ಕೊರೊನಾದಿಂದ ರಾಜ್ಯದಲ್ಲಿ ಮೊದಲ ಸಾವು: ತಲೆ ತಗ್ಗಿಸುವ ಸಂಗತಿ ಎಂದ ಬಿ.ಎಸ್.ವೈ
ಕರ್ನಾಟಕ, ಮಾರ್ಚ್ 13: ''ಕೊರೋನಾ ಸೋಂಕಿನಿಂದ ಮೊದಲ ಸಾವು ನಮ್ಮ ರಾಜ್ಯದಲ್ಲಿ ಆಗಿರೋದು ನಮಗೆಲ್ಲ ಆತಂಕ ತಂದಿದೆ. ಕೊರೊನಾ ಸೋಂಕಿನಿಂದ ಇಡೀ ದೇಶದಲ್ಲಿ ಮೊದಲ ಸಾವು ನಮ್ಮ ರಾಜ್ಯದಲ್ಲಿ ಆಗಿದೆ ಎಂಬುದು ತಲೆ ತಗ್ಗಿಸುವ ಸಂಗತಿ'' ಎಂದಿದ್ದಾರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಕೊರೊನಾ ವೈರಸ್ ಸೋಂಕಿನ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದರು. ''ಕೊರೊನಾ ಸೋಂಕಿನಿಂದ ಕಲಬುರಗಿಯಲ್ಲಿ ಮೃತಪಟ್ಟ 74 ವರ್ಷ ಕಾಸಿಂ ಮೊಹಮ್ಮದ್ ಸಿದ್ದಿಕಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ವೈದ್ಯಕೀಯ ತಪಾಸಣೆ ಮಾಡಿಲ್ಲ. ಇದು ಸರ್ಕಾರದ ವೈಫಲ್ಯ. ಕಲಬುರಗಿಯಲ್ಲಿ ಕೊರೊನಾ ಟೆಸ್ಟ್ ಸೆಂಟರ್ ಇಲ್ಲ'' ಎಂದು ಪ್ರಿಯಾಂಕ್ ಖರ್ಗೆ ಮತ್ತು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿಗರಿಗೆ ಆಘಾತಕಾರಿ ಸುದ್ದಿ: ಗೂಗಲ್ RMZ ಕಂಪನಿಯಲ್ಲಿ ಕೊರೊನಾ!
ಆಗ, ''ಕಾಸಿಂ ಮೊಹಮ್ಮದ್ ಸಿದ್ದಿಕಿ ಮೃತಪಡುವವರೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರಲಿಲ್ಲ. ಮೊನ್ನೆ ಮೃತಪಟ್ಟವರು ಪ್ರಯಾಣಿಸಿದ ವಿಮಾನದ ಸಹಪ್ರಯಾಣಿಕರನ್ನು ಹುಡುಕಿ ತಪಾಸಣೆ ಮಾಡಲಾಗುತ್ತಿದೆ. ಅವರ ಬಂಧುಗಳನ್ನೂ ಸಹ ತಪಾಸಣೆಗೆ ಒಳಪಡಿಸುತ್ತೇವೆ'' ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಲಾಪದಲ್ಲಿ ಉತ್ತರಿಸಿದ್ದಾರೆ.
ಆತಂಕ ತಂದಿದೆ
''ಕೊರೊನಾ ಸೋಂಕಿನಿಂದ ಮೊದಲ ಸಾವು ನಮ್ಮ ರಾಜ್ಯದಲ್ಲಿ ಆಗಿರುವುದು ನಮಗೆಲ್ಲ ಆತಂಕ ತಂದಿದೆ. ಅವರು ಮೃತಪಡುವವರೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರಲಿಲ್ಲ. ಮೊನ್ನೆ ಮೃತಪಟ್ಟವರು ಪ್ರಯಾಣಿಸಿದ ವಿಮಾನದ ಸಹ ಪ್ರಯಾಣಿಕರನ್ನು ಹುಡುಕಿ ತಪಾಸಣೆ ಮಾಡಲಾಗುತ್ತಿದೆ. ಅವರ ಬಂಧುಗಳನ್ನೂ ಸಹ ತಪಾಸಣೆಗೆ ಒಳಪಡಿಸುತ್ತೇವೆ'' - ಎಂದು ಸಿ.ಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಐದು ಪ್ರಕರಣಗಳಲ್ಲಿ ಒಂದು ಸಾವು
''ಕೊರೊನಾ ಸೋಂಕಿನ ಐದು ಪ್ರಕರಣಗಳಲ್ಲಿ ಒಂದು ಸಾವಾಗಿದೆ. ಮೂವರು ಹೊರದೇಶದಿಂದ ಬಂದವರು. ಇನ್ನೊಂದು ಕೇಸ್ ನಲ್ಲಿ ವಿದೇಶದಿಂದ ಬಂದಿರುವ ಟೆಕ್ಕಿ, ಅವರ ಪತ್ನಿ ಮತ್ತು ಮಗುವಿಗೆ ಸೋಂಕು ತಗುಲಿರುವುದು ದೃಡಪಟ್ಟಿದೆ'' - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.
ಶಾಕಿಂಗ್; ಕೊರೊನಾ ವೈರಸ್ ಗೆ ಭಾರತದಲ್ಲಿ ಮೊದಲ ಬಲಿ!
ಜನರ ಆರೋಗ್ಯ ಮುಖ್ಯ
''ಕಲಬುರಗಿ ನಡೆಯುವ ಜಾತ್ರೆ ಕೂಡ ಬಂದ್ ಆಗಲಿದೆ. ಯಾವುದೇ ಜಾತ್ರೆ ನಡೆಯಲು ಬಿಡುವುದಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರಯೋಗಾಲಯ ಪ್ರಾರಂಭಿಸುತ್ತೇವೆ. ನಮಗೆ ಜನರ ಆರೋಗ್ಯ ಮುಖ್ಯ. ರೋಗ ಹರಡದಂತೆ ತಡೆಯುವುದು ಮುಖ್ಯ. ಕೇಂದ್ರದ ಆರೋಗ್ಯ ಸಚಿವರ ಜತೆಯೂ ಸಂಪರ್ಕದಲ್ಲಿದ್ದೇನೆ. ಪ್ರತಿಪಕ್ಷ ನಾಯಕರು ಹಾಗೂ ಎಲ್ಲರ ಸಲಹೆ ಕಾರ್ಯಗತ ಮಾಡ್ತೇವೆ'' ಎಂದಿದ್ದಾರೆ ಬಿ.ಎಸ್.ಯಡಿಯೂರಪ್ಪ.
ತಲೆತಗ್ಗಿಸುವ ಸಂಗತಿ
''ಇಡೀ ದೇಶದಲ್ಲಿ ಮೊದಲ ಸಾವು ನಮ್ಮ ರಾಜ್ಯದಲ್ಲಿ ಆಗಿದೆ ಎಂಬುದು ತಲೆ ತಗ್ಗಿಸುವ ಸಂಗತಿ. ಈ ಬಗ್ಗೆ ನಮಗೆ ಸಮಾಧಾನ ಇಲ್ಲ. ಗುಲಬರ್ಗಾದಲ್ಲಿನ ಜಾತ್ರೆ ರದ್ದು ಮಾಡಿದ್ದೇವೆ. ಸುಧಾ ಮೂರ್ತಿಯವರೂ ಸಹ ಯು.ಎನ್.ಓದ ಕ್ರಮಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ. ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ'' - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