ಕಿರಿಯ ವಯಸ್ಸಿನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೇರಿದ ಸಂತೋಷ್ ಪರಿಚಯ ಇಲ್ಲಿದೆ!
ಬೆಂಗಳೂರು, ಮೇ 30: ಬಿಜೆಪಿಯ ದಿಢೀರ್ ನಿರ್ಧಾರಗಳೆ ಹಾಗಿರುತ್ತವೆ. ಆ ಪಕ್ಷದ ರಾಜಕೀಯ ಲೆಕ್ಕಾಚಾರಗಳು ಒಂದೊಂದು ಸಲ ರಾಜಕೀಯ ಮುತ್ಸದ್ದಿಗಳಿಗೆ ಅರ್ಥವಾಗುವುದಿಲ್ಲ. ಅದು ಈಗಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಜರಾತ್ ಸಿಎಂ ಮಾಡುವಾಗ ಆಗಿರಬಹುದು. ನಂತರ ನರೇಂದ್ರ ಮೋದಿ ಅವರನ್ನು ರಾಷ್ಟ್ರೀಯ ರಾಜಕಾರಣಕ್ಕೆ ತಂದ ರೀತಿ ಇರಬಹುದು. ಅಥವಾ ಇತ್ತೀಚೆಗೆ ರಾಮ್ ನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಎಂದು ಘೋಷಣೆ ಮಾಡಿ, ಅವರನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿದ ನಿರ್ಧಾರವೂ ಆಗಿರಬಹುದು. ಎಲ್ಲವೂ ಮೇಲ್ನೋಟಕ್ಕೆ ದಿಢೀರ್ ನಿರ್ಧಾರಗಳಂತೆ ಕಂಡರೂ ಪೂರ್ವ ನಿರ್ಧಾರಿತವಾಗಿದ್ದವು.
Recommended Video
ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕವಾಗಿದ್ದಾರೆ. ಈಗಾಗಲೇ 3 ಜನರು ಸಿಎಂ ಅವರಿಗೆ ರಾಜಕೀಯ ಕಾರ್ಯದರ್ಶಿಗಲಿದ್ದಾರೆ. ಆ ಘಟಾನುಘಟಿ ರಾಜಕೀಯ ನಾಯಕರೊಂದಿಗೆ ಕಿರಿಯ ವಯಸ್ಸಿನಲ್ಲಿಯೆ ಮಖ್ಯಮಂತ್ರಿಗಳಿಗೆ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕವಾಗಿದ್ದಾರೆ.
ಸಂಪುಟ ದರ್ಜೆ ಸ್ಥಾನಮಾನ
ಕಳೆದ ಸುಮಾರು ಏಳೆಂಟು ವರ್ಷಗಳಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕನಾಗಿ ಎನ್.ಆರ್. ಸಂತೋಷ್ ಕೆಲಸ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂತೋಷ್ ಸಂಬಂಧಿಯೂ ಹೌದು. ಯಡಿಯೂರಪ್ಪ ಅವರ ತಂಗಿಯ ಮೊಮ್ಮಗ ಸಂತೋಷ್ ಎಂಬ ಮಾಹಿತಿಯಿದೆ.
BREAKING: ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ನೇಮಕ!
ಸಾಮಾನ್ಯವಾಗಿ ನಾಲ್ಕೈದು ಬಾರಿ ಶಾಸಕರಾದವರನ್ನು, ರಾಜಕೀಯ ಅನುಭವ ಹೊಂದಿದವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡುವುದು ವಾಡಿಕೆಯಾಗಿತ್ತು. ಆದರೆ ಅದನ್ನು ಮೀರಿ ಸಂತೋಷ್ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಏರಿದ್ದಾರೆ. ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಕೆಲಸ ಮಾಡಲಿದ್ದಾರೆ.
ಮಹತ್ವದ ಪಾತ್ರ
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿನ ಅತೃಪ್ತ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಎನ್.ಆರ್. ಸಂತೋಷ್ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಕರೆತರುವಲ್ಲಿ ಸಂತೋಷ್ ಕೆಲಸ ಮಾಡಿದ್ದರು. ಜೊತೆಗೆ ಹೈಕಮಾಂಡ್, ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕರ ಮಧ್ಯೆ ಕೊಂಡಿಯಂತೆ ಕೆಲಸ ಮಾಡಿದ್ದರು. ಆಗ ಸಹಜವಾಗಿಯೆ ಬಿಜೆಪಿ ಹೈಕಮಾಂಡ್ ಗಮನ ಸೆಳೆದಿದ್ದರು.
