ಬಹುಮತ ಸಾಬೀತುಪಡಿಸುವುದು 100% ಖಚಿತ: ಯಡಿಯೂರಪ್ಪ
Recommended Video
ಬೆಂಗಳೂರು, ಜುಲೈ 29: "ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತುಪಡಿಸುವುದು ಶೇ.100 ಖಚಿತ. ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದ ಬಳಿಕ ಮೊದಲು ಧನ ವಿನಿಯೋಗ ವಿಧೇಯಕವನ್ನು ಎತ್ತಿಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಚಾನ್ಸರಿ ಪೆವಿಲಿಯನ್ ಹೊಟೆಲ್ ನಲ್ಲಿ ಭಾನುವಾರ ರಾತ್ರಿ ವೇಳೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ರವಿಕುಮಾರ್,
"ನಾಳೆ ಅಧಿವೇಶನಕ್ಕೆ 105 ಶಾಸಕರು ಬರಲಿದ್ದಾರೆ, ಧನ ವಿನಿಯೋಗ ವಿಧೇಯಕ ಪಾಸ್ ಮಾಡಲು ಸಹಕರಿಸುವಂತೆ ಕಾಂಗ್ರೆಸ್- ಜೆಡಿಎಸ್ ಶಾಸಕರಲ್ಲಿ ಮನವಿ ಮಾಡಿಕೊಳ್ಳಲಾಗುವುದು. ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ನಂತರ ಚರ್ಚೆ ಮಾಡಲಾಗುತ್ತದೆ. ಆಗಸ್ಟ್ 02ರಂದು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ" ಎಂದರು.
ಶಾಸಕರ ಅನರ್ಹತೆ ಬಗ್ಗೆ ಪ್ರತಿಕ್ರಿಯಿಸಿ, "ಸ್ಪೀಕರ್ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ, ಇದು ಸಂವಿಧಾನ ವಿರೋಧಿ ನಡೆಯಾಗಿದ್ದು, ಬಿಜೆಪಿ ಶಾಸಕಾಂಗ ಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ" ಎಂದರು.
ವಿಧಾನಸಭೆಯಿಂದ 17 ಶಾಸಕರು ಅನರ್ಹ, ಮುಂದೇನು?
ಮೂರು ಸಿಎಂಗಳನ್ನು ಕಂಡಿರುವ 15ನೇ ವಿಧಾನಸಭೆ ಮತ್ತೊಮ್ಮೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಸಿದ್ಧವಾಗುತ್ತಿದ್ದು, ಸೋಮವಾರ(ಜುಲೈ 29) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸಮತ ನಿರ್ಣಯ ಮಂಡಿಸಲಿದ್ದಾರೆ. ಬಿಜೆಪಿ ಶಾಸಕರಿಗೆ ವಿಪ್ ನೀಡಲಾಗಿದ್ದು, 105 ಶಾಸಕರನ್ನು ಕರೆ ತರುವ ಜವಾಬ್ದಾರಿಯಲ್ಲಿ 12 ಪ್ರಮುಖ ಮುಖಂಡರಿಗೆ ವಹಿಸಲಾಗಿದೆ.
17 ಶಾಸಕರು ಅನರ್ಹ, ಸದನದ ಬಲಾಬಲ, ಬಿಎಸ್ವೈಗೆ ಶ್ರೀರಕ್ಷೆ!
ಕ್ಷೇತ್ರಗಳಿಗೆ ತೆರಳಿ: "ಅಧಿವೇಶನದ ಬಳಿಕ ಎಲ್ಲರೂ ನಿಮ್ಮ ಕ್ಷೇತ್ರಗಳಿಗೆ ತೆರಳಿ ಜನರ ವಿಶ್ವಾಸ ಗಳಿಸಿ, ಸದನದಲ್ಲಿ ವಿಶ್ವಾಸ ಮತ ಗಳಿಸುವುದರ ಜೊತೆಗೆ ಕ್ಷೇತ್ರದ ಜನತೆ ವಿಶ್ವಾಸ ಮುಖ್ಯ, ಜನರ ಆಶೋತ್ತರಗಳಿಗೆ ಮೊದಲು ಸ್ಪಂದಿಸಿ" ಎಂದು ಬಿಜೆಪಿ ಶಾಸಕರಿಗೆ ಸಭೆಯಲ್ಲಿ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.