ನಾನೂ ಶಾಲೆಗೆ ಹೋಗುತ್ತೇನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆ. 22: ಕಳೆದ ಎರಡು ವರ್ಷಗಳಿಂದ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಕೊರೊನಾ ವೈರಸ್ ಶೈಕ್ಷಣಿಕ ಕ್ಷೇತ್ರದ ಮೇಲೆ ದೊಡ್ಡ ದಾಳಿಯನ್ನೇ ಮಾಡಿದೆ. ಒಂದೆಡೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರೂ, ಮಕ್ಕಳ ಭವಿಷ್ಯದ ಚಿಂತೆ ಬಹುತೇಕ ಎಲ್ಲ ಪೋಷಕರಿಗಿದೆ. ಹೀಗಾಗಿ ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆಯೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ತಯಾರಾಗುತ್ತಿದ್ದಾರೆ.
ನಾಳೆ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿವೆ. ಮೊದಲ ಹಂತದಲ್ಲಿ 9ನೇ ತರಗತಿಯಿಂದ 12ನೇ ತರಗತಿವರೆಗೆ ಶಾಲೆ ಆರಂಭಿಸಲು ಸರ್ಕಾರ ತೀರ್ಮಾನ ಮಾಡಿದೆ. ಕೊರೊನಾ ಮೂರನೇ ಅಲೆ ಆತಂಕದ ನಡೆವಯೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶಾಲೆಗಳನ್ನು ಆರಂಭಿಸಲು ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಆದರೂ ಕೂಡ ಕೊರೊನಾ ಆತಂಕ ಮಕ್ಕಳ ಪೋಷಕರನ್ನು ಕಾಡುತ್ತಿದೆ. ಇದೇ ವೇಳೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪೋಷಕರು ಹಾಗೂ ಮಕ್ಕಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ನಾನೂ ಶಾಲೆಗೆ ಹೋಗುತ್ತೇನೆ ಎಂದು ಹೇಳುವ ಮೂಲಕ ಮಕ್ಕಳಲ್ಲಿ ಕೊರೊನಾ ಭಯ ಹೋಗಲಾಡಿಸುವ ಪ್ರಯತ್ನವನ್ನು ಸಿಎಂ ಮಾಡಿದ್ದಾರೆ.
ಕೊರೊನಾ ಬಗ್ಗೆ ಆತಂಕ ಬೇಡ!
ಆಗಸ್ಟ್ 23 ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಕ್ಕಳಲ್ಲಿ ಧೈರ್ಯ ತುಂಬಿದ್ದಾರೆ. ಶಾಲೆ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರ ಅನುಮತಿ, ಕೋವಿಡ್ ಸುರಕ್ಷತೆಯೊಂದಿಗೆ ಶಾಲೆಗಳಲ್ಲಿ ಕಲಿಕೆ, ಶಾಲೆಗಳನ್ನು ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಪರ್ಯಾಯ ದಿನಗಳಲ್ಲಿ ಅಥವಾ ಬೇರೆ ಬೇರೆ ವೇಳೆಯಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ಮತ್ತೊಂದು ಮಹತ್ವದ ಮಾತಾಡಿದ್ದಾರೆ.
ಆಗಸ್ಟ್ 23 ರಿಂದ ಹೈಸ್ಕೂಲ್ ಓಪನ್: ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ
ನಾನೂ ಶಾಲೆಗೆ ಹೋಗುತ್ತೇನೆ: ಸಿಎಂ ಬೊಮ್ಮಾಯಿ
ಆಗಸ್ಟ್ 23 ರಂದು ಬೆಳಿಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಜೊತೆಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಲೆಗಳನ್ನು ಪ್ರಾರಂಭಿಸುವಲ್ಲಿ ಅತ್ಯಂತ ಕಾಳಜಿಯನ್ನು ವಹಿಸಲಾಗುವುದು. ಮಕ್ಕಳು ಶಾಲೆಗೆ ಬರಬೇಕು, ಕಲಿಕೆ ಆಗಬೇಕು. ಅದರ ಜೊತೆಗೆ ಕೋವಿಡ್ ಸುರಕ್ಷತೆಯೂ ಆಗಬೇಕು. ಪಾಲಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲೆಗೆ ಆಗಮಿಸುವ ಮಕ್ಕಳಿಗೆ ಧೈರ್ಯ ತುಂಬಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಶಾಲೆಗಳಲ್ಲಿ ಹಂತಹಂತವಾಗಿ ಮಕ್ಕಳ ಹಾಜರಾತಿ ಹೆಚ್ಚಬೇಕು ಎಂದು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಇದೇ ವೇಳೆಯಲ್ಲಿ ಶಾಲೆ ಆರಂಭಕ್ಕೆ ಬೆಂಗಳೂರಿನಲ್ಲಿ ಮಾಡಿಕೊಂಡಿರುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶಾಲೆ ಆರಂಭಿಸಲು ತಯಾರಿ!
ವಿಧಾನಸೌಧದಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್, "ಆ. 23ರಿಂದ ಶಾಲೆ ತೆರೆಯಲು ಶಿಕ್ಷಣ ಸಚಿವರು ಆದೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಪೊರೇಷನ್ ಶಾಲೆ, ಸರ್ಕಾರಿ ಶಾಲೆಗಳನ್ನು ಆರಂಭಿಸಬೇಕು. ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕು ಎಂಬ ನಿರ್ಧಾರ ಆಗಿದೆ. ಶಾಲೆಯಿಂದ ಕೋವಿಡ್ ಹರಡುವಂತಾಗಬಾರದು, ಅದಕ್ಕಾಗಿ ತರಗತಿಯಲ್ಲಿ ಹೆಚ್ಚು ಮಕ್ಕಳಿರಬಾರದು. ಮಾರ್ಗಸೂಚಿ ಪಾಲಿಸಲು ಆದೇಶ ಹೊರಡಿಸಲಾಗಿದೆ. ಜೊತೆಗೆ ಶೀಘ್ರ 7 ಮತ್ತು 8ನೇ ತರಗತಿ ಕೂಡ ತೆರೆಯುವಂತಾಗಬೇಕು ಎಂದು ಅಶೋಕ್ ಹೇಳಿದ್ದಾರೆ.
ಬೋಧಕರೂ ಕಲಿಯಬೇಕು, ಅವರ ಸಾಮರ್ಥ್ಯದ ಬಗ್ಗೆಯೂ ನೂತನ ಶಿಕ್ಷಣ ನೀತಿಯಲ್ಲಿ ನಿಗಾ!
ಜೀವ ಉಳಿಸಿಕೊಳ್ಳುವುದಷ್ಟೇ ಅಲ್ಲ, ಜೀವನವೂ ನಡೆಯಬೇಕಿದೆ!
ಕೊರೊನಾ ವೈರಸ್ ಸೋಂಕು ಮೊದಲು ಹರಡಿದಾಗ ಮೊದಲು ಜೀವ, ಆಮೇಲೆ ಜೀವನ ಎಂಬುದನ್ನು ಸರ್ಕಾರ ಹೇಳುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಕೊರೊನಾದೊಂದಿಗೆ ಜೀವನ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗೆ ಕಳುಹಿಸಲು ಪೋಷಕರು ಒಪ್ಪಿದ್ದಾರೆ. ಹೀಗಾಗಿ ಶಾಲೆಗಳು ಪಾಳೆಯದ ಆಧಾರದಲ್ಲಿ ನಾಳೆಯಿಂದಲೇ ಆರಂಭವಾಗಲಿದೆ. ಆಮೇಲೆ 7 ಹಾಗೂ 8ನೇ ತರಗತಿಯ ಮಕ್ಕಳಿಗೂ ತರಗತಿ ಆರಂಭಿಸಲು ಸರ್ಕಾರ ತೀರ್ಮಾನ ಮಾಡುವ ಸಾಧ್ಯತೆಗಳಿವೆ. ಒಟ್ಟಾರೆ ಕಳೆದ ಒಂದೂವರೆ ವರ್ಷಗಳಿಂದ ಬಂದ್ ಆಗಿದ್ದ ಶಾಲೆಗಳಿಗೆ ಹೋಗಲು ವಿದ್ಯಾರ್ಥಿಗಳೂ ಉತ್ಸುಕರಾಗಿದ್ದಾರೆ.