ಕಲ್ಯಾಣ ಕರ್ನಾಟಕ ಭಾಗದ ಜನರ ಆಸೆ ಈಡೇರಿಸಿದ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಸೆ. 18: ಕಲ್ಯಾಣ ಕರ್ನಾಟಕ ಭಾಗದ ಜನರ ಆಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷವಾಗಿ ಈಡೇರಿಸಿದ್ದಾರೆ. ಕಲಬುರಗಿಯಿಂದ ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ನಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಆನ್ಲೈನ್ನಲ್ಲಿ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಲಬುರಗಿಯ ಡಿ.ಎ.ಆರ್. ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿಂದಲೇ ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ನ ವಸತಿ ನಿಲಯ ಸ್ಥಾಪನೆ ಸೇರಿದಂತೆ ಕಲಬುರಗಿ ನಗರದಲ್ಲಿ ನಗರಾಭಿವೃದ್ಧಿ ಯೋಜನೆ ಹಾಗೂ ಕೆ.ಕೆ.ಆರ್.ಡಿ.ಬಿ ಮಂಡಳಿಯ ಅನುದಾನದ ಒಟ್ಟು 96.24 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಬೆಂಗಳೂರಿನ ಹೆಚ್. ಎಸ್. ಆರ್. ಲೇಔಟ್ನಲ್ಲಿ ಬಾಲಕ-ಬಾಲಕಿಯರ ವಸತಿ ನಿಲಯ ಮತ್ತು ಆಡಳಿತ ಕಚೇರಿ ನಿರ್ಮಾಣಕ್ಕಾಗಿ 59 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅಡಿಗಲ್ಲು ಹಾಕಲಾಗಿದ್ದು, ಬೃಹತ್ ವಸತಿ ನಿಲಯ ತಲೆ ಎತ್ತಲಿದೆ. ಇದು ಈ ಭಾಗದ ಯುವಕರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು!
ಕಲಬುರಗಿ ನಗರದ ವಿವಿಧ ಪ್ರದೇಶಗಳಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದ 330.82 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತೆರೆದ ಚರಂಡಿಗೆ ಕೊಳವೆ ಮಾರ್ಗಗಳ ದುರಸ್ತಿ ಮತ್ತು ಒಳಚರಂಡಿ ವ್ಯವಸ್ಥೆಗೆ ಜೋಡಣೆ ಮಾಡುವ ಕಾಮಗಾರಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗಿದೆ. ನಗರಾಭಿವೃದ್ಧಿ ಅನುದಾನದಡಿಯಲ್ಲಿ 135 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲಬುರಗಿ ನಗರದಲ್ಲಿ ಸಿಗ್ನಲ್ಗಳ ಉದ್ಘಾಟನೆ ಹಾಗೂ 1738.28 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಹೀರಾಪೂರ ವೃತ್ತದಿಂದ ಎಸ್.ವಿ.ಪಿ. ವೃತ್ತದವರೆಗೆ, ಅನ್ನಪೂರ್ಣ ಕ್ರಾಸ್ನಿಂದ ಖರ್ಗೆ ಪೆಟ್ರೋಲ್ ಬಂಕ್ವರೆಗೂ ಹಾಗೂ ಜಗತ್ ವೃತ್ತದಿಂದ ಎಸ್.ವಿ.ಪಿ. ವೃತ್ತದವರೆಗೆ ಬಸ್ ರಾಪಿಡ್ ಟ್ರಾನ್ಸಿಟ್ ಜೊತೆಗೆ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಶಂಕು ಸ್ಥಾಪನೆ ನೆರವೇರಿಸಿದರು.
ಸೈಕಲ್ ಟ್ರ್ಯಾಕ್ ನಿರ್ಮಾಣ
2020-21ನೇ ಸಾಲಿನ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ 683 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲಬುರಗಿ ನಗರದ ಮೋಹನ್ ಲಾಜ್ನಿಂದ ರಾಮ ಮಂದಿರವರೆಗೆ ರಸ್ತೆ ವಿಭಜಕ, ಫುಟ್ ಪಾತ್ ನಿರ್ಮಾಣ ಕಾಮಗಾರಿ ಹಾಗೂ 4.77 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಗರದ ರಾಜಾಪೂರ ಬಳಿಯ ಮುಖ್ಯ ರಸ್ತೆಯ ಸೇಡಂ ರಸ್ತೆಯಿಂದ ರಿಂಗ್ ರಸ್ತೆ ವರೆಗೂ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೂ ಸಹ ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಿದರು. ಬಳಿಕ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದರು.
ಕಲ್ಯಾಣ ಕರ್ನಾಟಕ ಸಂಘದ ಮಾದರಿ!
"ರಾಜ್ಯದ ಇತರೆ ವಿಭಾಗಗಳಲ್ಲಿಯೂ ಇದೇ ಮಾದರಿಯಲ್ಲಿ ಸಂಘ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಲಬುರಗಿಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಪ್ರಗತಿ ಕೇಂದ್ರ ಕಚೇರಿಗೆ ಭೇಟಿ ಕೊಟ್ಟ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ್ದಾರೆ. ಜೊತೆಗೆ ಸಂಘದ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದರೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ನೈತಿಕ ಪಾಠ, ಸೇವಾ ಮನೋಭಾವ ಹಾಗೂ ಸಮುದಾಯ ಬೆಸೆಯುವಂತಹ ಕಾರ್ಯ ಮಾಡುತ್ತಿದೆ. ಮಾನವ ಸಂಪನ್ಮೂಲವನ್ನು ಹೆಚ್ಚಿಸುವಂತಹ ಕಾಯಕವನ್ನು ಸಂಘ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Recommended Video
ಬಸವರಾಜ ಪಾಟೀಲ ಸೇಡಂ ಹೊಗಳಿದ ಸಿಎಂ ಬೊಮ್ಮಾಯಿ!
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ರಚನೆ ಅಗತ್ಯವಾಗಿತ್ತು. ವಿಭಿನ್ನ ಚಿಂತನೆ ಇಟ್ಟುಕೊಂಡು ಸಂಘ ಸ್ಥಾಪಿಸುವ ಮೂಲಕ ಮೊದಲ ಪ್ರಯೋಗ ಮಾಡಲಾಗಿದೆ. ಸಂಘ ಯಶಸ್ವಿಯಾಗುವುದು ಬಹಳಮುಖ್ಯ. ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರದ್ದು ನಿಷ್ಕಲ್ಮಶ, ನಿಸ್ವಾರ್ಥ ಹಾಗೂ ಪರೋಪಕಾರಿ ವ್ಯಕ್ತಿತ್ವ. ಜನರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯುವ ವ್ಯಕ್ತಿ ಇದ್ದರೆ, ಅದು ಇವರು ಮಾತ್ರ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೊಗಳಿದರು.