ಅಮಿತ್ ಶಾ ವಿಶ್ವಾಸಗಳಿಸುವತ್ತ ಯಡಿಯೂರಪ್ಪ ಪುತ್ರ ವಿಜಯೇಂದ್ರ ಶರವೇಗದ ದಾಪುಗಾಲು
ಇತ್ತೀಚಿನ ದಿನಗಳಲ್ಲಿ, ತಂದೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಓಡಾಡಿ, ರಾಜಕೀಯ ಸೂಕ್ಷ್ಮತೆಯನ್ನು ಅರಿಯುತ್ತಿರುವ, ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ವೈ.ವಿಜಯೇಂದ್ರ, ಸಕ್ರಿಯ ರಾಜಕಾರಣದಲ್ಲಿ ಭರವಸೆಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮತ್ತು ಸರಕಾರದ ಆಗುಹೋಗುಗಳಲ್ಲಿ ಬಿಜೆಪಿ ವರಿಷ್ಠರ ಹಿಡಿತ ಬಲವಾಗಿದ್ದರು ಕೂಡಾ, ಉಪಚುನಾವಣೆಯ ಫಲಿತಾಂಶದ ನಂತರ, ಯಡಿಯೂರಪ್ಪ ಕೂಡಾ ಅಷ್ಟೇ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು.
ಈ ಹಿಂದೆ, ಯಡಿಯೂರಪ್ಪನವರ ಸರಕಾರ ಅಧಿಕಾರದಲ್ಲಿದ್ದ ವೇಳೆ, ಸ್ವಪಕ್ಷೀಯರೇ ಅವರ ವಿರುದ್ದ ಕತ್ತಿಮಸೆಯುತ್ತಿದ್ದದ್ದು ಗೊತ್ತಿರುವ ವಿಚಾರ. ಈಗ ಅದನ್ನೆಲ್ಲಾ ಒಂದು ಹಂತಕ್ಕೆ ನಿಯಂತ್ರಣ ತರುವಲ್ಲಿ ಬಿಎಸ್ವೈ ಯಶಸ್ವಿಯಾಗುತ್ತಿದ್ದಾರೆ. ಇಂತಹ ವೇಳೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ, ತಂದೆಗೆ ಫುಲ್ ಸಾಥ್ ನೀಡುತ್ತಿದ್ದಾರೆ.
ಬಿಎಸ್ವೈ ಸರಕಾರ ಅಧಿಕಾರಕ್ಕೆ ಬರಲು ಎಚ್ಡಿಕೆ ಕಾರಣ: ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಲ್ಲಿ ವಿಫಲರಾಗಿದ್ದರೂ, ವಿಜಯೇಂದ್ರ ಇದಕ್ಕೆಲ್ಲಾ ಧೃತಿಗೆಡದೇ, ಅವರು ತೋರಿದ ಬದ್ದತೆ, ಇಂದು ಅಮಿತ್ ಶಾ, ಅವರ ವಿಶ್ವಾಸಗಳಿಸುವಲ್ಲಿ ಯಶಸ್ವಿ ದಾರಿಯತ್ತ ಸಾಗುತ್ತಿದೆ.
ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರಿಗೆ ಪ್ರತಿಸ್ಪರ್ಧಿ ಜಿ.ಟಿ.ದೇವೇಗೌಡ
ಕಳೆದ ಅಂದರೆ 2018ರ ಅಸೆಂಬ್ಲಿ ಚುನಾವಣೆಯ ಸುತ್ತಮುತ್ತ ನಡೆದ ಘಟನೆಯನ್ನು ನೆನಪಿಸಿಕೊಳ್ಳುವುದಾದರೆ, ಸಿದ್ದರಾಮಯ್ಯ ಮತ್ತು ಅವರ ಪುತ್ರನನ್ನು ಹೇಗಾದರೂ ಮಾಡಿ, ಸೋಲಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪಣತೊಟ್ಟಿತ್ತು. ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಜಿ.ಟಿ.ದೇವೇಗೌಡ ಅವರನ್ನು ಕಣಕ್ಕಿಳಿಸಿತ್ತು. ಅವರ ಪುತ್ರ ಡಾ.ಯತೀಂದ್ರ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಲ್ಲಿ ಇನ್ನೇನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ದೆಹಲಿಯಿಂದ ಬಂದ ಕರೆಯಿಂದಾಗಿ, ಬಿಎಸ್ವೈಗೆ ಹಿನ್ನಡೆಯಾಗಿತ್ತು.
ಏನೂ ಭಯ ಪಡದೇ ಸಂಪುಟ ವಿಸ್ತರಣೆ ಮಾಡಿ: ಸಿಎಂ ಬಿಎಸ್ವೈಗೆ ಜೆಡಿಎಸ್ ಅಭಯ
ವಿಜಯೇಂದ್ರ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು
ಆದರೆ, ಈ ಅವಮಾನವನ್ನು ಲೆಕ್ಕಿಸದೇ ಬಿಎಸ್ವೈ ಪುತ್ರ ವಿಜಯೇಂದ್ರ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು. ಇನ್ನು, ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡುವ ವಿಚಾರದಲ್ಲೂ, ವಿಜಯೇಂದ್ರ ತೆರೆಮೆರೆಯ ಪಾತ್ರ ಮಹತ್ವದ್ದು ಎಂದೇ ವ್ಯಾಖ್ಯಾನಿಸಲಾಗಿತ್ತು. ಇದಾದ ನಂತರ, ಪಕ್ಷ ಇವರನ್ನು ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತು.
ಸಮುದಾಯದ ಕಾರ್ಯಕ್ರಮಗಳಲ್ಲಿ ತಂದೆಯ ಜೊತೆ, ಪರವಾಗಿ ಕಾಣಿಸಿಕೊಂಡರು
ಇನ್ನು, ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ನಂತರ, ಪ್ರಮುಖವಾಗಿ ಲಿಂಗಾಯತ ಸಮುದಾಯದ ಕಾರ್ಯಕ್ರಮಗಳಲ್ಲಿ ತಂದೆಯ ಜೊತೆ ಅಥವಾ ಬಿಎಸೈ ಪರವಾಗಿ ಕಾಣಿಸಿಕೊಂಡರು. ಹೀಗೆ, ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಾ ಸಾಗುತ್ತಿದ್ದ ವೇಳೆ, ಉಪಚುನಾವಣೆ ಎದುರಾಯಿತು. ಅವರಿಗೆ, ಬಿಜೆಪಿಯ ಬೇರೇ ಇಲ್ಲದ, ಕೆ.ಆರ್.ಪೇಟೆಯ ಉಸ್ತುವಾರಿಯನ್ನಾಗಿ ಮಾಡಲಾಯಿತು.
ಬಿಜೆಪಿಗೆ ವೋಟ್ ಬ್ಯಾಂಕೇ ಇಲ್ಲದ ಕೆ.ಆರ್.ಪೇಟೆ
ಬಿಜೆಪಿಗೆ ವೋಟ್ ಬ್ಯಾಂಕೇ ಇಲ್ಲದ ಕೆ.ಆರ್.ಪೇಟೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದು, ಪಕ್ಷದ ಅಭ್ಯರ್ಥಿ ನಾರಾಯಣ ಗೌಡ್ರು ಜಯಶೀಲರಾದರು. ಅಲ್ಲಿಗೆ, ವಿಜಯೇಂದ್ರ ಅವರ ರಾಜಕೀಯ ತಂತ್ರಗಾರಿಕೆ, ದೆಹಲಿ ಅಂಗಣಕ್ಕೆ ಹೋಯಿತು. ಕೂಡಲೇ ವಿಜಯೇಂದ್ರಗೆ ಅಮಿತ್ ಶಾ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದರು. ದೆಹಲಿಗೆ ಬಂದು ಕಾಣುವಂತೆ ಸೂಚನೆ ಬಂತು.
ದಿನದಿಂದ ದಿನಕ್ಕೆ ಬಲಾಢ್ಯಗೊಳ್ಳುತ್ತಿರುವ ಸಿಎಂ ಪುತ್ರ ವಿಜಯೇಂದ್ರ, ಅಮಿತ್ ಶಾ ವಿಶ್ವಾಸಗಳಿಸುವತ್ತ
ಈ ಎಲ್ಲಾ ವಿದ್ಯಮಾನಗಳ ನಂತರ ವಿಜಯೇಂದ್ರ, ರಾಜ್ಯ ರಾಜಕೀಯದಲ್ಲಿ ತಮ್ಮ ವರ್ಚಸ್ಸು/ಪ್ರಭಾವವನ್ನು ವೃದ್ದಿಸಿಕೊಳ್ಳುತ್ತಲೇ ಇದ್ದಾರೆ. ಎಷ್ಟರ ಮಟ್ಟಿಗೆ ಅಂದರೆ, ನೂತನ ಶಾಸಕರು, ಸಚಿವ ಸ್ಥಾನಕ್ಕಾಗಿ ವಿಜಯೇಂದ್ರ ಅವರಿಗೂ ಒತ್ತಡ ಹೇರುತ್ತಿದ್ದಾರೆ. ಮೊನ್ನೆ, ಬಿಎಸ್ವೈ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಸಂಪುಟ ವಿಸ್ತರಣೆಯ ಚರ್ಚೆಯ ವೇಳೆ ಭೇಟಿಯಾದಾಗ, ವಿಜಯೇಂದ್ರ ಕೂಡಾ ಹಾಜರಿದ್ದದ್ದು, ಅಮಿತ್ ಶಾ ಮತ್ತು ಪ್ರಧಾನಿ ಮೋದಿಯ ವಿಶ್ವಾಸಗಳಿಸುವಲ್ಲಿ ದಿನದಿಂದ ದಿನಕ್ಕೆ ಇವರು ಯಶಸ್ವಿಯಾಗುತ್ತಿದ್ದಾರೆಂದೇ ಹೇಳಲಾಗುತ್ತಿದೆ.