ಜೆಡಿಎಸ್ ಹಾಗೂ ಕಾಂಗ್ರೆಸ್ನ 16 ಅತೃಪ್ತ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ಸಂದರ್ಭದಲ್ಲಿ ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೂ ಸಂತೋಷ್ ಎದುರು ಹಾಕಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ, ಆಗ ಅತೃಪ್ತ ಶಾಸಕರಾಗಿದ್ದವರನ್ನು ಮುಂಬೈ ಹೊಟೆಲ್ನಲ್ಲಿ ಇರಿಸಲಾಗಿತ್ತು. ಆಗ ಆ ಎಲ್ಲ ಶಾಸಕರನ್ನು ಹಿಡಿದಿಟ್ಟುಕೊಂಡು ಗೊಂದಲವಾಗದಂತೆ ರಾಜೀನಾಮೆ ಕೊಡಿಸುವಲ್ಲಿ ಸಂತೋಷ್ ಮಹತ್ವದ ಪಾತ್ರ ವಹಿಸಿ ರಾಜಕೀಯ ಜಾಣ್ಮೆ ಮೆರೆದಿದ್ದರು.
ಕೆಜೆಪಿಯಿಂದಲೂ ಬಿಎಸ್ವೈ ಜೊತೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯಿಂದ ಹೊರಬಿದ್ದು ಕೆಜೆಪಿ ಕಟ್ಟಿದ್ದರು. ಚುನಾವಣೆಯಲ್ಲಿ ಕೆಜೆಪಿ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ರಾಜ್ಯಾದ್ಯಂತ ಯಡಿಯೂರಪ್ಪ ಅವರೂ ಸೇರಿದಂತೆ ಕೇವಲ 6 ಶಾಸಕರು ಕೆಜೆಪಿಯಿಂದ ಗೆದ್ದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ನೂತನ ರಾಜಕೀಯ ಕಾರ್ಯದರ್ಶಿ ಸಂತೋಷ್ ಯಾರು?
ಆ ಸಂದರ್ಭದಲ್ಲಿ ಅಕ್ಷರಶಃ ಏಕಾಂಗಿಯಾಗಿದ್ದ ಯಡಿಯೂರಪ್ಪ ಅವರ ಆಪ್ತಕಾರ್ಯದರ್ಶಿ ಕೆಲಸ ಆರಂಭಿಸಿದ್ದರು ಸಂತೋಷ್. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಸೇರಿದ್ದ ಮಲ್ಲೇಶ್ವರದ ಕಟ್ಟಡವೊಂದನ್ನು ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಕಚೇರಿ ಮಾಡಿಕೊಂಡಿದ್ದರು. ಅಲ್ಲಿಂದ ಸಂತೋಷ್ ಅವರಿಗೆ ರಾಜಕೀಯ ಒಡನಾಟ ಶುರುವಾಗಿತ್ತು.
ಈಶ್ವರಪ್ಪ ಪಿಎ ಜೊತೆಗೆ
ನಂತರದ ದಿನಗಳಲ್ಲಿ ಉಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಂತೋಷ್ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಕೊಲೆ ಯತ್ನ ಪ್ರಕರಣ. ಸಂತೋಷ್ ಕೊಲೆ ಯತ್ನವನ್ನು ಮಾಡಿಸಿದ್ದಾರೆಂದು ವಿನಯ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ನಂತರದ ದಿನಗಳಲ್ಲಿ ಹಲವು ಆರೋಪ-ಪ್ರತ್ಯಾರೋಪಗಳು ಆಗಿದ್ದವು. ಈಗಲೂ ಕೂಡ ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ವಯಸ್ಸು, ಊರು, ಶಿಕ್ಷಣ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಬಂಧಿಯೆ ಆಗಿದ್ದರೂ ಕೆಲಸಕ್ಕೆ ಸೇರಿದ್ದು ಬಿಎಸ್ವೈ ಅವರಿಗೆ ಆಪ್ತ ಸಹಾಯಕನಾಗಿ. ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಕೆಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಹಾಯಕನಾಗಿ ಸೇರಿಕೊಂಡಾಗ ಸಂತೋಷ್ ಅವರಿಗೆ 22 ವರ್ಷ ವಯಸ್ಸು. ಈಗ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿರುವ ಅವರಿಗೆ 32 ವರ್ಷ ವಯಸ್ಸು.
ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯ ಎನ್.ಆರ್. ಸಂತೋಷ್ ಅವರದ್ದು ಕೃಷಿಕ ಕುಟುಂಬ. ಬೆಂಗಳೂರು ಹೊರವಲಯದ ಚನ್ನೇನಹಳ್ಳಿಯಲ್ಲಿ ಪದವಿವರೆಗೆ ಶಿಕ್ಷಣ ಪಡೆದಿದ್ದಾರೆ. 2006 ರಿಂದ 2012ರ ವರೆಗೆ ಎಪಿವಿಪಿ ಸಕ್ರೀಯ ಕಾರ್ಯಕರ್ತ. ನಂತರ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಆರಂಭಿಸಿದ್ದರು.