ನೂರು ಪ್ರಕರಣ ದಾಖಲಿಸಿದರೂ ಗೆದ್ದು ಬರುತ್ತೇನೆ: ಯಡಿಯೂರಪ್ಪ ಸವಾಲು
ಬೆಂಗಳೂರು, ಫೆಬ್ರವರಿ 6: 'ಸುಳ್ಳು ಪ್ರಕರಣಗಳನ್ನು ದಾಖಲು ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಇದಕ್ಕೆಲ್ಲ ಬೆದರುವುದಿಲ್ಲ.ನೂರು ಪ್ರಕರಣ ದಾಖಲಿಸಿದರೂ ಗೆದ್ದು ಬರುತ್ತೇನೆ' ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ವಿರೋಧಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ ಅವರು, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಬಳಿಕ ಹಾದಿಬೀದಿಯಲ್ಲಿ ಹೋಗುವವರೆಲ್ಲ ದಾಖಲೆಗಳನ್ನು ಪಡೆದುಕೊಂಡು ಸುಳ್ಳು ಪ್ರಕರಣಗಳನ್ನು ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ನನ್ನ ವಿರುದ್ಧ ನೂರು ಪ್ರಕರಣ ದಾಖಲಿಸಲಿ. ಅವುಗಳನ್ನೆಲ್ಲ ಧೈರ್ಯದಿಂದ ಎದುರಿಸಿ ಗೆಲ್ಲುತ್ತೇನೆ ಎಂದಿದ್ದಾರೆ.
'ಎಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರದ ನಾಯಕರು ಮತ್ತು ಜನರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೂ ಮುಖ್ಯಮಂತ್ರಿಯಾಗಿರುತ್ತೇನೆ. ನನ್ನ ವಿರುದ್ಧದ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ತಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ.
ನಿಮ್ಮ ಪಕ್ಷದವರು ಜಾಮೀನಿನ ಮೇಲೆ ಇಲ್ಲವೇ?
ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಜಾಮೀನು ಪಡೆದಿದ್ದಾರೆ. ಈ ಪ್ರಕರಣ ಎದುರಿಸುತ್ತಿರುವ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಯಡಿಯೂರಪ್ಪ, ನಿಮ್ಮ ಪಕ್ಷದ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿಲ್ಲವೇ? ನಿಮ್ಮ ಪಕ್ಷದ ಅನೇಕ ರಾಷ್ಟ್ರೀಯ ನಾಯಕರು ಜಾಮೀನು ಪಡೆದುಕೊಂಡಿರುವುದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗೆ ಬೆಳಗಿನ ಜಾವದ ಕನಸು
'ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಸಿದ್ದರಾಮಯ್ಯ ದಿನವೂ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಅವರಿಗೆ ನಿತ್ಯ ಬೆಳಗಿನ ಜಾವ ಕನಸು ಬೀಳುತ್ತದೆ' ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. 'ನಿಮ್ಮನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ. ನಿಮ್ಮ ಧೋರಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ ಎಂಬ ಸಲಹೆ ನೀಡುತ್ತೇನೆ' ಎಂದಿದ್ದಾರೆ.
ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ
ಯಡಿಯೂರಪ್ಪ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಿಮ್ಮ ಪಕ್ಷದವರ ಮಾಹಿತಿ ಆಧಾರದಲ್ಲಿಯೇ ಹೇಳಿರುವುದು. ಯುಗಾದಿ ಬಳಿಕ ಸಿಎಂ ಬದಲಾಗುತ್ತಾರೆ ಎಂದು ನಿಮ್ಮವರೇ ಹೇಳುತ್ತಿದ್ದಾರಲ್ಲ. ಸಂಪುಟ ವಿಸ್ತರಣೆ ನಂತರ ನಿಮ್ಮ ಪಕ್ಷದವರೇ ಏನೆಲ್ಲ ಹೇಳಿಕೆ ನೀಡಿದ್ದರು ಎಂದು ನೆನಪಿದೆಯಲ್ಲವೇ? ನಾಲ್ಕೇ ದಿನದಲ್ಲಿ ಐದು ಬಾರಿ ಖಾತೆ ಬದಲಾವಣೆ ಮಾಡಿದ್ದು ಏಕೆ? ಸದೃಢ ಮುಖ್ಯಮಂತ್ರಿ ಹೀಗೆ ಮಾಡುತ್ತಾರಾ? ಎಂದು ಲೇವಡಿ ಮಾಡಿದ್ದಾರೆ.
Recommended Video
ಕಾಂಗ್ರೆಸ್ಗೆ ಶಾಶ್ವತ ವಿರೋಧಪಕ್ಷದ ಸ್ಥಾನ
ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 25 ಸ್ಥಾನಗಳನ್ನು ಗೆದ್ದಿದೆ. ಆದರೆ ಸಿದ್ದರಾಮಯ್ಯ ನಾಯಕತ್ವದ ಕಾಂಗ್ರೆಸ್ಗೆ ಸಿಕ್ಕಿದ್ದು ಒಂದೇ ಸ್ಥಾನ. ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12ರಲ್ಲಿ ಗೆದ್ದಿದ್ದೇವೆ. ಇತ್ತೀಚಿನ ಇನ್ನೂ ಎರಡು ಉಪ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದೇವೆ. ಉಳಿದ ಮೂರು ಕ್ಷೇತ್ರಗಳ ಉಪ ಚುನಾವಣೆ ಮತ್ತು ಲೋಕಸಭೆ ಕ್ಷೇತ್ರದ ಉಪಚುನಾವಣೆಗಳಲ್ಲಿ ಸಹ ಗೆಲ್ಲುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಕಾಂಗ್ರೆಸ್ ಕಾಯಂ ಆಗಿ ವಿರೋಧಪಕ್ಷದ ಸ್ಥಾನದಲ್ಲಿಯೇ ಉಳಿದುಕೊಳ್ಳುವಂತೆ ಮಾಡುತ್ತೇವೆ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ.