ಮೃತರ ಕುಟುಂಬಸ್ಥನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಧೈರ್ಯ ತುಂಬಿದ ಸಿಎಂ ಬೊಮ್ಮಾಯಿ!
ಬೆಂಗಳೂರು, ಅ. 06: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಮನೆ ಕುಸಿತ ದುರಂತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮನೆ ಕುಸಿತದಿಂದ ಸಂಭವಿಸಿರುವ ಅನಾಹುತದಿಂದ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಳಗಾವಿ ತಾಲ್ಲೂಕಿನ ಬಡಲ ಅಂಕಲಗಿಯಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿರುವ ದುರ್ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಗೋಡೆ ಕುಸಿತ: ಇಬ್ಬರು ಮಕ್ಕಳು ಸಹಿತ 7 ಸಾವು
ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದ್ದಾರೆ.
ಮೃತರ ಕುಟುಂಬಸ್ಥನ ಜೊತೆ ಮಾತನಾಡಿದ ಸಿಎಂ!
ದುರಂತದಲ್ಲಿ ಬದುಕುಳಿದ ಕುಟುಂಬದ ಸದಸ್ಯ ಭೀಮಪ್ಪ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ದುರ್ಘಟನೆ ಕುರಿತು ತಿಳಿಯುತ್ತಿದ್ದಂತೆಯೆ ದೂರವಾಣಿ ಮೂಲಕ ಭೀಮಪ್ಪ ಅವರನ್ನು ಸಂಪರ್ಕಿಸಿ ಮಾತನಾಡಿ, "ಅಂತ್ಯಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಪರಿಹಾರದ ಹಣವನ್ನು ತಕ್ಷಣ ತಲುಪಿಸಲಾಗುವುದು, ಸರ್ಕಾರ ನಿಮ್ಮ ಜೊತೆಗಿದೆ. ಯಾವುದೇ ಕಾರಣಕ್ಕೂ ಧೃತಿಗೆಡದಂತೆ ಧೈರ್ಯದಿಂದ ಇರಿ. ನಿಮ್ಮ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ" ಎಂದು ಧೈರ್ಯ ತುಂಬಿದ್ದಾರೆ.
ಗುರುವಾರ ಉಸ್ತುವಾರಿ ಸಚಿವರ ಭೇಟಿ!
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಭಾರಿ ಮಳೆಯಿಂದ ಮನೆ ಕುಸಿದು ಏಳು ಜನ ಮೃತಪಟ್ಟಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಚಿವ ಕಾರಜೋಳ ಸೂಚಿಸಿದ್ದಾರೆ. ಜೊತೆಗೆ ನಾಳೆ ಗುರುವಾರ ಬಡಾಲ ಅಂಕಲಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಿ, ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ. ನಾಳೆ ಗ್ರಾಮಕ್ಕೆ ಭೇಟಿ ನೀಡುವಂತೆ ಸಿಎಂ ಬೊಮ್ಮಾಯಿ ಅವರು ಕಾರಜೋಳರಿಗೆ ಸೂಚಿಸಿದ್ದರು.
ಇಬ್ಬರು ಬಾಲಕಿಯರು ಸೇರಿದಂತೆ 7 ಮಂದಿ ಮೃತ
ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಇಬ್ಬರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ 7 ಜನರು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಪೂಜಾ ಅರ್ಜುನ ಖನಂಗಾವಿ (8) ಮತ್ತು ಕಾಶವ್ವ ವಿಠ್ಠಲ ಕೊಳಪ್ಪನವರ (8) ಎಂಬ ಇಬ್ಬರು ಮಕ್ಕಳು ಇದ್ದಾರೆ.
ಅರ್ಜುನ ಹನುಮಂತ ಖನಂಗಾವಿ (45) ಅವರ ಪತ್ನಿ ಸತ್ಯವ್ವ ಖನಂಗಾವಿ (45), ಪುತ್ರಿ ಲಕ್ಷ್ಮೀ ಖನಂಗಾವಿ (18), ಗಂಗವ್ವ ಭೀಮಪ್ಪ ಖನಂಗಾವಿ (50) ಮತ್ತು ಸವಿತಾ ಭಿಮಪ್ಪ ಖನಂಗಾವಿ (28) ಮೃತಪಟ್ಟವರು. ಐವರು ಸ್ಥಳದಲ್ಲಿ ಮತ್ತು ಇಬ್ಬರು ಆಸ್ಪತ್ರೆ ಸೇರಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವ ವರದಿಯಾಗಿದೆ.
ನಿಜಕ್ಕೂ ವಿಧಿ ಎಷ್ಟು ಕ್ರೂರಿ ಎನಿಸುತ್ತಿದೆ
ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಮೃತ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ. ಘಟನೆ ಬಗ್ಗೆ ಹೆಬ್ಬಾಳ್ಕರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಇವತ್ತು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಕ್ಷೇತ್ರದ ಬಡಾಲ ಅಂಕಲಗಿಯ ಖನಗಾವಿ ಎನ್ನುವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದ್ದರ ಪರಿಣಾಮ ಮನೆಯ ಒಳಗಡೆಯಿದ್ದ 7 ಜನರ ಪೈಕಿ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರನ್ನು ಆಸ್ಪತೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದು ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ, ನಿಜಕ್ಕೂ ವಿಧಿ ಎಷ್ಟು ಕ್ರೂರಿ ಎನಿಸುತ್ತಿದೆ.
ಮೃತರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ, ಅಗಲಿದ ಆತ್ಮಗಳಿಗೆ ಭಗವಂತ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಸದ್ಯ ಘಟನೆಯ ಸ್ಥಳದಲ್ಲಿ ತಹಸಿಲ್ದಾರ, ಜಿಲ್ಲಾಧಿಕಾರಿಗಳು, ಸಿಪಿಆಯ್ ಹಾಗೂ ಮುಂತಾದ ಅಧಿಕಾರಿಗಳು ಹಾಜರಿದ್ದು, ಘಟನೆಯ ಕುರಿತು ಚರ್ಚಿಸಲಾಗುತ್ತಿದೆ ಎಂದಿದ್ದಾರೆ.
Recommended Video