ಚುನಾವಣೆಗೂ ಸಾಲಮನ್ನಾ ಹಣಕ್ಕೂ ಸಂಬಂಧವಿಲ್ಲ: ಕುಮಾರಸ್ವಾಮಿ
ಬೆಂಗಳೂರು, ಜೂನ್ 11: ಸಾಲಮನ್ನಾಕ್ಕಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾದ ಹಣವು ಯಾವುದೇ ಮಾಹಿತಿ ಇಲ್ಲದೆ ಸರ್ಕಾರಕ್ಕೆ ವಾಪಸ್ ಹೋಗಿರುವ ಸಂಗತಿ ರೈತರನ್ನು ಕಂಗಾಲಾಗಿಸಿದೆ.
ರಾಜ್ಯದ ಅನೇಕ ಭಾಗಗಳಲ್ಲಿ ಸಾಲಮನ್ನಾದ ಹಣ ರೈತರ ಬ್ಯಾಂಕ್ ಖಾತೆಗಳಿಗೆ ಜಮಾವಣೆಯಾಗಿತ್ತು. ರಾಜ್ಯ ಸರ್ಕಾರ ಕೊಟ್ಟ ಭರವಸೆ ಕೊನೆಗೂ ಈಡೇರಿದೆ ಎಂಬ ಖುಷಿ ರೈತರಲ್ಲಿ ಮೂಡಿತ್ತು. ಆದರೆ, ಯಾದಗಿರಿ ಜಿಲ್ಲೆಯಲ್ಲಿ ನೂರಾರು ರೈತರ ಖಾತೆಗೆ ಜಮೆಯಾಗಿದ್ದ ಹಣ ವಾಪಸ್ ಸರ್ಕಾರಕ್ಕೆ ಹೋಗಿರುವುದು ಅವರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.
ರಾಹುಲ್ ಗಾಂಧಿಯ ಒಂದೇ ಪತ್ರದಿಂದ ಕೇರಳ ರೈತರು ನಿರಾಳ
ಶಹಾಪುರ, ಸಗರ, ಗೋಗಿ ಮುಂತಾದ ಕಡೆಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದ್ದ ಸಾಲಮನ್ನಾದ ಹಣ ವಾಪಸ್ ಹೋಗಿದೆ. ಎಷ್ಟು ಮೊತ್ತದ ಹಣ ಹೀಗೆ ವಾಪಸ್ ಹೋಗಿದೆ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ. 20 ಕೋಟಿ ರೂಪಾಯಿಗೂ ಅಧಿಕ ಹಣ ಸರ್ಕಾರಕ್ಕೆ ಮರಳಿದೆ ಎಂದು ರೈತರು ದೂರಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಸತತ ವರದಿಗಳು ಪ್ರಸಾರವಾದ ಬಳಿಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಾಲಮನ್ನಾದ ಹಣ ವಾಪಸಾತಿ ಗೊಂದಲದ ಕುರಿತು ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ವೇಳೆ ಜನರನ್ನು ಮರುಳು ಮಾಡಲು ಹಣ ಜಮೆ ಮಾಡಲಾಗಿತ್ತು. ಚುನಾವಣೆ ಮುಗಿದ ಬಳಿಕ ಅದನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಆಡಿಟ್ ಸಂದರ್ಭದಲ್ಲಿ ಬೆಳಕಿಗೆ
'ಕೆಲವು ಮಾಧ್ಯಮಗಳಲ್ಲಿ ಸಾಲ ಮನ್ನಾ ಕುರಿತಂತೆ ಪ್ರಕಟವಾಗಿರುವ ಸುದ್ದಿಗೆ ಸ್ಪಷ್ಟನೆ. ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ. ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಜೂನ್ 14ರಂದು ಬ್ಯಾಂಕರ್ಗಳ ಸಭೆ
ಈ ವರೆಗೆ 13,988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಸಾಲಮನ್ನಾ ಕುರಿತು ರೈತರಿಗೆ ಪತ್ರ ಬರೆದ ಸಿಎಂ:ಪೋಸ್ಟ್ ತಲುಪಿಸುವಲ್ಲಿ ಅಂಚೆಯಣ್ಣ ಹೈರಾಣ
ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ
ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎನ್ನುವುದನ್ನೂ ಈ ಮೂಲಕ ಸ್ಪಷ್ಟಪಡಿಸಿದೆ. ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಟ್ವಿಟ್ಟರ್ನಲ್ಲಿ ಕೋರಿದ್ದಾರೆ.
ಪ್ರಜಾಪ್ರಭುತ್ವದ ಕೊಲೆ
ಕೊಟ್ಟಂತೆ ಮಾಡಿ ಕಿತ್ತುಕೊಂಡಿದೆ ರಾಜ್ಯದ ಸಮ್ಮಿಶ್ರ ಸರ್ಕಾರ. ರೈತರ ಹೆಸರಿಂದ ಮತ ಗಳಿಸಿ, ಒಂದೆಡೆ ರೈತರ ಜಾಗ ಕಿತ್ತುಕೊಂಡು, ಮತ್ತೊಂದೆಡೆ ಅವರಿಗೆ ಸಾಲ ಮನ್ನಾ ವಿಷಯದಲ್ಲಿ ಮೋಸ ಮಾಡಿದ ಈ ಸರ್ಕಾರ ನಿಜವಾಗಿಯೂ ಪ್ರಜಾಪ್ರಭುತ್ವದ ಕೊಲೆಯೇ ಮಾಡಿಬಿಟ್ಟಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಟೀಕಿಸಿದ್ದಾರೆ.
ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್
ಸರ್ಕಾರದ ಕನ್ನ
ಚುನಾವಣೆ ಮುನ್ನ ಸಾಲಮನ್ನಾ, ಚುನಾವಣಾ ನಂತರ ಸರ್ಕಾರದ ಕನ್ನಾ. ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಮೆಯಾದ ಹಣ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ರೈತರ ಖಾತೆಗಳಿಂದ ಮಾಯವಾಗಿದೆ! ಜನರ ಕಣ್ಣಿಗೆ ಮಣ್ಣೆರಚುವ ಇಂತಹ ಕೃತ್ಯಗಳಿಗೆ ಏಕೆ ಕೈ ಹಾಕುವಿರಿ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ? ಎಂದು ಬಿಜೆಪಿ ಶಾಸಕ ಡಾ. ಅಶ್ವತ್ಥ್ ನಾರಾಯಣ್ ಪ್ರಶ್ನಿಸಿದ್ದಾರೆ.