ಕರ್ನಾಟಕದಲ್ಲಿ ಮೇ.03ರ ಬಳಿಕ ಮದ್ಯ ಮಾರಾಟದ ಬಗ್ಗೆ ತೀರ್ಮಾನ
ಬೆಂಗಳೂರು, ಏಪ್ರಿಲ್.30: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಪ್ರಮಾಣವು ರಾಜ್ಯದಲ್ಲಿ ಕೊಂಚ ಹತೋಟಿಗೆ ಬಂದಿದೆ. ಮೇ.03ರ ನಂತರ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಹಾಗೂ ಯಾವುದಕ್ಕೆಲ್ಲ ಸಡಿಲಿಕೆ ಮಾಡುವುದು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಕೊರೊನಾ ಸೋಂಕು ನಿಯಂತ್ರಣದ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆ ಮತ್ತು ಸೂಚನೆ ಬಳಿಕ ಕರ್ನಾಟಕದಲ್ಲಿ ಮೇ.03ರ ನಂತರ ಮದ್ಯಮಾರಾಟಕ್ಕೆ ಅನುಮತಿ ನೀಡಬೇಕೇ ಬೇಡವೇ ಎನ್ನುವುದನ್ನು ತೀರ್ಮಾನಿಸಲಾಗುತ್ತದೆ ಎಂದು ಬಿಎಸ್ ವೈ ಹೇಳಿದರು.
ಗೃಹಕಚೇರಿ ಕೃಷ್ಣಾದಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸಭೆ:
ಮೇ.04ರಿಂದ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಗೃಹಕಚೇರಿ ಕೃಷ್ಣಾದಲ್ಲಿ ಕೈಗಾರಿಕೋದ್ಯಮಿಗಳ ಜೊತೆಗೆ ಗುರುವಾರ ಸಂಜೆ ಮಹತ್ವದ ಸಭೆಯನ್ನು ನಡೆಸಲಾಗುತ್ತದೆ. ಅನಂತರ ಕೆಂಪು ವಲಯಗಳನ್ನು ಹಾಗೂ ಕಂಟೋನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿದಂತೆ ಬೇರೆ ವಲಯಗಳಲ್ಲಿ ಕೈಗಾರಿಕೆಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಇನ್ನು, ರಾಜ್ಯದಲ್ಲಿ ಸೂಪರ್ ಮಾರ್ಕೆಟ್, ಮಾಲ್ ಗಳು, ಸಿನಿಮಾ ಥಿಯೇಟರ್ ಹಾಗೂ ಹೋಟೆಲ್ ಗಳನ್ನು ತೆರೆಯುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಸದ್ಯದ ಮಟ್ಟಿಗೆ ಕೆಲವು ಪ್ರದೇಶದ ಹೋಟೆಲ್ ಗಳಲ್ಲಿ ಪಾರ್ಸೆಲ್ ಕಟ್ಟಿ ಕೊಡುವುದಕ್ಕೆ ಅನುಮತಿ ನೀಡಲಾಗಿದೆ. ಆದರೆ, ಸಂಪೂರ್ಣವಾಗಿ ಹೋಟೆಲ್ ಗಳನ್ನು ತೆರೆಯಲು ಸದ್ಯಕ್ಕೆ ಅನುಮತಿ ನೀಡುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದರು.