ಸಿಎಂ ಬೊಮ್ಮಾಯಿಯಿಂದ ಮೋದಿ ವೇದಿಕೆಯ ಭರ್ಜರಿ ಸದ್ಬಳಕೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಎರಡು ದಿನಗಳ ಕರ್ನಾಟಕ ಪ್ರವಾಸವನ್ನು ಮುಗಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಮೋದಿಯವರ ಕರ್ನಾಟಕದ ಕಾರ್ಯಕ್ರಮ ಹಲವು ಕಾರಣಗಳಿಗೆ ರಾಜ್ಯ ಬಿಜೆಪಿಗೂ ಪ್ರಮುಖವಾಗಿತ್ತು.
ಸೋಮವಾರ (ಜೂನ್ 20) ಬೆಳಗ್ಗೆ ಯಲಹಂಕ ಏರ್ಬೇಸಿಗೆ ಬಂದಾಗಿನಿಂದ ಮೋದಿಯವರನ್ನು ಬಿಟ್ಟು ಕದಲದ ಮುಖ್ಯಮಂತ್ರಿ ಬೊಮ್ಮಾಯಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ರಾಜ್ಯಕ್ಕೆ ಬಂದಾಗ ಪ್ರಧಾನಿ ಜೊತೆಗೆ ಇರುವುದು ಮುಖ್ಯಮಂತ್ರಿಗಳ ಶಿಷ್ಟಾಚಾರದ ಭಾಗವಾಗಿದ್ದರೂ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬೊಮ್ಮಾಯಿ ಯಶಸ್ವಿಯಾದರು.
ಬೆಂಗಳೂರು ಟ್ರಾಫಿಕ್ ಸಮಸ್ಯೆ; ಮೋದಿ ಕೊಟ್ಟ ಗಡುವು ಏನು?
ಸಾಲುಸಾಲು ಕಾರ್ಯಕ್ರಮಗಳಲ್ಲಿ ಮೋದಿ ಜೊತೆಗೆ ಭಾಗವಹಿಸಿದ ಬೊಮ್ಮಾಯಿ, ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಯವೈಖರಿಯನ್ನು ಸಭಿಕರ ಮುಂದೆ ಇಡುವಲ್ಲಿ ಯಶಸ್ವಿಯಾದರು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಚುನಾವಣಾ ವರ್ಷವೂ ಆಗಿರುವುದರಿಂದ ಪ್ರಧಾನಿ ಮೋದಿ ಭೇಟಿಗೆ ರಾಜ್ಯದಲ್ಲಿ ವಿಶೇಷ ಮಹತ್ವವಿತ್ತು. ಬಿಜೆಪಿಗೆ ಇದೊಂದು ಬೂಸ್ಟರ್ ಆಗುವ ಸಾಧ್ಯತೆ ಇದ್ದಿದ್ದರಿಂದ, ಮುಖ್ಯಮಂತ್ರಿ ಬೊಮ್ಮಾಯಿ ಪ್ರಧಾನಿ ಕಾರ್ಯಕ್ರಮಕ್ಕೆ ತುಸು ಹೆಚ್ಚೇ ಕಾಳಜಿಯನ್ನು ವಹಿಸಿದ್ದರು.
ಪಕ್ಷದ ಆಂತರಿಕ ಭಾಗವಾಗಿಯೂ ಸಿಎಂ ಬೊಮ್ಮಾಯಿಗೆ ಪ್ರಮುಖ
ಮೋದಿ ಕಾರ್ಯಕ್ರಮವನ್ನು ಚೆನ್ನಾಗಿ ಬಳಸಿಕೊಳ್ಳುವುದು ಆಡಳಿತಾತ್ಮಕವಾಗಿ ಮತ್ತು ಪಕ್ಷದ ಆಂತರಿಕ ಭಾಗವಾಗಿಯೂ ಸಿಎಂ ಬೊಮ್ಮಾಯಿಗೆ ಪ್ರಮುಖವಾಗಿತ್ತು. ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಪಕ್ಷದೊಳಗೆ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದ್ದರಿಂದ ಇದಕ್ಕೊಂದು ಫುಲ್ ಸ್ಟಾಪ್ ಬೀಳುವುದು ಬಿಜೆಪಿಯ ವರಿಷ್ಠರಿಗೆ ಮತ್ತು ಖುದ್ದು ಬೊಮ್ಮಾಯಿಗೂ ಮುಖ್ಯವಾಗಿತ್ತು. ಅದನ್ನು ಸಾಧಿಸುವಲ್ಲಿ ಪ್ರಧಾನಿ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ಹೇಳಬಹುದಾಗಿದೆ.
ನಾಯಕತ್ವ ಬದಲಾವಣೆ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಪ್ರಧಾನಿ ಸಾರಿದರು
ಬೆಂಗಳೂರಿನ ಕೊಮ್ಮಗಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಪ್ರಧಾನಿ ಸಾರಿದರು ಕೂಡಾ. ರಾಜ್ಯದ ಅಭಿವೃದ್ದಿಗೆ ಜೊತೆಯಾಗಿ ಮುನ್ನಡೆಯೋಣ ಎಂದು ಪ್ರಧಾನಿ ತಮ್ಮ ಭಾಷಣದ ವೇಳೆ ಹೇಳಿದ್ದರು. ಇನ್ನೊಂದು ಕಡೆ ಪ್ರಧಾನಿಯವರನ್ನು ಬೊಮ್ಮಾಯಿ ತಮ್ಮ ಭಾಷಣದ ವೇಳೆ ಹೊಗಳುತ್ತಾ, ಅವರ ಮಹತ್ವಾಕಾಂಕ್ಷೆಯ ಬಗ್ಗೆ ಸಭೆಯಲ್ಲಿ ವಿಶೇಷವಾಗಿ ವಿವರಿಸಿದರು.
ನಿಮ್ಮ ಆಶೀರ್ವಾದಲ್ಲಿ ವಿಶೇಷ ಶಕ್ತಿಯಿದೆ ಎಂದ ಸಿಎಂ ಬೊಮ್ಮಾಯಿ
"ನವ ಕರ್ನಾಟಕ ನಿರ್ಮಾಣಕ್ಕೆ ನಿಮ್ಮ ಆಶೀರ್ವಾದ ನಮಗೆ ಬೇಕಿದೆ, ನಿಮ್ಮ ಆಶೀರ್ವಾದಲ್ಲಿ ವಿಶೇಷ ಶಕ್ತಿಯಿದೆ"ಎಂದು ಸಿಎಂ ಬೊಮ್ಮಾಯಿ ತುಂಬಿದ ಸಭೆಯಲ್ಲಿ ಹೇಳುವ ಮೂಲಕ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡರು, ಜೊತೆಗೆ, ಪ್ರಧಾನಿಯವರ ಗಮನವನ್ನೂ ತಮ್ಮತ್ತ ಸೆಳೆದುಕೊಂಡರು. ಇದರ ಜೊತೆಗೆ, ಮೋದಿಯವರ ಕನಸಿನ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಬಗ್ಗೆಯೂ ಪ್ರಸ್ತಾವಿಸಿದರು.
ಸಿಎಂ ಬೊಮ್ಮಾಯಿಯಿಂದ ಮೋದಿ ವೇದಿಕೆಯ ಭರ್ಜರಿ ಸದ್ಬಳಕೆ
ಇದನ್ನೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡಿದ್ದ ಮೋದಿಯವರು ತಮ್ಮ ಭಾಷಣದ ವೇಳೆ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯವನ್ನು ಬಲಿಷ್ಠವಾಗಿ ಮುನ್ನಡೆಸಲು ನಮ್ಮ ಸಹಕಾರವಿದ್ದೇ ಇದೆ ಎಂದು ಹೇಳಿದರು. ಒಟ್ಟಿನಲ್ಲಿ, ಬೊಮ್ಮಾಯಿ ಬದಲಾಗಲಿದ್ದಾರೆ ಎನ್ನುವ ಗುಸುಗುಸು ಸುದ್ದಿಗೆ ಪ್ರಧಾನಿಯವರ ಕರ್ನಾಟಕ ಪ್ರವಾಸ ಒಂದು ಹಂತಕ್ಕೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದೆ. ಇದು, ಬೊಮ್ಮಾಯಿ ವಿರೋಧಿಗಳಿಗೂ ಸಂದೇಶ ರವಾನಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ ಕೂಡಾ..
Recommended Video