ಡಿಜಿಟಲ್ ಓದುಗರಿಗೆ ಭಾರಿ ಭರವಸೆ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!
ಬೆಂಗಳೂರು, ಸೆ. 26: ಬೆಳಗಾವಿಯ ಇ-ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸುತ್ತೇವೆ. ಅದು ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ ಲೈಬ್ರರಿ ತೆರೆಯಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯಲ್ಲಿ ರವೀಂದ್ರ ಕೌಶಿಕ್ ಹೆಸರಿನಲ್ಲಿ ಇ-ಗ್ರಂಥಾಲಯವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ್ದಾರೆ.
ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ. ಜ್ಞಾನ ನೀಡುವುದು ಮತ್ತು ಪಡೆಯುವುದು ಅತ್ಯಗತ್ಯ. ಜ್ಞಾನ ಮತ್ತು ಧ್ಯಾನ ಇವೆರಡು ಬದುಕಿಗೆ ಸಾರ್ಥಕತೆ ಕೊಡುವ, ಅರ್ಥವನ್ನು ಕೊಡುವ, ಪರೋಪಕಾರ ಮಾಡುವ ಗುಣವನ್ನು ಕೊಡುವ ಪ್ರಮುಖ ಮಾರ್ಗವಾಗಿದೆ. ಜ್ಞಾನ ಮತ್ತು ಧ್ಯಾನಗಳನ್ನು ಪಡೆದು ಅದನ್ನು ಸಮಾಜಕ್ಕೆ ಹಂಚಬೇಕು ಎಂಬ ಕೆಲಸವನ್ನು ಗ್ರಂಥಾಲಯ ಮಾಡುತ್ತದೆ ಎಂದು ಸಿಎಂ ಬದವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ವಿವರಿಸಿದರು.
ಜೊತೆಗೆ ಬೆಳಗಾವಿ ಜನರ ಕನ್ನಡಾಭಿಮಾನದ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷವಾಗಿ ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಇಡೀ ಭಾರತವಿದೆ!
"ಬೆಳಗಾವಿ ಕಾಸ್ಮೋಪಾಲಿಟನ್ ನಗರ. ಬೆಳಗಾವಿಯಲ್ಲಿ ಇಡೀ ಭಾರತವನ್ನೇ ಕಾಣಬಹುದು. ಜೊತೆಗೆ ಬೆಳಗಾವಿ ಜನತೆ ಕನ್ನಡ ಮತ್ತು ರಾಷ್ಟ್ರದ ಬಗ್ಗೆ ಅಭಿಮಾನ ಹೊಂದಿದವರು. ಸಂಕುಚಿತ ಭಾವನೆ ಮಾತ್ತು ವಿಚಾರಗಳಿಗೆ ಬೆಳಗಾವಿಯಲ್ಲಿ ಜಾಗ ಇಲ್ಲ ಎಂದು ಇಲ್ಲಿನ ಜನರು ನಿರೂಪಿಸಿದ್ದಾರೆ. ಮಹಾನಗರ ಪಾಲಿಕೆಯ ನೂತನ ಸದಸ್ಯರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಜಾತ್ಯಾತೀತವಾಗಿ, ಭಾಷಾತೀತವಾಗಿ ಜನರು ಆಶೀರ್ವಾದ ಮಾಡಿದ್ದಾರೆ. ಆ ವಿಶ್ವಾಸವನ್ನು ಉಳಿಸಬೇಕು. ಮಹಾನಗರ ಪಾಲಿಕೆ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುಣಮಟ್ಟದ ಕಾಮಗಾರಿ ಆಗಬೇಕು!
ಇದೇ ಸಂದರ್ಭದಲ್ಲಿ ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳ ಅಭಿವೃದ್ಧಿ ಕುರಿತು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. "ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿದೆ. ಜೊತೆಗೆ ನಮ್ಮ ಸರ್ಕಾರ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ. ಬೆಳಗಾವಿ ಕರ್ನಾಟಕದ ಕಿರೀಟಪ್ರಾಯವಾಗಿರುವ ಜಿಲ್ಲೆ. ಹಾಗಾಗಿ ಅದರ ಗೌರವ, ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ನಮ್ಮ ಸರ್ಕಾರದ ಗಮನದಲ್ಲಿರುತ್ತದೆ. ಪಾಲಿಕೆಯ ಎಲ್ಲ ಕೆಲಸ ನಿಗದಿತ ಅವಧಿಯಲ್ಲಿ ಮುಗಿಯಲಿ ಹಾಗೂ ಗುಣಮಟ್ಟದಿಂದ ಕೂಡಿರಲಿ" ಎಂದು ಸಿಎಂ ಬೊಮ್ಮಾಯಿ ಆಶಿಸಿದ್ದಾರೆ.
