ಸಂಪುಟ ಸಂಕಷ್ಟ: ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪ
Recommended Video
ಬೆಂಗಳೂರು, ಜ. 30: ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ತಮ್ಮ ಡಾಲರ್ಸ್ ಕಾಲನಿಯ ನಿವಾಸದಿಂದ ಬೆಳಗ್ಗೆ 11.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತೆರಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಡಾಲರ್ಸ್ ಕಾಲನಿ ನಿವಾಸದಲ್ಲಿ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆಯೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಕೊಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಯಾವಕಾಶ ಕೊಟ್ಟಿದ್ದಾರೆ.
ದೆಹಲಿಗೆ ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳು
ನಂತರ ರಾತ್ರಿ 10 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭೇಟಿ ನಿಗದಿಯಾಗಿದೆ. ಇಬ್ಬರನ್ನೂ ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಅವರನ್ನು ಭೇಟಿ ಮಾಡಿ ನಾಳೆ ವಾಪಾಸ್ ಬರುತ್ತೇನೆ. ಶೇಕಡಾ 99ರಷ್ಟು ನಾಳೆಯೆ ಸಂಪುಟ ವಿಸ್ತರಣೆ ಕ್ಲೀಯರ್ ಆಗಲಿದೆ. ಸಾಧ್ಯವಾದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿ ಬರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕಾಯ್ದು ಕುಳಿತಿದ್ದ ಅನರ್ಹ ಶಾಸಕ ಮುನಿರತ್ನ, ಸಿಎಂ ಹಿಂದೆ ತೆರಳಿದ ನಿರಾಣಿ: ಹುತಾತ್ಮರ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ಮಾಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ಡಾಲರ್ಸ್ ಕಾಲನಿ ನಿವಾಸದಿಂದ ತೆರಳಿದ್ದರು.
ಆ ಸಮಯದಲ್ಲಿ ಡಾಲರ್ಸ್ ಕಾಲನಿ ನಿವಾಸಕ್ಕೆ ಆಗಮಿಸಿದ್ದ ಅನರ್ಹ ಶಾಸಕ ಮುನಿರತ್ನ ಸಿಎಂ ಬರುವವರೆಗೂ ಕಾಯ್ದು ಕುಳಿತಿದ್ದರು. ನಂತರ ಸಿಎಂ ಭೇಟಿ ಮಾಡಿದರು. ಅದೇ ಸಂದರ್ಭದಲ್ಲಿ ಡಾಲರ್ಸ್ ಕಾಲನಿ ನಿವಾಸಕ್ಕೆ ಆಗಮಿಸಿದ ಸಚಿವ ಸ್ಥಾನದ ಆಕಾಂಕ್ಷಿ, ಮಾಜಿ ಶಾಸಕ ಮುರುಗೇಶ್ ನಿರಾಣಿ ಸಿಎಂ ಭೇಟಿ ಮಾಡಿ ಅವರ ಹಿಂದೆಯೆ ತೆರಳಿದವರು.