ಸತ್ಯಸಾಯಿ ಬಾಬಾ ದರ್ಶನ ಪಡೆದ ದಿನ ಮಾಂಸಾಹಾರ ತ್ಯಜಿಸಿದ್ದೆ: ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಆ. 27: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ವಲ್ಪವಾದರೂ ಸಹಾಯ ಮಾಡುವ ಹೃದಯ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ನಿರ್ಮಿಸಿರುವ 300 ಹಾಸಿಗೆಗಳ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆ ಮತ್ತು ಮಕ್ಕಳ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ್ದಾರೆ.
ಸತ್ಯಸಾಯಿ ಗ್ರಾಮದಲ್ಲಿ ಸೇವಾ ಭಾವ ಎದ್ದು ಕಾಣುತ್ತದೆ. ರಾಜ್ಯದ ಸೇವೆಯಲ್ಲಿ ಇಲ್ಲಿ ಕಲಿತದ್ದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಕಣ್ಣಿಗೆ ಕಾಣದ ಭಗವಂತನನ್ನು ಕಾಣುವ ಹಾಗೂ ಅನುಭವಿಸುವ ವಾತಾವರಣ ಸತ್ಯಸಾಯಿ ಗ್ರಾಮದಲ್ಲಿದೆ. ಕಲಿಯುಗದಲ್ಲಿ ಗುರುವಿನ ಮೂಲಕ ಪರಮಾತ್ಮನನ್ನು ಕಾಣಬಹುದು ಎಂದರು.
ಇದೇ ಸಂದರ್ಭದಲ್ಲಿ ತಾವು ಮಾಂಸಾಹಾರ ತ್ಯಜಿಸಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಿಸಿ ಕೊಂಡಿದ್ದಾರೆ. ಅದಕ್ಕೆ ಸತ್ಯಸಾಯಿ ಬಾಬಾ ಅವರೇ ಕಾರಣ ಎಂದೂ ವಿವರಿಸಿದರು. 20 ವರ್ಷಗಳ ಹಿಂದೆ ಸತ್ಯಸಾಯಿ ಬಾಬಾ ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನು ನೆನೆನಸಿಕೊಂಡು ಅಂದು ನಡೆದಿದ್ದ ಸಂಗತಿ ಹಾಗೂ ತಾವು ಬದಲಾಗಿದ್ದನ್ನು ಸಿಎಂ ಬೊಮ್ಮಾಯಿ ವಿವರಿಸಿದ್ದಾರೆ.
ದೈವೀಕ ಪ್ರೇರಣೆಯಿಂದ ದೇಶ ಬಿಟ್ಟು ಬಂದು ಸೇವೆ!
ದೈವೀಕ ಪ್ರೇರಣೆಯಿಂದ ಅಮೇರಿಕಾ, ಆಫ್ರಿಕಾ, ಯೂರೋಪ್ ಹಲವಾರು ವಿದೇಶಗಳಿಂದ ಸತ್ಯಸಾಯಿ ಭಕ್ತರು ತಮ್ಮ ವೃತ್ತಿಯನ್ನು ಬಿಟ್ಟು ಇಲ್ಲಿ ಸೇವೆ ಮಾಡೋಕೆ ಬಂದಿದ್ದಾರೆ. ಈ ಸೇವಾ ಮನೋಭಾವ ಶಕ್ತಿ ಸರ್ವವ್ಯಾಪಿಯಾಗಬೇಕು. ಆಧ್ಯಾತ್ಮಿಕವಾದ ಶಕ್ತಿ ಸದಾ ಸತ್ಯ , ಸರ್ವವ್ಯಾಪಿ, ಸರಳವಾಗಿರುತ್ತದೆ. ಸರಳತೆಯಲ್ಲಿ ದೈವತ್ವವನ್ನು ಕೂಡಿರುವುದೇ ಸೇವೆ ಎಂದರು.
ಮೆಡಿಕಲ್ ಕಾಲೇಜು ಸ್ಥಾಪಿಸಲು ಎಲ್ಲ ಸಹಕಾರ
ಮಧುಸೂದನ ಸ್ವಾಮೀಜಿಯವರ ಇಚ್ಛೆಯಂತೆ ಸಂಸ್ಥೆಯ ವತಿಯಿಂದ ಅಂತರರಾಷ್ಟ್ರೀಯ ಮಟ್ಟದ ಮೆಡಿಕಲ್ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು. ಇಲ್ಲಿ ಆಸ್ಪತ್ರೆ ನಿರ್ಮಾಣವಾದರೆ ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯವಾಗುವುದು. ಅಲ್ಲದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತು ಬೇರೆ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವ್ಯತ್ಯಾಸವಿದೆ. ಈ ವಿದ್ಯಾರ್ಥಿಗಳು ವೈದ್ಯ ವೃತ್ತಿಯನ್ನು ಸೇವೆಯೆಂದು ಸ್ವೀಕರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಅಂದೇ ನಾನು ಮಾಂಸಾಹಾರ ತ್ಯಜಿಸಿದೆನು!
