ಜನತಾದರ್ಶನಕ್ಕೆ 4 ಸದಸ್ಯರ ತಂಡ ರಚನೆ ಮಾಡಿದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜೂನ್ 04 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನತಾ ದರ್ಶನ ಕಾರ್ಯಕ್ರಮದ ನಿರ್ವಹಣೆಗೆ ತಂಡವೊಂದನ್ನು ರಚನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿದ್ದರೆ ಪ್ರತಿದಿನ ಜನತಾದರ್ಶನ ನಡೆಯಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಜನತಾ ದರ್ಶನದ ನಿರ್ವಹಣೆಗೆ 4 ಸದಸ್ಯರ ತಂಡವನ್ನು ರಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಯೇ ಈ ತಂಡ ಕೆಲಸ ನಿರ್ವಹಿಸಲಿದೆ.
ದಾರಿಯಲ್ಲಿ ಸಿಕ್ಕ ಅಭಿಮಾನಿಗಳನ್ನು ನಿಂತು ಮಾತನಾಡಿಸಿದ ಸಿಎಂ ಕುಮಾರಸ್ವಾಮಿ
ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸುತ್ತಾರೆ. ಅವರ ಮಾಹಿತಿ ಸಂಗ್ರಹಣೆ ಮಾಡುವುದು ತಂಡದ ಕೆಲಸವಾಗಿದೆ. ಮಾಹಿತಿಯನ್ನು ಕಂಪ್ಯೂಟರ್ನಲ್ಲಿ ದಾಖಲಿಸಿ, ಸಮಸ್ಯೆಗಳ ಇತ್ಯರ್ಥಕ್ಕೆ ತಂಡ ಕೆಲಸ ಮಾಡಲಿದೆ.
ಸೋಮವಾರ ಸಹ ಜನತಾ ದರ್ಶನ ನಡೆಯಿತು. ಶಿವಮೊಗ್ಗ ಜಿಲ್ಲೆಯ ಸೊರಬದ ವಿಕಲಚೇತನ ಮಾಲತೇಶ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಎಂಬಿಎ ವ್ಯಾಸಂಗ ಮಾಡುತ್ತಿದ್ದ ಅವರು ಬಲಗಾಲು ಕಳೆದುಕೊಂಡಿದ್ದಾರೆ. ಇದನ್ನು ಆಲಿಸಿದ ಸಿಎಂ ಅವರಿಗೆ ಕಚೇರಿಯಲ್ಲಿಯೇ ಕೆಲಸ ನೀಡುವುದಾಗಿ ಹೇಳಿದ್ದಾರೆ.
ಕೃಷ್ಣಾದಲ್ಲಿ ಮುಖ್ಯಮಂತ್ರಿ ಭೇಟಿಗೆ ಸಾರ್ವಜನಿಕರಿಗೆ ಅವಕಾಶ!
ಎಚ್.ಡಿ.ಕುಮಾರಸ್ವಾಮಿ ಅವರು ಸದ್ಯ ಜೆ.ಪಿ.ನಗರದ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿ ಸ್ಥಳವಕಾಶ ಕಡಿಮೆ ಇದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನ ನಡೆಯುತ್ತದೆ.
ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿದ್ದರೆ ಪ್ರತಿದಿನ 10 ರಿಂದ 11 ಗಂಟೆಯ ತನಕ ಜನತಾದರ್ಶನ ನಡೆಯಲಿದೆ. ಕುಮಾರಸ್ವಾಮಿ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಜನತಾ ದರ್ಶನ ನಡೆಸುತ್ತಿದ್ದರು.