ಮಾಜಿ ಸಿಎಂ ಯಡಿಯೂರಪ್ಪ ಆಪ್ತರಿಗೆ ಆತಂಕ ತರಲಿದೆಯಾ ಸಿಎಂ ಬೊಮ್ಮಾಯಿ ನಿರ್ಧಾರ?
ಬೆಂಗಳೂರು, ಆ. 10: ರಾಜ್ಯ ನಾಯಕತ್ವ ಬದಲಾವಣೆ, ಬಳಿಕ ಮುಖ್ಯಮಂತ್ರಿ ಬದಲಾಯಿಸಿ ಬಿಜೆಪಿ ಹೈಕಮಾಂಡ್ ಮುಂದಿನ ಚುನಾವಣೆಗಳಿಗೆ ತಯಾರಾಗುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಒಂದೊಂದೆ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಆಯಕಟ್ಟಿನ ಹುದ್ದೆಗಳಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೇಕಾದವರನ್ನು ಬದಲಾವಣೆ ಮಾಡುತ್ತಿದ್ದಾರೆ. ಅದು ಅನಿವಾರ್ಯ ಕೂಡ. ತಮಗೆ ಬೇಕಾದ ಹಾಗೂ ಹೊಂದುವ ಅಧಿಕಾರಿಗಳು ಹಾಗೂ ಇತರರನ್ನು ನೇಮಕ ಮಾಡಿಕೊಳ್ಳುವುದು ಆಯಾ ಮುಖ್ಯಮಂತ್ರಿಗಳ ಪರಮಾಧಿಕಾರ.
ಈಗಷ್ಟೇ ರಾಜ್ಯದಲ್ಲಿ ಹೊಸ ಆಡಳಿತ ಶುರುವಾಗಿದೆ. ಅದರಂತೆ ಆಯಕಟ್ಟಿನ ಹುದ್ದೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಗೆ ಬೇಕಾದವರನ್ನು ಹಾಕಿಕೊಳ್ಳುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇಮಕ ಮಾಡಿಕೊಂಡಿದ್ದ 19 ನೇಮಕಾತಿಗಳನ್ನು ಅಧಿಕಾರದಿಂದ ವಿಮುಕ್ತಗೊಳಿಸಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಮಾಡಿದ್ದರು. ಇದೀಗ ಅದಕ್ಕಿಂತ ಮಹತ್ವದ ನಿರ್ಧಾರವನ್ನು ಸಿಎಂ ಬೊಮ್ಮಾಯಿ ತೆಗೆದುಕೊಳ್ಳಬೇಕಿದೆ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಯಡಿಯೂರಪ್ಪ ಆಪ್ತರ ಭವಿಷ್ಯ ನಿಂತಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಈ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅನಿವಾರ್ಯವಾ? ಮುಂದಿದೆ ಮಾಹಿತಿ!
ಯಡಿಯೂರಪ್ಪ ಮಾಡಿದ್ದ ನೇಮಕಾತಿ ರದ್ದು!
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ನೇಮಕಗೊಂಡವರ ಬದಲಾವಣೆಯ ಪ್ರಕ್ರಿಯೆ ಮುಂದುವರೆದಿದೆ. ಇದೇ ಹಿನ್ನೆಲೆಯಲ್ಲಿ ಶೀಘ್ರವೇ ನಿಗಮ ಮಂಡಳಿ ಅಧ್ಯಕ್ಷರಿಗೂ ಗೇಟ್ ಪಾಸ್ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸಲು ಪಕ್ಷದ ಮಟ್ಟದಲ್ಲಿ ಪ್ರಕ್ರಿಯೆ ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆೆ ಬಂದ ಮೇಲೆ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡು ಎರಡು ವರ್ಷ ಪೂರೈಸಿದವರು ಹಾಗೂ ಸಕ್ರೀಯರಾಗಿ ಕಾರ್ಯ ನಿರ್ವಹಿಸದೇ ಇರುವವರನ್ನು ಬದಲಾಯಿಸಲು ಪಕ್ಷ ತೀರ್ಮಾನಿಸಿದೆ. ಈಗಾಗಲೇ ಬದಲಾವಣೆಯ ಪ್ರಕ್ರಿಯೆ ಕೂಡ ಆರಂಭವಾಗಿದೆ ಎಂಬ ಮಾಹಿತಿ ಸಿಕ್ಕಿದ್ದು, ಮುಂದಿನ ಒಂದು ವಾರದಲ್ಲಿ ಹಳೆಯ ಅಧ್ಯಕ್ಷರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ.
ಎಲ್ಲ ನಿಗಮ-ಮಂಡಳಿಗಳ ನೇಮಕಾತಿ ರದ್ದು?
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಸ್ಥಾನ ವಂಚಿತರಾದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಎರಡು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನ ಮಾಡಲಾಗಿತ್ತು. ಹಾಗೆ ಸಚಿವ ಸ್ಥಾನ ವಂಚಿತರ ಪಟ್ಟಿ ದೊಡ್ಡದಿದ್ದು, ಸುಮಾರು 25 ರಿಂದ 30 ಶಾಸಕರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಜೊತೆಗೆ ಕ್ಯಾಬಿನೆಟ್ ದರ್ಜೆಯೊಂದಿಗೆ ಸಚಿವರ ಸಮಾನಾಂತರ ಸ್ಥಾನಮಾನ ಹೊಂದಿದ್ದಾರೆ. ಹೀಗಾಗಿ ಇವರೆಲ್ಲರನ್ನೂ ರದ್ದು ಮಾಡುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣವೂ ಇದೆ.
ಮಂತ್ರಿಯಾದ ಇಬ್ಬರು ನಿಗಮ ಮಂಡಳಿ ಅಧ್ಯಕ್ಷರು!