ಇದೇ ಸಂದರ್ಭದಲ್ಲಿ ತಾವು ಮಾಂಸಾಹಾರ ತ್ಯಜಿಸಲು ಸತ್ಯ ಸಾಯಿಬಾಬಾ ಅವರೇ ಕಾರಣೆ ಎಂದು ನೆಪಿಸಿಕೊಂಡಿದ್ದಾರೆ. 'ನಾನು 1998 ರಲ್ಲಿ ಸತ್ಯಸಾಯಿ ಬಾಬಾ ಅವರ ದರ್ಶನ ಪಡೆದಿದ್ದೆ. ಆ ಸಂದರ್ಭದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ತುಲನೆಯ ಕುರಿತ ಪುಸ್ತಕವನ್ನು ಒಬ್ಬರು ಓದುತ್ತಿದ್ದರು. ಅದನ್ನು ನೋಡಿ ಇದರಲ್ಲಿ ಸತ್ಯಸಾಯಿ ಅವರ ಸಂದೇಶವಿದೆ ಎಂದು ಅರಿತುಕೊಂಡು, ಅಂದೇ ಮಾಂಸಾಹಾರ ತ್ಯಜಿಸಿದ್ದೆ' ಎಂದು ಸಿಎಂ ಬೊಮ್ಮಾಯಿ ಹೇಳಿದರು.
Recommended Video
ಸತ್ಯಸಾಯಿ ಬಾಬಾ ನೆನಸಿಕೊಂಡೆ; ತಾಯಿ ಎದ್ದು ಕುಳಿತಿದ್ದರು!
ನನ್ನ ತಾಯಿ ಅತ್ಯಂತ ಕಷ್ಟದಲ್ಲಿದ್ದಾಗ ಅವರನ್ನು ನೆನೆಸಿಕೊಂಡು ಪೂಜೆ ಮಾಡಿದಾಗ ಹೋಟೆಲ್ನಿಂದ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತಾಯಿ ಎದ್ದು ಕುಳಿತಿದ್ದರು. ಹೀಗೆ ನಂಬಿಕೆ ಮತ್ತು ಭಕ್ತಿಯಲ್ಲಿ ದೈವತ್ವ ಇರುತ್ತದೆ. ಭಕ್ತಿ ಅಂದರೆ ಉತ್ಕೃಷ್ಟವಾದ ಪ್ರೀತಿ. ಗುರುವಿನಲ್ಲಿ ಕರಗಿ ನೀರಾಗಿ ಒಂದಾಗಬೇಕು. ನಂಬಿಕೆಯಲ್ಲಿ ಮತ್ತು ಭಕ್ತಿಯಲ್ಲಿ ದೈವತ್ವವಿದೆ. ಭಕ್ತಿ ಎಂದರೆ ಉತ್ಕೃಷ್ಟವಾದ ಕರಾರು ರಹಿತ, ಪ್ರೀತಿ ಎಂದರು.
ಇದನ್ನು ಅರ್ಥ ಮಾಡಿಕೊಂಡವರಿಗೆ ಗುರುವಿನ ಸಂಪೂರ್ಣ ಆಶೀರ್ವಾದ ಹಾಗೂ ದೈವತ್ವದ ರಕ್ಷಣೆ ದೊರೆಯುತ್ತದೆ. ಯಾವುದೇ ಕೆಲಸವಾಗಲೀ ದೈವತ್ವ ಹಾಗೂ ಗುರುವಿನ ಆಶೀರ್ವಾದ ಅಗತ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಶ್ರೀ ಸತ್ಯ ಸಾಯಿ ಸ್ಮಾರಕ ಆಸ್ಪತ್ರೆಯ ಶ್ರೀಸತ್ಯಸಾಯಿ ರಾಜೇಶ್ವರಿ ಸ್ಮಾರಕ ಕಟ್ಟಡಕ್ಕೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದರು.