ಸಿದ್ದು ಫ್ರೆಂಡ್ ಇಬ್ರಾಹಿಂಗೆ ಕಾಂಗ್ರೆಸ್ ಆಡಳಿತ ತೃಪ್ತಿಯಿಲ್ಲವಂತೆ...
ರಾಜ್ಯ ಸರಕಾರದ ಆಡಳಿತ ವೈಖರಿ ತೃಪ್ತಿಕರವಾಗಿಲ್ಲ. ನಾವಂದುಕೊಂಡಂತೆ ಆಡಳಿತ ಸಾಗುತ್ತಿಲ್ಲ: ಸಿ.ಎಂ.ಇಬ್ರಾಹಿಂ
ಬೆಂಗಳೂರು, ಅಕ್ಟೋಬರ್ 22: ನಾವು ನೋಡಿದ ಸಿದ್ದರಾಮಯ್ಯ ಇವರಲ್ಲ ಬಿಡ್ರೀ. ಯಾವುದೋ ಮಂಕು ಕವಿದಂತೆ ಅಗಿಬಿಟ್ಟಿದ್ದಾರೆ ಅವರು. ಯಾವ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೆವೋ ಅದು ಸಾಧ್ಯವಾಗಿಲ್ಲ. ಈ ವಿಷಯ ಸ್ವತಃ ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ.
ಈ ಮಾತುಗಳಲ್ಲಿ ಗೊತ್ತಾಗುವಂತೆ ರಾಜ್ಯ ರಾಜಕೀಯದಲ್ಲಿ ಒಂದು ಕದಲಿಕೆ ಶುರುವಾದಂತಿದೆ. ಏಕೆಂದರೆ ಈ ಮಾತುಗಳನ್ನು ಆಡಿದವರು ಬರೀ ಕಾಂಗ್ರೆಸ್ ಮುಖಂಡರಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಸಿ.ಎಂ.ಇಬ್ರಾಹಿಂ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೇವೇಗೌಡರ ಆಡಳಿತದ ಹತ್ತಿರಕ್ಕೂ ಸಿದ್ದರಾಮಯ್ಯ ಅವರ ಆಡಳಿತ ಬರೋಕೆ ಸಾಧ್ಯವಿಲ್ಲ ಎಂದಿದ್ದಾರೆ.[ಯೋಜನಾ ಆಯೋಗಕ್ಕೆ ಇಬ್ರಾಹಿಂ, ದಿಲ್ಲಿಗೆ ನಾಡಗೌಡ]
ಮಾಧ್ಯಮದ ಜತೆಗೆ ತಮ್ಮ ಅಸಮಾಧಾನ ತೋಡಿಕೊಂಡಿರುವ ಇಬ್ರಾಹಿಂ, ರಾಜ್ಯ ಸರಕಾರದ ಆಡಳಿತ ವೈಖರಿ ತೃಪ್ತಿಕರವಾಗಿಲ್ಲ. ನಾವಂದುಕೊಂಡಂತೆ ಆಡಳಿತ ಸಾಗುತ್ತಿಲ್ಲ. ಮೂವರು ಮಂತ್ರಿಗಳು ಹಾಗೂ ಕೆಲವು ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳ ಸಭೆಯನ್ನು ಕರೆದಿದ್ದೆ. ಅವರೂ ಸಹ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದರು ಎಂದಿದ್ದಾರೆ.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳದೊಂದು ವರದಿ ಮಾಡಿ, ಸಿದ್ದರಾಮಯ್ಯ ಅವರಿಗೆ ಕೊಡ್ತೀವಿ ಎಂದಿರುವ ಇಬ್ರಾಹಿಂ, ಜೆಡಿಎಸ್ ಗೆ ಹಾರುವ ಮುನ್ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ ಜೆಡಿಎಸ್ ನ ಆಯಕಟ್ಟಿನ ಸ್ಥಾನ ಇಬ್ರಾಹಿಂ ಅವರಿಗೆ ನೀಡಲು ಚಿಂತನೆ ನಡೆದಿದೆ. ಇತ್ತೀಚೆಗಿನ ಪಕ್ಷದಲ್ಲಿನ ಬೆಳವಣಿಗೆಗಳಿಂದ ಆದ ಹಾನಿಯನ್ನು ತಡೆಯಲು ಹಾಗೂ ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂಬುದು ಸದ್ಯದ ಮಾಹಿತಿ.[ಸಿಎಂ ಇಬ್ರಾಹಿಂ ಅವರೇ ಮೊದಲ ರಾತ್ರಿ ಯಾವಾಗ?]
ಇದೇ ವೇಳೆ ಇಬ್ರಾಹಿಂ ಅವರ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತೃಪ್ತಿ ಇದ್ದರೆ ಏನು ಮಾಡೋದಿಕ್ಕಾಗುತ್ತೆ? ಇಂಥವರನ್ನೆಲ್ಲ ಸಮಾಧಾನ ಮಾಡೋಕೆ ಆಗಲ್ಲ ಎಂದು ಖಾರವಾಗಿ ಹೇಳಿದ್ದಾರೆ.