ಬೆಳಗಾವಿ ಮೊದಲ ಸ್ಥಾನ ಪಡೆಯಲಿ
"ಸ್ಮಾರ್ಟ್ ಸಿಟಿಯಲ್ಲಿ ಬೆಳಗಾವಿ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ. ಬೆಳಗಾವಿ ಮೊದಲ ಸ್ಥಾನ ಪಡೆಯಬೇಕೆನ್ನುವುದು ನಮ್ಮ ಆಶಯ. ಅದಕ್ಕೆ ಪೂರಕವಾಗಿ ಸರ್ಕಾರ ಎಲ್ಲ ಸಹಕಾರ ಕೊಡುತ್ತದೆ. ಅಭಯ್ ಪಾಟೀಲ್ ಮತ್ತು ಅನಿಲ್ ಬೆಣಕೆ ಅಂತಹ ಶಾಸಕರಿದ್ದಾಗ ಬೆಳಗಾವಿ ಮೊದಲ ಸ್ಥಾನ ಪಡೆಯಬೇಕು. ಅವರ ವೇಗಕ್ಕೆ ತಕ್ಕ ಹಾಗೆ ಕೆಲಸ ಮಾಡಲಾಗುವುದು. ಬೆಳಗಾವಿ ಜಿಲ್ಲೆ ನಾಯಕರಿಂದ ಕೂಡಿರುವ ಜಿಲ್ಲೆ. ಶಿಕ್ಷಣ ತಜ್ಞರು, ಕಾರ್ಖಾನೆಗಳ ಮಾಲೀಕರು ಇದ್ದಾರೆ. ಬೆಳಗಾವಿ ನಗರಪಾಲಿಕೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಶಸ್ಸು ಸಿಗಲು ಇಲ್ಲನ ನಾಯಕರು ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ" ಎಂದು ಸಿಎಂ ಬೊಮ್ಮಾಯಿ ವಿವರಿಸಿದ್ದಾರೆ.
Recommended Video
ಡಿಜಿಟಲ್ ಗ್ರಂಥಾಲಯ ಇಂದಿನ ಅಗತ್ಯ!
"ದೇಶಭಕ್ತ ರವೀಂದ್ರ ಕೌಶಿಕ್ ಅವರ ಸಾಹಸಮಯ ಜೀವನ, ಅವರ ನೋವು, ಯಾತನೆ, ಸಹನಾ ಶಕ್ತಿ ಅಪಾರ. ಅವರ ನೆನಪಿನಲ್ಲಿ 2.50 ಕೋಟಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಮಾಡಿರುವುದು ಅತ್ಯಂತ ಯೋಗ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಶಾಸಕ ಅಭಯ್ ಪಾಟೀಲ್ ಅವರೊಂದಿಗಿನ ತಮ್ಮ ಕಳೆದ 15 ವರ್ಷಗಳ ಒಡನಾಟವನ್ನು ಮುಖ್ಯಮಂತ್ರಿ ಬೊಮ್ಮಾಯಿ ಸ್ಮರಿಸಿದರು. 2004 ರಲ್ಲಿ ಗ್ರಾಮವೊಂದರ ವಿಶೇಷವಾಗಿ ಅಭಿವೃದ್ಧಿ ಮಾಡಿ, ಜನರ ಸಹಭಾಗಿತ್ವದಲ್ಲಿ ಎಲ್ಲ ಸವಲತ್ತುಗಳನ್ನು ಒದಗಿಸಿದ್ದರು ಎಂದು ಸಿಎಂ ಬೊಮ್ಮಾಯಿ ನೆನಪಿಸಿಕೊಂಡರು.