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸ ಸಂಪುಟದಲ್ಲಿ ಬಹುತೇಕ ಶಾಸಕರು ತಮಗೆ ಅವಕಾಶ ದೊರೆಯುತ್ತದೆ ಎಂಬ ನಿರೀಕ್ಷೆೆಯಲ್ಲಿದ್ದರು. ಆದರೆ, ಹೆಚ್ಚಾಗಿ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದವರೇ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಮುಂದುವರೆದಿದ್ದಾರೆ. ಅದರಿಂದಾಗಿ ಹೆಚ್ಚಿನ ಹೊಸಬರಿಗೆ ಮಂತ್ರಿಸ್ಥಾನ ಮತ್ತೆ ಮರಿಚಿಕೆಯಾಗಿದೆ. ಪಕ್ಷದಲ್ಲಿನ ಕೇವಲ 6 ಜನ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದ್ದು, ಅವರಲ್ಲಿ ಆರಗ ಜ್ಞಾನೇಂದ್ರ ಹಾಗೂ ಶಂಕರ ಪಾಟೀಲ ಮುನೇನಕೊಪ್ಪ ಈ ಇಬ್ಬರು ಮಾತ್ರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹೊಂದಿದ್ದರು.
ನಿಗಮ ಮಂಡಳಿಗೆ ಕೈ ಹಾಕಿದ್ರೆ ಜೇನುಗೂಡಿಗೆ ಕೈ ಹಾಕಿದಂತೆ!
ಸಚಿವ ಸ್ಥಾನದ ನಿರೀಕ್ಷೆೆಯಲ್ಲಿದ್ದು, ಈಗಲೂ ಅದನ್ನು ಪಡೆಯಲಾಗದ ಅನೇಕ ಶಾಸಕರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಜೊತೆಗೆ ಮಂತ್ರಿನ ಪದವಿ ವಂಚಿತರಾಗಿರುವುದರಿಂದ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಅಂತಹ ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬದಲಾಯಿಸುವುದು ಜೇನುಗೂಡಿಗೆ ಕೈಹಾಕಿದಂತೆ. ಹಾಗೆನಾದರೂ ನಿಗಮ-ಮಂಡಳಿಗಳ ಅಧ್ಯಕ್ಷರ ಬದಲಾವಣೆಗೆ ಸಿಎಂ ಬೊಮ್ಮಾಯಿ ಮುಂದಾದಲ್ಲಿ ಪಕ್ಷದ ನಾಯಕರು ಮತ್ತೊಂದು ಹಂತರ ವಿರೋಧ ಎದುರಿಸುವ ಸಾಧ್ಯತೆ ಪಕ್ಕಾ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರನ್ನು ಬದಲಾಯಿಸುವ ಗೋಜಿಗೆ ಹೋಗದೇ ಅದೇ ಹುದ್ದೆೆಯಲ್ಲಿ ಮುಂದುವರೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯಿದೆ.
Recommended Video
ಶುರುವಾಯ್ತು ಯಡಿಯೂರಪ್ಪ ಆಪ್ತರಿಗೆ ಆತಂಕ!
ಸಚಿವ ಸಂಪುಟದಲ್ಲಿ ಅವಕಾಶ ದೊರೆಯದೇ ಮುನಿಸಿಕೊಂಡಿರುವ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸಿ ಸಮಾಧಾನ ಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ, ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಬೇಕು ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ನಿಗಮ ಮಂಡಳಿಗೆ ನೇಮಕಾತಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿಯಿದೆ.
ಎರಡು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕರ ಜೊತೆಗೆ ಪಕ್ಷದ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದರು. ಆದರೆ ಅವರಲ್ಲಿ ಮೂಲ ಬಿಜೆಪಿ ಕಾರ್ಯಕರ್ತರಿಗಿಂತ ಬಿ.ಎಸ್ ಯಡಿಯೂರಪ್ಪ ಅವರ ಆಪ್ತರೇ ಹೆಚ್ಚಾಗಿದ್ದಾರೆ ಎಂಬ ಆರೋಪಗಳಿವೆ. ಈಗ ಎರಡು ವರ್ಷದ ಅವಧಿ ಲೆಕ್ಕಾಚಾರದಲ್ಲಿ ಅವರೆಲ್ಲರನ್ನೂ ಬದಲಾಯಿಸಲು ಮುಂದಾದರೆ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಸಿಎಂ ಬೊಮ್ಮಾಯಿ ಗುರಿಯಾಗುವ ಸಾಧ್ಯತೆಯಿದೆ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷ ಬದಲಾವಣೆ ಪ್ರಕ್ರಿಯೆಗೆ ಉಂದಾಗಿರುವ ರಾಜ್ಯ ಬಿಜೆಪಿ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಾರೆಯಾಗಿ ಮೊದಲಿನಿಂದಲೂ ರಾಜ್ಯ ಸರ್ಕಾರಕ್ಕೆ ಬಿಳಿಯಾನೆ ಆಗಿರುವ ನಿಗಮ ಮಂಡಳಿಗಳು, ಈಗ ಮತ್ತೊಂದು ಹಂತದ ಬಿಕ್ಕಟ್ಟು ಸೃಷ್ಟಿಸಿದರೂ ಆಶ್ಚರ್ಯವಿಲ್ಲ. ಹೀಗಾಗಿ ಈ ನೇಮಕಾತಿಗಳು ಸರ್ಕಾರದ ಭವಿಷ್ಯದ ಮೇಲೆ ಪರಿಣಾಮ ಬೀರಲೂ ಬಹುದು ಎನ್ನಲಾಗುತ್ತಿದೆ.