂಘದ ಮುಖ್ಯಸ್ಥರು ಕುಮಾರಸ್ವಾಮಿಯವರಿಗೆ ತಿಳಿಸಿದರು.
ಸಿಎಂ ಎರಡೂ ಕಡೆಯ ಅಭಿಪ್ರಾಯವನ್ನು ಆಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಎನ್ ಲಕ್ಷ್ಮೀನಾರಾಯಣ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಅಮಲನ್ ಆದಿತ್ಯ ಬಿಸ್ವಾಸ್, ಗಾರ್ಮೆಂಟ್ ಹಾಗೂ ಟೆಕ್ಸ್ ಟೈಲ್ ನೌಕರರ ಸಂಘದ ಅಧ್ಯಕ್ಷೆ ಪ್ರತಿಭಾ, ಸಂಘದ ಕಾನೂನು ಸಲಹೆಗಾರ ಜೈರಾಮ್ ಹಾಜರಿದ್ದರು.